ನಂಜನಗೂಡು: ಆಷಾಢ ಮಾಸದ ವೇಳೆ ತವರು ಮನೆಗೆ ಬಂದಿದ್ದ ನವವಿವಾಹಿತ ಪಕ್ಕದ ಮನೆಯ ಪ್ರಿಯಕರನ ಜೊತೆ ಪರಾರಿಯಾಗಿದ್ದಲ್ಲದೆ, ಪತ್ತೆಯಾದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡು ತಾಲೂಕು ರಾಂಪುರ ಗ್ರಾಮದಲ್ಲಿ ನಡೆದಿದೆ.
ರಾಂಪುರ ಗ್ರಾಮದ ನಿವಾಸಿ ವರ್ಷಿತಾ(20) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಈಕೆಯನ್ನು ಕಳೆದ ಮೂರು ತಿಂಗಳ ಹಿಂದೆ ಅಂದರೆ ಮೇ.8ರಂದು ಚಾಮರಾಜನಗರದ ಅಭಿಷೇಕ್ ಜೊತೆ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಈ ವೇಳೆ ಈಕೆ ಪಕ್ಕದ ಮನೆಯ ಕಿರಣ್ ಎಂಬಾತನನ್ನು ಪ್ರೀತಿಸುತ್ತಿರುವ ಬಗ್ಗೆ ಗುಟ್ಟಾಗಿಯಿಟ್ಟಿದ್ದಳು. ಮದುವೆಯ ಬಳಿಕ ಆಕೆಯನ್ನು ಗಂಡ ತವರು ಮನೆಗೆ ಆಷಾಢದಲ್ಲಿ ಬಿಟ್ಟು ಹೋಗಿದ್ದನು. ಈ ವೇಳೆ ಆಕೆ ಪ್ರಿಯಕರ ಕಿರಣ್ ಜೊತೆ ನಾಪತ್ತೆಯಾಗಿದ್ದಳು.
ಪೋಷಕರು ನೀಡಿದ ದೂರಿನ ಮೇರೆಗೆ ಹುಲ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾಗಿದ್ದ ವರ್ಷಿಣಿ ಮತ್ತು ಕಿರಣ್ ನನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿ ಅಲ್ಲಿಂದ ಕರೆತಂದು ಬುದ್ದಿವಾದ ಹೇಳಿ ಪೋಷಕರಿಗೆ ಒಪ್ಪಿಸಿದ್ದರು.
ಬಳಿಕ ಆಕೆಯನ್ನು ಮೈಸೂರಿನ ಸಂಬಂಧಿಕರ ಮನೆಗೆ ಕಳುಹಿಸಿಕೊಡಲಾಗಿತ್ತು. ಈ ನಡುವೆ ತಾತನ ಮನೆ ರಾಂಪುರ ಗ್ರಾಮಕ್ಕೆ ಆಗಮಿಸಿದ ಆಕೆ ಪ್ರಿಯಕರನ ಅಗಲಿಕೆಯಿಂದ ಮನನೊಂದು ಬಾತ್ ರೂಂ ನಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.