ವೇಣೂರು: ತಂದೆ ತಾಯಿಯೆಂದರೆ ಸತ್ಯ ಮತ್ತು ಧರ್ಮವಿದ್ದಂತೆ. ಅವರೇ ಪ್ರತ್ಯಕ್ಷ ದೇವರು, ಇದು ತುಳುಧರ್ಮ ಸಾರ. ನಮ್ಮ ಭಾಷೆ, ಬದುಕು, ಮೂಲ, ಸಂಸ್ಕೃತಿ ಇವೆಲ್ಲವೂ ನಮ್ಮ ಮಣ್ಣಿನಿಂದ ಬಂದಿದೆ. ನೋವು ನಲಿವು, ಆಸೆ, ಹಸಿವು, ಬೆವರು, ನಗು, ನಲಿಕೆ ಇವೆಲ್ಲ ಸೇರಿ ತುಳು ಧರ್ಮ ಆಗಿದೆ. ಮಕ್ಕಳಿಗೆ ಸ್ವತಂತ್ರ ಮತ್ತು ಸ್ವಾಭಿಮಾನ ಬದುಕು ಕಲಿಸುವ ಧರ್ಮವೇ ತುಳು ಧರ್ಮ ಎಂದು ಖ್ಯಾತ ತುಳು ವಿದ್ಯಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಹೇಳಿದರು.
ಇತಿಹಾಸ ಪ್ರಸಿದ್ಧ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದಲ್ಲಿ ರವಿವಾರ ಜರಗಿದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ತುಳು ಧರ್ಮ ವಿಚಾರದ ಬಗ್ಗೆ ಉಪನ್ಯಾಸ ನೀಡಿ, ಇಂದು ಹಿರಿಯರ ಜತೆ ನಮ್ಮ ಬದುಕು ಕಡಿಮೆಯಾಗಿದೆ. ಕೂಡು ಕುಟುಂಬ ಮಾಯವಾಗಿದೆ. ಇದು ಸರಿಯಲ್ಲ. ಹಿರಿಯರ ಶ್ರಮ ಬದುಕಿಗೆ ಬೆಲೆ ನೀಡಿ ಒಟ್ಟಿಗೆ ಜೀವಿಸಿದಾಗ ತುಳುಧರ್ಮ ಕಾಪಾಡಿಕೊಂಡು ಬಂದಂತಾಗುತ್ತದೆ ಎಂದರು.
ಕರಂಬಾರು ಕೊಲ್ಲಿ ಶ್ರೀ ಈಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧೀಶ್ ಬಿ. ಹೆಗ್ಡೆ, ಅಳದಂಗಡಿ ಗ್ರಾ.ಪಂ. ಅಧ್ಯಕ್ಷೆ ಸೌಮ್ಯ ಹರಿಪ್ರಸಾದ್, ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಆಶಾಲತಾ, ಬ್ರಹ್ಮಕಲಶ ಸಮಿತಿ ಪದಾಧಿಕಾರಿಗಳಾದ ನಿವೃತ್ತ ಶಿಕ್ಷಕ ರಮೇಶ್ ಗೌಡ, ಹರೀಶ್ ಕುಲಾಲ್, ಪ್ರಕಾಶ್ ಭಟ್, ಅರವಿಂದ ಶೆಟ್ಟಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಂದರ ಹೆಗ್ಡೆ ಸ್ವಾಗತಿಸಿ, ಅರುಣ್ ಕೋಟ್ಯಾನ್ ನಿರೂಪಿಸಿದರು. ಭರತ್ರಾಜ್ ಅಮೈ ವಂದಿಸಿದರು.
ಫೆ. ೨೭ರಂದು ಬೆಳಿಗ್ಗೆ ೧೦೮ ಕಾಯಿ ಗಣಪತಿ ಹೋಮ ನಡೆಯಲಿದೆ. ೮.೨೭ರಿಂದ ಮೀನ ಲಗ್ನಸುಮೂಹೂರ್ತದಲ್ಲಿ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ನ್ಯಾಸಗಳು ಜರಗಲಿದೆ.
ಸಂಜೆ ದೊಡ್ಡರಂಗಪೂಜೆ, ಉತ್ಸವ, ಮಹಾರಥೋತ್ಸವ ಜರಗಲಿದೆ. ಸಂಜೆ ೭ರಿಂದ ನಡೆಯಲಿರುವ ಧಾರ್ಮಿಕಸಭೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಶುಭಾಶಂಸನೆಗೈಯ್ಯಲಿದ್ದಾರೆ.
ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಯೋಗಿ ಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದರಚೆನ್ನಯ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಬರೋಡಾ ತುಳುಕೂಟದ ಶಶಿಧರ ಶೆಟ್ಟಿ ಬರೋಡಾ ಅಧ್ಯಕ್ಷತೆ ವಹಿಸಲಿದ್ದಾರೆ.
ಬ್ರಹ್ಮಕಲಶ ಸಮಿತಿ ಅಧ್ಯಕ್ಷ, ಶಾಸಕ ಹರೀಶ್ ಪೂಂಜ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಶ್ರೀ ಕ್ಷೇತ್ರ ಕಟೀಲಿನ ಹರಿನಾರಾಯಣ ಅಸ್ರಣ್ಣರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದು, ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ತೆರೆ ಬೀಳಲಿದೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಪರಾಹ್ನ ೧ ರಿಂದ ಸಂಗೀತ ಕಚೇರಿ, ೫ರಿಂದ ಸುಗಮ ಸಂಗೀತ, ಭಕ್ತಿ ರಸಮಂಜರಿ, ರಾತ್ರಿ ೯.೩೦ರಿಂದ ಕುದ್ರೋಳಿ ಗಣೇಶ್ ಅವರಿಂದ ವಿನೂತನ ಜಾದು ಪ್ರದರ್ಶನ ನಡೆಯಲಿದೆ. ಯಕ್ಷವೇದಿಕೆಯಲ್ಲಿ ಸಂಜೆ ೭ರಿಂದ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಜರಗಲಿದೆ.