ಮೈಸೂರು: ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸದಸ್ಯತ್ವ ಅಭಿಯಾನಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಜನರ ಆರೋಗ್ಯ ರಕ್ಷಣೆ ಮತ್ತು ಕಳಪೆ ನಕಲಿ ಪದಾರ್ಥಗಳ ಮಾರಾಟವನ್ನು ತಡೆಗಟ್ಟಲು ಗ್ರಾಹಕರಲ್ಲಿ ಜಾಗೃತಿ ಅಗತ್ಯವಾಗಿದೆ. ಗ್ರಾಹಕರ ಧ್ವನಿಯಾಗಿ ಗ್ರಾಹಕ ಪಂಚಾಯತ್ ನೊಂದ ಗ್ರಾಹಕರ ಪರವಾಗಿ ಹೋರಾಟ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯವಾದುದು. ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ವಹಿವಾಟಿನಲ್ಲಿ ಗ್ರಾಹಕರನ್ನು ನಂಬಿಸಿ ಮೋಸ ಮಾಡುವ ಪ್ರಕರಣಗಳನ್ನು ಹೆಚ್ಚಾಗುತ್ತಿದ್ದು ಗ್ರಾಹಕರು ಜಾಗೃತರಾಗಿರಬೇಕೆಂದರು.
ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮಾತನಾಡಿ ಮಗುವಿಗೆ ಆರೈಕೆ ಸಂದರ್ಭದಲ್ಲಿ ಹಾಲಿನ ಪದಾರ್ಥ ಅವಶ್ಯಕವಿರುತ್ತದೆ. ಹುಟ್ಟಿದ ಮಗುವಿನಿಂದ ಅರಮನೆಯ ರಾಜರು ರಾಷ್ಟ್ರಪತಿಗಳವರೆಗೂ ತಮಗೆ ಬೇಕಾದ ದಿನನಿತ್ಯ ಆಹಾರ ಪದಾರ್ಥಗಳು, ಬಟ್ಟೆ, ಎಲೆಕ್ಟ್ರಾನಿಕ್ ಯಂತ್ರೋಪಕರಣ ವರೆಗೂ ಖರೀದಿ ಮಾಡುವ ಸಾಮಾನ್ಯ ವ್ಯಕ್ತಿಯೂ ಗ್ರಾಹಕನೇ, ಮಾರುಕಟ್ಟೆ ಅಂಗಡಿಗಳಲ್ಲಿ ಗ್ರಾಹಕನು ತಾನು ನೀಡಿದ ಹಣಕ್ಕೆ ಕಳಪೆ ಉತ್ಪನ್ನಗಳಿಂದ ಮೋಸವಾದಾಗ, ವ್ಯಾಪಾರದಲ್ಲಿ ವಂಚನೆಯಾದಾಗ ನೊಂದ ಗ್ರಾಹಕರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಳೆದ 48 ವರ್ಷಗಳಿಂದ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಕೆಲಸ ಮಾಡಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಮಾತನಾಡಿ ಪ್ರತಿಯೊಬ್ಬರ ಜೀವನಕ್ಕೆ ಅವಶ್ಯಕವಾಗಿರುವ ಜನನ-ಮರಣ ನೋಂದಣಿ ಕಾಯ್ದೆ, ಗ್ರಾಹಕರ ಹಿತರಕ್ಷಣಾ ಕಾಯ್ದೆ, ಮೋಟಾರ ವಾಹನ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಜೀವನಾಂಶ ಕಾಯ್ದೆ ಇವುಗಳ ಬಗ್ಗೆ ಜ್ಞಾನ ಹೊಂದಿರಬೇಕು. ಗ್ರಾಹಕರ ಸೇವಾ ಕಾಯ್ದೆ ಅಡಿಯಲ್ಲಿ ಯಾವುದೇ ಗ್ರಾಹಕರು ತೊಂದರೆಗೆ ಒಳಗಾದರೆ ಎರಡು ವರ್ಷದ ಒಳಗಾಗಿ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.
ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಅಧ್ಯಕ್ಷರಾದ ರವಿಶಂಕರ್ ಮಾತನಾಡಿ ಗ್ರಾಹಕರಿಗೆ ಸಮಾಜದಲ್ಲಿ ಅನ್ಯಾಯ ಆದಲ್ಲಿ ಇಂತಹ ಸಂಘಟನೆಗಳಿಗೆ ಜೊತೆಗೂಡಿ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಬೇಕು. ನಮ್ಮ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮುಂದಿನ ದಿನಗಳಲ್ಲಿ ಮೈಸೂರು ನಗರದ ಪ್ರಮುಖ ಸ್ಥಳಗಳಲ್ಲಿ ಗ್ರಾಹಕರ ವಿವಿಧ ವಲಯಗಳ ಬಗ್ಗೆ ಜಾಗೃತಿ ಹಾಗೂ ಗ್ರಾಹಕರ ಸದಸ್ಯತ್ವವನ್ನು ಮಾಡಲು ಮುಂದಾಗುತ್ತೇವೆ. ತಿಂಗಳಿಗೊಮ್ಮೆ ಗ್ರಾಹಕರ ಹಿತ ಚಿಂತನಾ ಸಭೆಯನ್ನು ಸಹ ನಡೆಸುತ್ತೇವೆ ದಯಮಾಡಿ ಗ್ರಾಹಕರೇ ಈ ಕೂಡಲೇ ನಮ್ಮ ಸಂಘಟನೆಯ ಸದಸ್ಯತ್ವ ಪಡೆಯಿರಿ. ವ್ಯಾಪಾರಸ್ಥರಿಂದ ಗ್ರಾಹಕರಿಗೆ ಏನಾದರೂ ಸಮಸ್ಯೆಗಳು ಕಂಡಲ್ಲಿ 9141350079/9880752727 ಈ ದೂರವಾಣಿ ಸಂಖ್ಯೆ ಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಮೊದಲ ದಿನವೇ ಗ್ರಾಹಕ ಪಂಚಾಯಿತಿಗೆ 100ಕ್ಕೂ ಹೆಚ್ಚು ಸ್ವಯಂ ಪ್ರೇರಿತವಾಗಿ ಕ್ಯೂಆರ್ ಕೋಡ್ ಬಳಸಿ ಗ್ರಾಹಕರು ಸದಸ್ಯರಾದರು. ಅಭಿಯಾನದಲ್ಲಿ ಪರಮಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ, ನಗರ ಪಾಲಿಕಾ ಸದಸ್ಯರಾದ ಪ್ರಮೀಳಾ ಭರತ್, ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಅಪೂರ್ವ ಸುರೇಶ್, ಕೆ.ಆರ್.ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ,ರಾಜಣ್ಣ, ಸಚಿನ್, ವಿಘ್ನೇಶ್ವರ ಭಟ್, ಸುದರ್ಶನ್, ಸುರೇಶ್ ಗೋಲ್ಡ್, ಚರಣ್, ಶ್ರೀನಿವಾಸ್, ಮಂಜುನಾಥ್, ಮಧು ಎನ್ ಪೂಜಾರ್, ಜಗದೀಶ್, ಸುಚೀಂದ್ರ, ಚಕ್ರಪಾಣಿ, ಆನಂದ್ ಇನ್ನಿತರರು ಭಾಗಿಯಾಗಿದ್ದರು.