ಎಚ್.ಡಿ.ಕೋಟೆ: ಎಚ್.ಡಿ.ಕೋಟೆ ಪಟ್ಟಣದ ಸ್ಟೇಡಿಯಂ ಬಡಾವಣೆ ಸೇರಿದಂತೆ ತಾಲ್ಲೂಕಿನ ಬೆಳಗನಹಳ್ಳಿ, ಬೋಪ್ಪನಹಳ್ಳಿ, ಜಕ್ಕಹಳ್ಳಿ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಂಡು ದನ ಕರು, ಆಡು ಕುರಿ, ಕೋಳಿ ಮೇಲೆ ಆಗಾಗ ದಾಳಿ ಮಾಡಿ ಜನರಲ್ಲಿ ಭಯದ ವಾತಾವರಣ ಸೃಷ್ಠಿಸಿದ್ದ ಎರಡು ಚಿರತೆಗಳಲ್ಲಿ ಮೂರು ವರ್ಷ ಪ್ರಾಯದ ಗಂಡು ಚಿರತೆ ಅರಣ್ಯ ಇಲಾಖೆ ಅಧಿಕಾರಿಗಳು ಇರಿಸಿದ್ದ ಬೋನಿಗೆ ಬಿದ್ದಿದೆ.
ಕಳೆದ ಹದಿನೈದು ದಿನಗಳ ಹಿಂದೆ ಎಚ್.ಡಿ.ಕೋಟೆ ಪಟ್ಟಣದ ಸ್ಟೇಡಿಯಂ ಬಡಾವಣೆ ವನವಾಸಿ ಟ್ರಸ್ಟ್ನ ಹಾಸ್ಟೇಲ್ ಬಳಿ ಎರಡು ಚಿರತೆಗಳು ಬಂದು ಶ್ವಾನಗಳ ಮೇಲೆ ದಾಳಿ ಮಾಡಿ ಹೊತ್ತೊಯ್ಯುತ್ತಿದ್ದ ದೃಶ್ಯ ಹಾಸ್ಟೆಲ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದನ್ನು ಕಂಡ ಪಟ್ಟಣದ ಜನರು ಬಿಚ್ಚಿಬಿದ್ದಿದ್ದರು, ಈಗ ಚಿರತೆ ಸೆರೆಯಿಂದ ಪಟ್ಟಣದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ, ಸೆರೆಸಿಕ್ಕ ಚಿರತೆಯನ್ನು ಮೇಟಿಕುಪ್ಪೆ ವನ್ಯಜೀವಿ ವಲಯದ ಕಾಡಿಗೆ ಬಿಡಲಾಯಿತು.
ಚಿರತೆ ದಾಳಿಯಿಂದ ರೈತರಿಗೆ ನಷ್ಟ, ಸೂಕ್ತ ಪರಿಹಾರಕ್ಕಾಗಿ ತಪ್ಪದ ಅಲೆದಾಟ, ತಾಲ್ಲೂಕಿನ ಬೆಳಗನಹಳ್ಳಿ ಸಂತೋಷ್ ಹಾಗೂ ಬೋಪ್ಪನಹಳ್ಳಿ ಗ್ರಾಮದ ಅಶೋಕ್ ಅವರ ತೋಟದ ಮನೆಯಲ್ಲಿ ಕಟ್ಟಲಾಗಿದ್ದ ದನ ಕರು ಮೇಲೆ ದಾಳಿ ಮಾಡಿ ಮೇಕೆಯನ್ನು ತಿಂದಿದ್ದ ಚಿರತೆ ಕೊನೆಗೂ ಬೋಪ್ಪನಹಳ್ಳಿ ಆಶೋಕ್ ಅವರ ತೋಟದಲ್ಲಿ ಇರಿಸಿದ್ದ ಬೋನಿಗೆ ಬಿದ್ದಿದೆ, ಮತ್ತೊಂದು ಚಿರತೆಯ ಸೆರೆಗಾಗಿ ಆಶೋಕ್ ಅವರ ತೋಟದಲ್ಲೇ ಮತ್ತೆ ಬೋನು ಇಡಲಾಗುವುದು ಎಂದು ಎಚ್.ಡಿ.ಕೋಟೆ ಸಾಮಾಜಿಕ ವಲಯಾರಣ್ಯದ ಅಧಿಕಾರಿಗಳು ತಿಳಿಸಿದ್ದಾರೆ.