ಮೈಸೂರು: ಮೇಯಲು ಬಿಟ್ಟಿದ್ದ ಸಾಕಾನೆ ಮತ್ತು ದಸರಾದಲ್ಲಿ ಈ ಹಿಂದೆ ಅಂಬಾರಿ ಹೊತ್ತಿದ್ದ ಬಲರಾಮನ ಕಾಲಿಗೆ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿದ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹುಣಸೂರು ವನ್ಯಜೀವಿ ವಲಯದ ಆನೆ ಚೌಕೂರು ಭಾಗದಲ್ಲಿ ನಡೆದಿದೆ. ಅದೃಷ್ಟವಶಾತ್ ಆನೆ ಪ್ರಾಣಾಪಾಯದಿಂದ ಪಾರಾಗಿದೆ.
ಅಳಲೂರು ಗ್ರಾಮದ ನಿವಾಸಿ ಅಚ್ಚಪ್ಪ ಎಂಬುವರ ಪುತ್ರ ಸುರೇಶ ಗುಂಡು ಹಾರಿಸಿದ ಆರೋಪಿಯಾಗಿದ್ದು, ಈತನನ್ನು ಕೋವಿಸಹಿತ ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ. ಎಂದಿನಂತೆ ಭೀಮನಕಟ್ಟೆ ಸಾಕಾನ ಶಿಬಿರದಲ್ಲಿದ್ದ ಬಲರಾಮನನ್ನು ಡಿ.15ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹುಣಸೂರು ವನ್ಯಜೀವಿ ವಲಯದ ವ್ಯಾಪ್ತಿಗೆ ಬರುವ ಆನೆ ಚೌಕರು ಭಾಗದಲ್ಲಿ ಮೇಯಲು ಬಿಡಲಾಗಿತ್ತು. ರಾತ್ರಿ ವೇಳೆ ಅಳಲೂರು ವ್ಯಾಪ್ತಿಗೆ ತೆರಳಿದ ಬಲರಾಮನ ಕಾಲಿಗೆ ಸುರೇಶ್ ತನ್ನ ಒಂಟಿ ನಳಿಕೆ ಕೋವಿಯಿಂದ ಗುಂಡು ಹಾರಿಸಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ವನ್ಯಜೀವಿ ವೈದ್ಯಕೀಯ ಅಧಿಕಾರಿಗಳಾದ ಡಾ. ರಮೇಶ್ ರವರ ತಂಡ ಸ್ಥಳಕ್ಕೆ ಭೇಟಿ ನೀಡಿ ಚಿಕಿತ್ಸೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಸುರೇಶ ನನ್ನು ಬಂಧಿಸಿ ಆತ ಕೃತ್ಯಕ್ಕೆ ಬಳಸಿದ ಒಂಟಿ ನಳಿಕೆ ಕೋವಿಯನ್ನು ಹಾಗೂ ಬಳಸಿದ ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ರೀತ್ಯಾ WLOR Nal, 222-23 ರಂತೆ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.