ಕಾರವಾರ: ಸಾಗರಮಾಲಾ ಯೋಜನೆ ಅಡಿಯಲ್ಲಿ ಮಾಜಾಳಿಯಲ್ಲಿ ಬಂದರು ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ವಿರೋಧದ ಭಾಗವಾಗಿ ದಾಂಡೇಭಾಗ್, ಮಾಜಾಳಿ ಸೇರಿದಂತೆ ವಿವಿಧ ಕಡೆಯ ಮೀನುಗಾರ ಮುಖಂಡರು, ಗ್ರಾಮಸ್ಥರು, ಮಾಜಾಳಿಯಲ್ಲಿ ಸೇರಿ ಬಂದರು ನಿರ್ಮಾಣದ ಬಗ್ಗೆ ಚರ್ಚೆ ನಡೆಸಿದರು.
ಬಂದರು ನಿರ್ಮಾಣದಿಂದ ಸ್ಥಳೀಯ ಮೀನುಗಾರರಿಗೆ ತೊಂದರೆ ಆಗಲಿದ್ದು ಈ ಬಗ್ಗೆ ಅಧಿಕಾರಿಗಳು, ಮೀನುಗಾರರ ಜೊತೆಗೆ ಚರ್ಚಿಸದೆ ಸರಕಾರ ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ. ಮಾಜಾಳಿ, ಹಿಪ್ಪಳಿ, ದಾಂಡೇಬಾಗ್, ಬಾವಳ್, ದೇವಭಾಗ ಪ್ರದೇಶದ ಮೀನುಗಾರರು ಸೇರಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುವ ಬಗ್ಗೆ ನಿರ್ಣಯಕೈಗೊಳ್ಳಲಾಯಿತು. ಸರಕಾರ ಯೋಜನೆ ಕೈ ಬಿಡದಿದ್ದರೇ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಜೊತೆಗೆ ಮುಂದಿನ ದಿನದಲ್ಲಿ ಬರುವ ಚುನಾವಣೆಯನ್ನು ಬಹಿಷ್ಕರಿಸುವ ಹಾಗೂ ಊರಿಗೆ ಬರುವ ಅಧಿಕಾರಿಗಳಿಗೆ ಘೇರಾವ್ ಹಾಕಲಾಗುವುದು ಎನ್ನುವ ಬಗ್ಗೆ ಸ್ಥಳೀಯ ಮೀನುಗಾರರು ನಿರ್ಣಯಕೈಗೊಂಡರು. ಸಭೆಯಲ್ಲಿ ಮೀನುಗಾರ ಮುಖಂಡರಾದ ದೇವರಾಯ್ ಸೈಲ್, ಮಹಾದೇವ್, ಶ್ರೀಪಾದ್ ಸೈಲ್, ಮನೋಜ್ ಮಾಜಾಳಿಕರ, ಗಣಪತಿ ಖೋಬ್ರೇಕರ, ಪ್ರಶಾಂತ ಸೈಲ್, ಪಾಂಡುರಂಗ ಖೋಬ್ರೇಕರ, ಗಜಾನನ ಚಂಡೇಕರ, ಶೈಲೇಶ್ ಕಾಂಬ್ಳೆ, ಸಂತೋಷ ಚಂಡೇಕರ ಹಾಗೂ ಇನ್ನಿತರರು ಇದ್ದರು