ಎಚ್.ಡಿ.ಕೋಟೆ: ಪಟ್ಟಣದ ಗಿರಿಜನ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ತಾಲ್ಲೂಕಿನ ಮಾರನ ಹಾಡಿಯ ವಿದ್ಯಾರ್ಥಿ ಆಕಾಶ್ (17) ವರ್ಷ ವಿದ್ಯಾರ್ಥಿ ನಿಲಯದಲ್ಲೇ ಸೋಮವಾರ ಮಧ್ಯಾಹ್ನ ನೇಣಿಗೆ ಶರಣಾಗಿದ್ದಾನೆ.
ಪಟ್ಟಣದ ಶ್ರೀ ಆದಿಚುಂಚನಗಿರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಜೇನುಕುರುಬ ಸಮುದಾಯದ ಮೃತ ಆಕಾಶ್ ತಂದೆ ತಾಯಿ ಓರ್ವ ಸಹೋದರಿ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಮೃತದೇಹವನ್ನು ಪಟ್ಟಣದ ಶವಗಾರದಲ್ಲಿ ಇರಿಸಲಾಗಿದ್ದು, ಮಾರನ ಹಾಡಿ ಜನರ ಆಕ್ರಂದನ ಮುಗಿಲು ಮುಟ್ಟಿತ್ತು. ಒಳ್ಳೆಯ ವಿದ್ಯಾರ್ಥಿ ಏಕೆ ಹೀಗೆ ಮಾಡಿಕೊಂಡ ಗೊತ್ತಿಲ್ಲ. ಎಂದು ವಾರ್ಡನ್ ಮಹೇಶ್ ಹೇಳಿದ್ದಾರೆ.
ಮೃತ ಆಕಾಶ್ ನಮ್ಮ ವಿದ್ಯಾರ್ಥಿ ನಿಲಯಕ್ಕೆ ದಾಖಲಾತಿ ಪಡೆದ ದಿನದಿಂದಲೂ ಬಹಳ ಲವಲವಿಕೆಯಿಂದ ಇದ್ದ, ಚೆನ್ನಾಗಿಯೂ ಓದುತ್ತಿದ್ದ ಕಳೆದ ಶುಕ್ರವಾರ ಹುಷಾರಿಲ್ಲ ಎಂದು ಸ್ವಗ್ರಾಮ ಮಾರನ ಹಾಡಿಗೆ ತೆರಳಿದ್ದ ಸೋಮವಾರ ಬೆಳಿಗ್ಗೆ ಪಟ್ಟಣಕ್ಕೆ ಬಂದು ಹಾಸ್ಟೆಲ್ ಗೆ ತಿಂಡಿಗೆ ಬಾರದೆ ನೇರವಾಗಿ ಕಾಲೇಜಿಗೆ ಹೋಗಿದ್ದ, ಅಲ್ಲಿಂದ ಮಧ್ಯಾಹ್ನ 1.30 ರಲ್ಲಿ ಹಾಸ್ಟೆಲ್ ಬಂದು ನೇಣಿಗೆ ಶರಣಾಗಿದ್ದಾನೆ, ನಾನು ಮತ್ತು ನಮ್ಮ ಸಿಬ್ಬಂದಿ ಹಾಸ್ಟೆಲ್ ನ್ನು ಹೊಸ ಕಟ್ಟಡಕ್ಕೆ ಸ್ಥಳಂತರ ಮಾಡುವ ಕೆಲಸದಲ್ಲಿ ತೊಡಗಿದ್ದೆವು, ಇವನು ರೂಮಿಗೆ ಹೋಗಿ ನೋಡಿದಾಗ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
ಸೋಮವಾರ ಕಾಲೇಜಿಗೆ ಬಂದ ಮಗ ಮಧ್ಯಾಹ್ನ ನೇಣಿಗೆ ಶರಣಾಗಿರುವ ವಿಷಯ ತಿಳಿದು ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆ ಶವಗಾರದ ಬಳಿ ಬಂದ ಮೃತ ಪೋಷಕರ ಆಕ್ರಂದನ ಕರುಳು ಹಿಂಡುವಂತಿತ್ತು, ಈ ವೇಳೆ ಮಾತನಾಡಿದ ಮೃತನ ಪೋಷಕರು ಆಕಾಶ್ ನನ್ನ ಮಗ ತುಂಬಾ ಚೆನ್ನಾಗಿ ಓದುತ್ತಿದ್ದ ಚೆನ್ನಾಗಿಯೇ ಇದ್ದ ನನ್ನ ಮಗನಿಗೆ ಏನಾಯ್ತು ಎಂದು ಮಗನ ಸಾವಿಗೆ ಅನುಮಾನ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದಾರೆ.
ಸ್ಥಳದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನಾರಾಯಣಸ್ವಾಮಿ, ನಿಲಯಪಾಲಕ ಮಹೇಶ್ ಸೇರಿದಂತೆ ಇನ್ನಿತರರು ಇದ್ದರು, ಈ ಸಂಬಂಧ ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಹಾಯವಾಣಿಗೆ ಕರೆ ಮಾಡಿ:
ನೀವು ಆತ್ಮಹತ್ಯೆಯ ಯೋಚನೆ ಮಾಡುತ್ತಿದ್ದರೆ ಅಥವಾ ಅಂತವರ ಕುರಿತು ನಿಮಗೆ ತಿಳಿದಿದ್ದರೆ, ಸಹಾಯ ಅಗತ್ಯವಿರುವ ಯಾರಾದರೂ, ಕರೆ ಮಾಡಿ ಸುಶೇಗ್ ಚಾರಿಟೇಬಲ್ ಟ್ರಸ್ಟ್ 0824-2983444 ಗೆ ಏಕೆಂದರೆ ಪ್ರತಿಯೊಬ್ಬರ ಜೀವವು ಅಮೂಲ್ಯವಾದ್ದದ್ದು