ಬೀದರ್: ಇಲ್ಲಿಯ ಡಾ. ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಈಚೆಗೆ ಮಹಾಬಳೇಶ್ವರಪ್ಪ ಗುರುಕುಲ ಪ್ರಾಥಮಿಕ ಹಾಗೂ ತೊಂಟದ ಸಿದ್ಧಲಿಂಗ ಪ್ರೌಢಶಾಲೆ ವತಿಯಿಂದ ನಾಡೋಜ ಪ್ರಶಸ್ತಿ ಪುರಸ್ಕೃತ ಬಸವಲಿಂಗ ಪಟ್ಟದ್ದೇವರಿಗೆ ಸನ್ಮಾನ ಹಾಗೂ ತಂದೆ ತಾಯಿ ಪಾದ ಪೂಜೆ ಕಾರ್ಯಕ್ರಮ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಸವಲಿಂಗ ಪಟ್ಟದ್ದೇವರು, ಪ್ರತಿಯೊಬ್ಬರೂ ತಂದೆ ತಾಯಿಯ ಸೇವೆ ಮಾಡಬೇಕು. ಆವಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.
ನಮ್ಮದು ಗುರು ಹಿರಿಯರನ್ನು ಗೌರವದಿಂದ ಕಾಣುವ ಸಂಪ್ರದಾಯ. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಬಹುತೇಕರು ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಕಳುಹಿಸುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ. ಮಕ್ಕಳು ಯಾವುದೇ ಉನ್ನತ ಹುದ್ದೆಯಲ್ಲಿದ್ದರೂ ಎಂದೆಂದಿಗೂ ಪೋಷಕರ ಋಣ ತೀರಿಸಲು ಸಾಧ್ಯವಿಲ್ಲ. ಆದ್ದರಿಂದ ಎಲ್ಲರೂ ತಂದೆ ತಾಯಿಯನ್ನು ಗೌರವದಿಂದ ಕಾಣಬೇಕು ಎಂದು ತಿಳಿಸಿದರು.
ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಮಾತನಾಡಿ, ನಡೆ ನುಡಿ ಒಂದಾಗಿಸಿಕೊಂಡು ಬಸವಾದಿ ಶರಣರ, ಸಂತರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿಯ ಬದುಕು ಸಾಗಿಸಬಹುದು ಎಂದು ಸಲಹೆ ನೀಡಿದರು.
ಪ್ರಸಾದ ನಿಲಯದ ಸಂಚಾಲಕ ಉಮಾಕಾಂತ ಮೀಸೆ ಮಾತನಾಡಿದರು. ಪ್ರಸಾದ ನಿಲಯದ ಕಾರ್ಯದರ್ಶಿ ಪ್ರೊ ಎಸ್.ಬಿ.ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.
ಯೋಗ ವೇದಾಂತ ಸೇವಾ ಸಮಿತಿಯ ಕಾರ್ಯದರ್ಶಿ ಸುರೇಂದ್ರ ರೊಡೆ, ಸಮಿತಿಯ ಅಧ್ಯಕ್ಷ ಸಂಜು ಪಾಟೀಲ, ಉಪಾಧ್ಯಕ್ಷ ಶರಣು ಬಿರಾದಾರ, ಸಹ ಕಾರ್ಯದರ್ಶಿ ರೇವಣಸಿದ್ದ ಮಳಖೇಡ ಉಪಸ್ಥಿತರಿದ್ದರು.