ಮೈಸೂರು: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗ ಎಲ್ಲ ಚೆಕ್ ಪೋಸ್ಟ್ ಗಳಲ್ಲಿಯೂ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದು, ಅದರಂತೆ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ಚೆಕ್ ಪೋಸ್ಟ್ ನಲ್ಲಿಯೂ ನಿಗಾವಹಿಸಿದ್ದು ಈ ವೇಳೆ ದಾಖಲೆಯಿಲ್ಲದೆ 5.5 ಲಕ್ಷ ರೂಪಾಯಿಯನ್ನು ಹಣ ವಶಪಡಿಸಿಕೊಂಡು ಖಜಾನೆಗೆ ರವಾನಿಸಿದ್ದಾರೆ.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ ಎಸ್ ಟಿ ಅಧಿಕಾರಿ ಶಿವಕುಮಾರ್ ಹಾಗೂ ತಂಡದವರು ತಪಾಸಣೆ ನಡೆಸುತ್ತಿದ್ದ ವೇಳೆ ಹೈದರಾಬಾದ್ ಗೆ ತೆರಳುತ್ತಿದ್ದ ಮೊಹಮ್ಮದ್ ಜಾಸೀನ್ ಅವರ ಬಳಿ 5,50 ಲಕ್ಷ ರೂಪಾಯಿಗಳಿರುವುದು ಪತ್ತೆಯಾಗಿದೆ.
ಈ ಹಣಕ್ಕೆ ಯಾವುದೇ ದಾಖಲೆಗಳಿಲ್ಲದ ಕಾರಣ ಹಣವನ್ನು ವಶಪಡಿಸಿಕೊಂಡ ತಂಡ ಈ ಹಣವನ್ನು ಸಹಾಯಕ ಚುನಾವಣಾ ಅಧಿಕಾರಿ ನಂದೀಶ್ ಮತ್ತು ತಹಸೀಲ್ದಾರ್ ಮಹೇಶ್ ಕುಮಾರ್ ಅವರ ನಿರ್ದೇಶನದಂತೆ ಜಪ್ತಿ ತಂಡದ ನೋಡಲ್ ಅಧಿಕಾರಿ ವಿಶ್ವನಾಥ್ ಹಾಗೂ ತಂಡದ ಗುರು ಚೇತನ್, ಸತೀಶ್ ಪಾಲ್ ಮತ್ತು ಮಹೇಶ್ ರವರು ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಗೆ ರವಾನಿಸಿದ್ದಾರೆ.
ಈಗಾಗಲೇ ಎಲ್ಲ ಚೆಕ್ ಪೋಸ್ಟ್ ಗಳಲ್ಲಿ ಅಧಿಕಾರಿಗಳು ಹಗಲು ರಾತ್ರಿ ಎನ್ನದೆ ತಪಾಸಣೆ ಮಾಡುತ್ತಿದ್ದು, ದಾಖಲೆಯಿಲ್ಲದೆ ಹಣ ಸಾಗಿಸಿದರೆ ವಶಪಡಿಸಿಕೊಳ್ಳಲಾಗುತ್ತಿದೆ ಎಂಬ ಹಣ ಸಾಗಾಟ ಮಾಡುತ್ತಿರುವ ಹಿಂದಿನ ಉದ್ದೇಶವೇನು ಎಂಬುದೇ ಅಚ್ಚರಿಯ ವಿಚಾರವಾಗಿದೆ.