ಮೈಸೂರು: ಆಯುಧ ಪೂಜೆ ಮತ್ತು ವಿಜಯ ದಶಮಿ ಹಬ್ಬದ ಹಿನ್ನಲೆಯಲ್ಲಿ ಹೂವು ಹಣ್ಣು ಸೇರಿದಂತೆ ಪೂಜಾ ಸಾಮಗ್ರಿ ಬೆಲೆ ಗಗನಕ್ಕೇರಿದ್ದು, ಬೆಲೆ ಏರಿಕೆ ಬಿಸಿಯ ನಡೆವೆಯೂ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ.
ನಗರದ ಪ್ರಮುಖ ಮಾರುಕಟ್ಟೆಗಳು, ವೃತ್ತ ಮತ್ತು ರಸ್ತೆ ಬದಿಗಳಲ್ಲಿ ವ್ಯಾಪಾರಸ್ಥರು ವ್ಯಾಪಾರ ನಡೆಸುತ್ತಿದ್ದು. ಹೂ ಮತ್ತು ತರಕಾರಿಗಳ ಬೆಲೆ ದ್ವಿಗುಣವಾಗಿ ಜನರ ಕೈ ಸುಡುತ್ತಿದೆ. ಎರಡು ಮೂರು ದಿನದ ಹಿಂದೆ 60-80 ರೂ.ಗೆ ದೊರೆಯುತ್ತಿದ್ದ ಒಂದು ಮಾರು ಸೇವಂತಿ ಇದೀಗ 120-150ಕ್ಕೇರಿದೆ.
ಹೂವಿನ ಗುಣಮಟ್ಟ, ಬಣ್ಣ ಮತ್ತು ಆಕಾರದ ಮೇಲೆ ಬೆಲೆ ನಿಗದಿ ಮಾಡಲಾಗಿತ್ತು. ಇನ್ನು ಒಂದು ಮೀಟರ್ ಮಲ್ಲಿಗೆ 200 ರೂ., ಕನಕಂಬಾರ 250 ರೂ. ಗೆ ಬಿಕರಿಯಾಯಿತು. ಇವು ಸೇರಿದಂತೆ ಗುಲಾಬಿ ಮತ್ತಿತರ ಹೂವುಗಳು ಹಬ್ಬದ ಹಿನ್ನೆಲೆಯಲ್ಲಿ ಸಾಮಾನ್ಯ ದಿನದ ಬೆಲೆಗಿಂತ ದುಪ್ಪಟ್ಟಾಗಿದ್ದವು. ಬಾಳೆ ಹಣ್ಣಿಗೂ ಪ್ರತಿ ಕೆಜಿಗೆ 10 ರಿಂದ15 ರೂ. ವರೆಗೆ ಏರಿಕೆಯಾಗಿದ್ದು, ಹಣ್ಣಿನ ಗುಣಮಟ್ಟದ ಮೇಲೆ 80ರಿಂದ 100 ರೂ.ವರೆಗೆ ಮಾರಾಟ ಆಗುತ್ತಿದೆ. ತರಕಾರಿ ಬೆಲೆ ಹೆಚ್ಚು ಏರಿಕೆಯಾಗದಿದ್ದರಿಂದ ಸಾಮಾನ್ಯರು ನಿಟ್ಟುಸಿರು ಬಿಟ್ಟರು.
ಆಯುಧ ಪೂಜೆಗೆ ಪ್ರಮುಖವಾಗಿ ಬೇಕಾಗಿರುವ ಬೂದುಗುಂಬಳ ಮತ್ತು ನಿಂಬೆ ಹಣ್ಣಿಗೆ ಭಾರೀ ಬೇಡಿಕೆ ಕಂಡು ಬಂತು. ಮಾರುಕಟ್ಟೆ, ವೃತ್ತಗಳು ಮತ್ತು ರಸ್ತೆ ಬದಿಗಳಲ್ಲಿ ಬೂದುಗುಂಬಳ ಕಾಯಿಯೇ ಆವರಿಸಿಕೊಂಡಿತ್ತು. ಎಲ್ಲೆಲ್ಲಿಯೂ ಬೂದುಗುಂಬಳ ರಾಶಿಯೇ ಕಂಡು ಬಂದಿತ್ತು. ಬೂದುಗುಂಬಳ ಪ್ರತಿ ಕೆಜಿಗೆ 30 ರಿಂದ 40 ರೂ.ಗೆ ಮಾರಾಟ ಆಯಿತು. ಇನ್ನೂ ನಿಂಬೆ ಹಣ್ಣು 10 ರೂ.ಗೆ ಮೂರು ಮತ್ತು ನಾಲ್ಕು ದೊರೆಯಿತು. ವಿಭೂತಿ, ಅರಿಶಿಣ-ಕುಂಕುಮ, ಧೂಪ ಸೇರಿದಂತೆ ಪೂಜಾ ಸಾಮಾಗ್ರಿಗಳು ಸಹ ತುಟ್ಟಿಯಾಗಿದ್ದವು.
ಆಯುಧ ಪೂಜೆಗೆ ಬೇಕಾಗಿರುವ ಬಾಳೆ ಕಂದು, ಮಾವಿನ ಎಲೆಗಳು ಸಹ ನಿಗಧಿತ ಬೆಲೆಗೆ ಮಾರಾಟವಾದವು. ದೇವರಾಜ ಮಾರುಕಟ್ಟೆ, ವಾಣಿವಿಲಾಸ ಮತ್ತು ಮಂಡಿ ಮಾರುಕಟ್ಟೆ, ನಂಜು ಮಳಿಗೆ, ಎಂ.ಜಿ.ರಸ್ತೆ ಮಾರುಕಟ್ಟೆ ಸೇರಿದಂತೆ ಧನ್ವಂತ್ರಿ ರಸ್ತೆ, ಆಗ್ರಹಾರ ವೃತ್ತ, ಆರ್ಎಂಸಿ, ವಿನೋಭಾ ರಸ್ತೆ, ಸಯ್ಯಾಜಿರಾವ್ ರಸ್ತೆ, ಜೆಕೆ ಮೈದಾನ ಸೇರಿದಂತೆ ನಗರದ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ವ್ಯಾಪಾರ ನಡೆಯಿತು. ಆಯುಧ ಪೂಜೆ ಹಿನ್ನೆಲೆಯಲ್ಲಿ ನಗರದ ಸ್ವೀಟ್ ಅಂಗಡಿಗಳಲ್ಲಿ ಜನಜಂಗುಳಿ ಕಂಡು ಬರುತ್ತಿದೆ. ಸ್ವೀಟ್ ಮಳಿಗೆಗಳು ಸಹ ಭರ್ಜರಿ ವ್ಯಾಪಾರ ವಹಿವಾಟು ನಡೆಸಿದವು. ಗಾರೆ ಕೆಲಸದವರು ಬಟ್ಟೆಗಳನ್ನು ಉಡುಗೊರೆ ಕೊಡುವುದರಿಂದ ಬಟ್ಟೆ ಅಂಗಡಿಗಳಲ್ಲೂ ಜನಜಂಗುಳಿ ಕಂಡು ಬರುತ್ತಿದೆ.