ಮೈಸೂರು: ಮಳೆಯಿಂದ ಭೂ ಕುಸಿತ ಸಂಭವಿಸಿದ ಪರಿಣಾಮ ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲು ಸಮೀಪದ ಹಾರಂಗಿ ಬಲದಂಡೆ ನಾಲೆ ಸಂಪರ್ಕ ಕಲ್ಪಿಸುವ ಕೋಟಯ್ಯನ ಕೊಪ್ಪಲು ಹಾಗೂ ಆನೆಕಟ್ಟೆ ರಸ್ತೆ ಸಂಪರ್ಕ ಕಡಿತಗೊಂಡಿರುವುದು ಬೆಳಕಿಗೆ ಬಂದಿದೆ.
ಹಾರಂಗಿ ಬಲದಂಡೆ ನಾಲೆ ಹಾದು ಹೋಗಿದ್ದು, ಇಲ್ಲಿ ಭೂಕುಸಿತವಾದ ಪರಿಣಾಮ ಮಣ್ಣು ನಾಲೆಗೆ ಬಿದ್ದಿದ್ದು, ನೀರು ಹರಿದು ಹೋಗಲು ಕಷ್ಟವಾಗಿದೆ. ಇನ್ನು ನಾಲೆ ರಸ್ತೆ ಬಳಿ ಒಂದು ಕಿ.ಮೀ ನಷ್ಟು ಡೀಪ್ ಕಟ್ ಇದ್ದು ಸುಮಾರು 90 ರಿಂದ 100 ಅಡಿ ಆಳವಿದೆ,. ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಡೀಪ್ ಕಟ್ ಕೆಲವು ಭಾಗಗಳಲ್ಲಿ ಮಣ್ಣು ಕುಸಿದ ಪರಿಣಾಮ ಕೋಟಯ್ಯನ ಕೊಪ್ಪಲು ರಸ್ತೆ ತಿರುವಿನಲ್ಲಿ ಮಣ್ಣು ಕಾಲುವೆಗೆ ಬಿದ್ದಿದೆ ಇದರಿಂದ ಆನೆಕಟ್ಟೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
ಮಣ್ಣು ಕುಸಿತದ ಕಾರಣ ನಾಲೆಯ ನೀರಿನ ಹರಿವಿಗೆ ತೊಂದರೆಯಾಗಿದೆ. ಈ ಹಿಂದೆಯೂ ಹಲವು ಬಾರಿ ಮಣ್ಣು ಕುಸಿದು ತೊಂದರೆಯಾಗಿದೆ. ಈ ಬಗ್ಗೆ ಹಾರಂಗಿ ಪುನರ್ವಸತಿ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತಂದು ನೂತನವಾಗಿ ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದರೂ ಇದುವರೆಗೂ ಹಣ ಬಿಡುಗಡೆಯಾಗಿಲ್ಲ. ಸಮಸ್ಯೆ ಉಂಟಾದ ಸಂದರ್ಭ ತಾತ್ಕಾಲಿಕ ಪರಿಹಾರ ಒದಗಿಸುವ ಬದಲು ಶಾಶ್ವತವಾಗಿ ಸೇತುವೆ ಹಾಗೂ ನಾಲೆ ಬದಿಗಳಲ್ಲಿ ಬ್ಯಾರಿಕೇಡ್ ನಿರ್ಮಾಣ ಮಾಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.ಸಂಬಂಧಿಸಿದ ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರಾ ಕಾದು ನೋಡಬೇಕಿದೆ.