ಮೈಸೂರು: ಜಲವಿಲ್ಲದ ಜಾಗವಿಲ್ಲ. ಜೀವ ಜಲವಾಗಿರುವ ನೀರು ಪ್ರಕೃತಿಯು ಮನುಷ್ಯ ಹಾಗೂ ಪ್ರಾಣಿ ಪಕ್ಷಿಗಳಿಗೆ ಇತ್ತವರ. ಇದು ಸೃಷ್ಟಿಸಲಾದ ನೈಸರ್ಗಿಕ ಸಂಪತ್ತು. ನೀರಿಗೆ ನೀರೇ ಪರ್ಯಾಯ. ಮಳೆ ಇದಕ್ಕೆ ಮೂಲಾಧಾರ. ಅಮೃತ ಸ್ವರೂಪವಾದ ನೀರು ಜೀವ ಸಂಕುಲಕ್ಕೆ ಆಧಾರ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಅವರು ಹೇಳಿದರು.
ನಗರದ ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಆವರಣದಲ್ಲಿ ಅಪೂರ್ವ ಸ್ನೇಹ ಬಳಗ ಹಾಗೂ ಅರಿವು ಸಂಸ್ಥೆ ವತಿಯಿಂದ ವಿಶ್ವ ಜಲ ದಿನ ಅಂಗವಾಗಿ ಹೋಟೆಲ್ ಗಳಲ್ಲಿ ಗ್ರಾಹಕರು ನೀರನ್ನು ಹಿತಮಿತವಾಗಿ ಬಳಸುವ ಮೂಲಕ ನೀರನ್ನು ಸಂರಕ್ಷಿಸಬೇಕೆಂದು ಮನವಿ ಮಾಡಿದರು.
ನೀರಿನ ಮಹತ್ವದ ಜಾಗೃತಿಯುಳ್ಳ ಕರಪತ್ರವನ್ನು ಅಂಟಿಸಿ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ನೀರಿನ ಮಹತ್ವ ಮೂಡಿಸಬೇಕಾದದ್ದು ಹೋಟೆಲ್ ಗಳ ಹೊಣೆಗಾರಿಕೆಯೂ ಹೌದು, ದರ ಪಟ್ಟಿಯನ್ನು ಪ್ರಕಟಿಸಿದಂತೆ ನೀರಿನ ಮಹತ್ವ ಬಗೆ ಅರಿವು ಮೂಡಿಸುವತ್ತ ಹೋಟೆಲ್ ಗಳು ಹೆಜ್ಜೆ ಇಡಬೇಕಾಗಿದೆ.
ಗ್ರಾಹಕರು ಏನಾದರೂ ಅಂದುಕೊಳ್ಳಲಿ ಆದರೆ ನೀರನ್ನು ಮಿತವಾಗಿ ಬಳಸಿ ಎಂಬಂತಹ ಜಾಗೃತಿಯ ಬರಹಗಳು ಹೋಟೆಲ್ ಗೋಡೆಗಳಲ್ಲಿ ಕಾಣಿಸುವಂತೆ ಪ್ರಕಟಿಸುವುದು ಒಳಿತು. ನೀರಿನ ತೀವ್ರತೆಯ ಬಗ್ಗೆ ಗಮನ ಸೆಳೆಯುವ ನಿಟ್ಟಿನಲ್ಲಿ ನೀರಿನ ಮಹತ್ವವಾದ ಜಾಗೃತಿಯ ಪೋಸ್ಟರ್ ಗಳನ್ನು ಅಂಟಿಸಿ ಇನ್ನು ಹೆಚ್ಚು ಗ್ರಾಹಕರಿಗೆ ಜಾಗೃತಿ ಮೂಡಿಸಲು ಮುಂದಾಗೋಣ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷರಾದ ಚಂದ್ರಶೇಖರ್, ಪ್ರಸಾದ್ ಜೇಟ್ಟಿ, ಸುರೇಶ್ ಗೋಲ್ಡ್, ಸಂದೀಪ್, ಧರ್ಮೇಂದ್ರ, ನಾಗೇಶ್, ಶ್ರೀಕಾಂತ್ ಕಶ್ಯಪ್, ದಯಾನಂದ್, ಹಾಗೂ ಇನ್ನಿತರರು ಹಾಜರಿದ್ದರು.