ಮೈಸೂರು: ಎಚ್.ಡಿ ಕೋಟೆ ತಾಲ್ಲೂಕಿನ ಜಿ.ಜಿ ಕಾಲೋನಿ ಗ್ರಾಮದ ಸರ್ಕಾರಿ ಶಾಲೆ ಈಗ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಜನ ಅಚ್ಚರಿಯ ನೋಟ ಬೀರುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವುದು ಉಪ್ಕ್ರತಿ ಎನ್.ಜಿ.ಓ ಎಂದರೆ ತಪ್ಪಾಗಲಾರದು.
ಇವತ್ತು ಈ ಸರ್ಕಾರಿ ಶಾಲೆ ಸುಂದರವಾಗಿ ಕಂಗೊಳಿಸುತ್ತಿದ್ದರೆ ಅದಕ್ಕೆ ಕಾರಣವಾಗಿರುವುದು ಉಪ್ಕ್ರತಿ ಎನ್.ಜಿ.ಓ ಗಳು. ಎಲ್ಲರೂ ಸೇರಿ ಶಾಲೆಗೊಂದು ರಂಗು ತಂದಿದ್ದಾರೆ. ಇದೀಗ ಸ್ವಯಂಸೇವಕರು ಶಾಲೆಯ ಬಣ್ಣ ಬಳಿದು ಗೋಡೆಯ ಮೇಲೆ ಚಿತ್ರಕಲೆಗಳನ್ನು ರಚಿಸಿ ಮೆರಗು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನ ಎಚ್ಡಿ ಕೋಟೆ ತಾಲೂಕಿನ ಗೆಂಡೇಗೌಡರ ಕಾಲೋನಿಯ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಎರಡು ದಿನಗಳ ಕಾಲ ಶ್ರಮದಾನದ ಕಾಯಕ್ರಮವನ್ನು ಹಮ್ಮಿಕೊಂಡು ಶಾಲಾ ಗೋಡೆಗಳ ಮೇಲೆ ವಾಟರ್ ಪ್ರೂಫ್ ಪೇಂಟಿಂಗ್, ನಲಿಕಲಿ ತರಗತಿಗೆ ಬಣ್ಣ ಹಚ್ಚುವುದು, ಬಾಲ್ಯ ವಿವಾಹ, ಬಾಲ ಕಾರ್ಮಿಕ ಮತ್ತು ಮಕ್ಕಳ ಹಕ್ಕುಗಳ ಜಾಗೃತಿ ಸಂದೇಶಗಳು ಮತ್ತು ಕಾರ್ಟೂನ್ ಚಿತ್ರಕಲೆಗಳನ್ನು ನಲಿಕಲಿ ತರಗತಿಯ ಕೊಠಡಿಗಳ ಗೋಡೆಗಳ ಮೇಲೆ ರಚಿಸುವ ಮೂಲಕ ಸುಂದರಗೊಳಿಸಿದ್ದಾರೆ ಅಷ್ಟೇ ಅಲ್ಲದೆ,. ಈ ಭಾಗದಲ್ಲಿ ಹೆಚ್ಚು ಬಾಲ್ಯ ವಿವಾಹಗಳು ನಡೆಯುತ್ತಿರುವುದರಿಂದ ಈ ಕುರಿತಂತೆ ಜಾಗೃತಿ ಮೂಡಿಸುವ ಚಿತ್ರಕಲೆಗಳನ್ನು ಬಿಡಿಸಿ ಶಾಲಾ ಮಕ್ಕಳು ಮತ್ತು ಪೋಷಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾಡಲಾಗಿದೆ.
ಮಕ್ಕಳು ಶಾಲೆಯಲ್ಲಿ ತಮ್ಮ ಸಮಯವನ್ನು ಆನಂದಿಸಲಿ ಎನ್ನುವ ಉದ್ದೇಶದಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವಯಂಸೇವಕರು ಪ್ರತಿ ವಾರಾಂತ್ಯದಲ್ಲಿ ತಮ್ಮ ಅಮೂಲ್ಯವಾದ ಸಮಯವನ್ನು ಮೀಸಲಿಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಡಿಜಿಟಲ್ ಕ್ಲಾಸ್ ರೂಮ್ ಲ್ಯಾಬ್ ಸೆಟಪ್ ನ್ನು ಒದಗಿಸುವುದಾಗಿ ಉಪ್ಕ್ರತಿ ಶಾಲೆಗೆ ಭರವಸೆ ನೀಡಿದೆ.
ಶ್ರಮದಾನದಲ್ಲಿ ಎಸ್ಡಿಎಂ ಸಮಿತಿ ಮತ್ತು ಬಾಲಸುಬ್ರಹ್ಮಣ್ಯನ್ ಕುಟುಂಬದವರು ಪಾಲ್ಗೊಂಡಿದ್ದರಲ್ಲದೆ, ಸ್ವಯಂ ಸೇವಕರ ತಂಡದಲ್ಲಿ ವೃತ್ತಿಪರ ಕಲಾವಿದರು, ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಆರ್ಜೆ, ಸಾಫ್ಟ್ವೇರ್ ಉದ್ಯೋಗಿಗಳು ಇದ್ದದ್ದು ವಿಶೇಷವಾಗಿತ್ತು.
ಎನ್ಜಿಒ ಮುಖ್ಯಸ್ಥ ಚಂದನ್, ಸ್ವಯಂಸೇವಕರಾದ ಮಾನಸ, ದರ್ಶನ್, ವಿಕೇಶ್, ಪ್ರಕೃತಿ, ಕಿರಣ್, ಅಮೃತ, ಶಶಾಂಕ್, ವರ್ಷ, ಶರಣ್ಯ, ಅನು, ಪ್ರಾರ್ಥನಾ, ಪ್ರತೀಕ್ಷಾ, ಶಿವಂ, ಮಧುರಾ, ಹರಿಪ್ರಿಯಾ, ಅನನ್ಯಾ, ದೀಪ್ತಿ, ತಸ್ಮಿಯಾ, ಧನುಷಾ, ಸುಹಾಸ್, ಸಿದ್ದೇಶ್, ಸಯೀಮಾ, ಆಶಿಶ್ ಮೊದಲಾದವರು ಇದ್ದರು. ಮಾಹಿತಿಗೆ ಚಂದನ್ ಎನ್, ಸ್ಥಾಪಕ, ಅಧ್ಯಕ್ಷ, ಉಪ್ಕ್ರತಿ ಎನ್.ಜಿ.ಓ
ಮೊ: 9742662664 ಅವರನ್ನು ಸಂಪರ್ಕಿಸಬಹುದಾಗಿದೆ.