ನಂಜನಗೂಡು: ಕೆರೆಯಲ್ಲಿ ಕಲುಷಿತ ನೀರು ಕುಡಿದು ಐವತ್ತಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಕೂಗಲೂರು ಗ್ರಾಮದಲ್ಲಿ ನಡೆದಿದೆ.
ಶಿರಾ ತಾಲ್ಲೂಕಿನ ಬಾಣಗೆರೆ ಗ್ರಾಮದ ರಂಗಸ್ವಾಮಿ ಎಂಬುವರು ನಾನೂರಕ್ಕೂ ಹೆಚ್ಚು ಕುರಿಗಳನ್ನು ಗ್ರಾಮದಲ್ಲಿ ಮೇಯಿಸುತ್ತಿದ್ದರು. ಇಂದು ಬೆಳಿಗ್ಗೆ ಕೂಗಲೂರು ಗ್ರಾಮದ ಕೆರೆಯಲ್ಲಿ ನೀರು ಕುಡಿಸಿಕೊಂಡು ಮೇಯಿಸಲು ಹೋದ ಸಂದರ್ಭದಲ್ಲಿ ಐವತ್ತಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡು ಸಾವನ್ನಪ್ಪಿವೆ. ಕೆರೆಯ ನೀರಿನಲ್ಲಿ ಕ್ರಿಮಿನಾಶಕ ಮಿಶ್ರಣ ವಾಗಿರುವುದರಿಂದ ಕೆರೆ ನೀರು ಕಲುಷಿತವಾಗಿರಬಹುದು ಎಂಬುದು ಶಂಕೆ ವ್ಯಕ್ತವಾಗಿದೆ.
ಕುರಿಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತೇವೆ. ಇಷ್ಟೊಂದು ಕುರಿಗಳು ಸಾವನ್ನಪ್ಪಿರುವುದರಿಂದ ನಮಗೆ ತುಂಬಲಾರದ ನಷ್ಟ ಉಂಟಾಗಿದೆ. ಅಧಿಕಾರಿಗಳು ಯಾರು ಕೂಡ ಬಂದು ನಮ್ಮ ಸಮಸ್ಯೆಯನ್ನು ಕೇಳಿಲ್ಲ. ಸರ್ಕಾರ ಕೂಡಲೇ ಪರಿಹಾರವನ್ನು ನೀಡಬೇಕು ಎಂದು ಕುರಿಗಾಹಿ ರಂಗಸ್ವಾಮಿ ಒತ್ತಾಯಿಸಿದ್ದಾರೆ.