News Karnataka Kannada
Thursday, May 02 2024
ಮೈಸೂರು

ಮೈಸೂರು: ಯಶಸ್ವಿಯಾಗಿ ನಡೆದ ದಸರಾ ಸಿಡಿಮದ್ದಿನ ತಾಲೀಮು

Mysore
Photo Credit : By Author

ಮೈಸೂರು: ದಸರೆಗೆ ಬಂದಿರುವ ೪ ಹೊಸ ಆನೆಗಳು ಸೇರಿದಂತೆ ಎಲ್ಲಾ 14 ಆನೆಗಳಿಗೆ ಸಿಡಿಮದ್ದು ತಾಲೀಮನ್ನು ಯಶಸ್ವಿಯಾಗಿ ನಡೆಸಿದ್ದು, ಎಲ್ಲಾ ಆನೆಗಳು ಉತ್ತಮ ಪ್ರದರ್ಶನ ನೀಡಿವೆ ಎಂದು ಡಿಸಿಎಫ್ ಡಾ.ವಿ.ಕರಿಕಾಳನ್ ಹೇಳಿದ್ದಾರೆ.

ಅರಮನೆಯ ಕೋಟೆ ಮಾರಮ್ಮ ದೇವಸ್ಥಾನದ ಬಳಿಯ ಪಾರ್ಕಿಂಗ್ ಆವರಣದಲ್ಲಿ ಸೋಮವಾರ ಮಧ್ಯಾಹ್ನ ನಡೆದ ತಾಲೀಮಿನಲ್ಲಿ ಅಂಬಾರಿ ಆನೆ ಅಭಿಮನ್ಯು ನೇತೃತ್ವದ 14ಆನೆಗಳಿಗೆ ಹಾಗೂ 44 ಆಶ್ವಗಳಿಗೆ 7 ಫಿರಂಗಿಗಳಲ್ಲಿ ಮೂರು ಸುತ್ತಿನಂತೆ ಒಟ್ಟು 21 ಕುಶಲತೋಪು ಸಿಡಿಸುವ ಮೂಲಕ ನಡೆದ ಭಾರಿ ಶಬ್ಧದ ತಾಲೀಮಿನ ಬಳಿಕ ಮಾತನಾಡಿದ ಅವರು, ಹೊಸ ಆನೆಗಳಾದ ಸುಗ್ರೀವ, ಪಾರ್ಥಸಾರಥಿ, ಶ್ರೀರಾಮ ಶೇರಿದಂತೆ ನಾಲ್ಕು ಆನೆಗಳು ಕೊಂಚ ಬೆದರಿದವು. ಉಳಿದ ಆನೆಗಳು ಉತ್ತಮ ಪ್ರದರ್ಶನ ನೀಡಿವೆ. ಅಶ್ವದಳದ ಕುದುರೆ ಬೆದರಿ ಆನೆಗಳತ್ತ ಬಂದ ಹಿನ್ನೆಲೆ ಆನೆಗಳು ಕೊಂಚ ವಿಚಲಿತವಾದವು. ಇದು ಪ್ರಾಣಿಗಳಲ್ಲಿ ಸಾಮಾನ್ಯ. ಎಲ್ಲಾ ಆನೆಗಳು ಆರೋಗ್ಯದಿಂದ ಇದ್ದು, ಸೆ.16ರಂದು 2ನೇ ಸಿಡಿಮದ್ದು ತಾಲೀಮು ಹಾಗೂ 23ರಂದು ಕೊನೆಯ ಸುತ್ತಿನ ತಾಲೀಮು ನಡೆಯಲಿದೆ ಎಂದು ಹೇಳಿದರು.

ಅರ್ಜುನನಿಗೆ 63ವರ್ಷ ವಯಸ್ಸಾಗಿದ್ದರೂ ಆತನನ್ನು ಕರೆತಂದಿದ್ದೇವೆ. ಏಕೆಂದರೆ ಆತ ಏಳೆಂಟು ಬಾರಿ ಅಂಬಾರಿ ಹೊತ್ತಿದ್ದಾನೆ. ಅವನಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಬಾರಿ ನಿಶಾನೆ ಆನೆಯಾಗಿ ಜಂಬೂ ಸವಾರಿಯನ್ನು ಮುನ್ನಡೆಸಲು ಅವಕಾಶ ನೀಡುತ್ತಿದ್ದೇವೆ. ನೌಪತ್ ಮತ್ತು ಸಾಲಾನೆಗಳಿಗೆ ಆನೆಗಳ ಪ್ರದರ್ಶನ ನೋಡಿಕೊಂಡು ತೀರ್ಮಾನಿಸಲಾಗುವುದು. ಶ್ರೀರಂಗಪಟ್ಟಣ ದಸರಾಗೆ 5 ಆನೆಗಳನ್ನು ಕೇಳಿ ಮಂಡ್ಯ ಜಿಲ್ಲಾಧಿಕಾರಿ ಮೈಸೂರು ಜಿಲ್ಲಾಧಿಕಾರಿಗೆ ಮತ್ತು ಅರಣ್ಯ ಇಲಾಖೆ ಸಿಸಿಎಫ್ ಅವರಿಗೆ ಪತ್ರ ಬರೆದಿದ್ದಾರೆ. ನಾವು 3 ಆನೆಗಳನ್ನು ಕಳಿಸುವ ಬಗ್ಗೆ ಚಿಂತನೆ ನಡೆಸಿದ್ದು, ಇನ್ನೂ ಅಂತಿಮವಾಗಿಲ್ಲ ಎಂದರು.

ಸಿಡಿಮದ್ದು ತಾಲೀಮಿನಲ್ಲಿ ಎಂದಿನಂತೆ ಈ ಬಾರಿಯೂ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಮತ್ತು ಮಾಜಿ ಕ್ಯಾಪ್ಟನ್ ಅರ್ಜುನ ಕೊಂಚವೂ ಬೆದರದೆ ಧೈರ್ಯ ಪ್ರದರ್ಶಿಸಿದವು. ಸಿಡಿಮದ್ದು ಸಿಡಿಸುತ್ತಿದ್ದಂತೆ ಹೊಮ್ಮಿದ ಭಾರೀ ಶಬ್ದಕ್ಕೆ ಎದೆ ಝಲ್ ಎಂದರೂ ಈ ಆನೆಗಳು ಬೆಚ್ಚಲಿಲ್ಲ. ಬದಲಿಗೆ ಜಂಬೂ ಸವಾರಿಯಂದು ಸಿಡಿಮದ್ದು ಸಿಡಿಸುತ್ತಿದ್ದಂತೆ ಮುಂದಡಿಯಿಡುವ ಅಭ್ಯಾಸವಾಗಿ ಅಂತೆಯೇ ಮುಂದಕ್ಕೆ ಹೆಜ್ಜೆ ಹಾಕಿದವು. ಇದೇ ಮೊದಲ ಬಾರಿಗೆ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿರುವ ಮಹೇಂದ್ರ ಆನೆ ಬೆಚ್ಚದೆ ತಾಲೀಮು ಯಶಸ್ವಿಗೊಳಿಸಿದೆ.

ಆದರೆ ಸಿಡಿಮದ್ದು ತಾಲೀಮಿನ ವೇಳೆ ಆನೆಗಳನ್ನು ಸಾಲಾಗಿ ನಿಲ್ಲಿಸಿ ಅವುಗಳ ಮುಂದೆ ಅಶ್ವದಳ ಕುದುರೆಗಳನ್ನು ನಿಲ್ಲಿಸಲಾಗಿತ್ತು. ಈ ವೇಳೆ ಅಶ್ವದಳದ ಕುದುರೆಯೊಂದು ಗಾಬರಿಗೊಂಡು ಆನೆಗಳತ್ತ ಸಾಗಿತು. ಇದರಿಂದ ವಿಚಲಿತಗೊಂಡ ಆನೆಗಳು ಘೀಳಿಟ್ಟವು. ಇದರಿಂದ ಕೆಲಕ್ಷಣ ಆಂತಕದ ವಾತಾವರಣ ಸೃಷ್ಟಿಯಾಯಿತು. ಆನೆಗಳು ಮತ್ತಷ್ಟು ಹೆದರದಂತೆ ಮಾವುತ, ಕಾವಾಡಿಗಳು ಆನೆಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು