ಬೀದರ್ : ಎರಡನೇ ದಿನವೂ ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದ್ದು, ವಾತಾವರಣ ಸಂಪೂರ್ಣ ತಂಪಾಗಿದೆ. ಇದೇ ವೇಳೆ ಮಳೆ ಅವಾಂತರವೂ ಸೃಷ್ಟಿಸಿದೆ. ಔರಾದ್ ತಾಲ್ಲೂಕಿನಲ್ಲಿ ಶುಕ್ರವಾರ ತಡ ರಾತ್ರಿ ಬಿರುಗಾಳಿ ಸಹಿತ ಮಳೆಯಾಗಿ ಕೆಲವೆಡೆ ಹಾನಿ ಸಂಭವಿಸಿದೆ.
ರಾಯಪಳ್ಳಿ ಗ್ರಾಮದ ಶೈಲು ರಾಮಲು (36) ಬಿರುಗಾಳಿಗೆ ಮಾಳಿಗೆ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ.
ಧೂಪತಮಹಾಗಾಂವ್ ಗ್ರಾಮದಲ್ಲಿ ಸಿಡಿಲು ಬಡಿದು ರಾಮಣ್ಣ ಪ್ರಭು ಕಾಳೆ ಅವರ ಒಂದು ಎತ್ತು ಸಾವನ್ನಪ್ಪಿದರೆ ಮತ್ತೊಂದು ಎತ್ತು ತೀವ್ರ ಗಾಯಗೊಂಡಿದೆ.
ಮಳೆ ಗಾಳಿಯಿಂದಾಗಿ ಕೆಲ ಗ್ರಾಮಗಳಲ್ಲಿ ತಗಡಿನ ಶೀಟ್ಗಳು ಹಾರಿ ಹೋಗಿವೆ. ಕಂಬಗಳು ಬಿದ್ದು ವಿದ್ಯುತ್ ಕಡಿತವಾಗಿರುವ ಮಾಹಿತಿ ಇದೆ. ಜೆಸ್ಕಾಂ ಹಾಗೂ ಕಂದಾಯ ನಿರೀಕ್ಷಕರಿಗೆ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ತಾಲ್ಲೂಕಿನ ಔರಾದ್ ಹೋಬಳಿಯಲ್ಲಿ 30 ಮಿಮಿ ಚಿಂತಾಕಿ-49,2 ಮಿಮಿ. ಸಂತಪುರ-20.4 ಮಿಮಿ. ದಾಬಕಾ, 38.3 ಮಿಮಿ ಮಳೆ ದಾಖಲಾಗಿದೆ.
ಕಮಲನಗರದ ಮದನೂರ, ಖತಗಾಂವ ಸುತ್ತಮುತ್ತ ಬಿರುಗಾಳಿ ಮಳೆಗೆ ಮನೆಗಳ ಶೀಟುಗಳು ಹಾರಿ ಹೋಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಾವು ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಹಲವೆಡೆ ಬುಡಸಮೇತ ಮರಗಳು ನೆಲಕ್ಕುರುಳಿವೆ.
ಬೀದರ್ ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಶುಕ್ರವಾರ ತಡರಾತ್ರಿ ವರೆಗೆ ಮಳೆಯಾಗಿದೆ. ಶನಿವಾರ ಪುನಃ ಮಳೆ ಆರಂಭಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಹುಲಸೂರ, ಹುಮನಾಬಾದ್, ಬಸವಕಲ್ಯಾಣದಲ್ಲೂ ಮಳೆಯಾಗಿದೆ.