ಮೈಸೂರು: ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಚೆಲುವಾಂಬ ಆಸ್ಪತ್ರೆಗೆ ರೋಗಿಗಳಿಗೆ ಅತ್ಯುತ್ತಮ ಆರೋಗ್ಯ ಸೇವೆಗಾಗಿ ಕೇಂದ್ರ ಸರ್ಕಾರದ ಮುಸ್ಕಾನ್ ಪುರಸ್ಕಾರ ದೊರೆತಿದ್ದು, 12 ವರ್ಷ ಒಳಪಟ್ಟ ಮಕ್ಕಳಿಗೆ ಗುಣಮಟ್ಟದ ಆರೋಗ್ಯ ಸೌಲಭ ಮತ್ತು ಚಿಕಿತ್ಸೆ ಲಭವಾಗುವಂತೆ ಕೇಂದ್ರ ಸರ್ಕಾರ ಆರಂಭಿಸಿರುವ ಮುಸ್ಕಾನ್ ಪುರಸ್ಕಾರಕ್ಕೆ ಆಯ್ಕೆಯಾಗಿರುವ ರಾಜ್ಯದ ಐದು ಆಸ್ಪತ್ರೆಗಳ ಪೈಕಿ ಇದು ಒಂದಾಗಿದೆ.
ರಾಷ್ಟ್ರೀಯ ಆರೋಗ್ಯ ಮಿಷನ್ನಡಿ ಬರುವ ಎನ್-ಕ್ವಾಶ್ ಯೋಜನೆಯಡಿ ಬರುವ ಮೂರು ಕಾರ್ಯಕ್ರಮಗಳಾದ ಲಕ್ಷ್, ಕಾಯಕಲ್ಪ ಮತ್ತು ಮುಸ್ಕಾನ್ ಪುರಸ್ಕಾರಕ್ಕೆ ಭಾಜನವಾದ ಮೈಸೂರಿನ ಮೊದಲ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ವಿಶೇಷವಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿನ ಆರೋಗ್ಯ ಸೇವೆ, ಗುಣಮಟ್ಟ, ಸ್ವಚ್ಛತೆ, ಶಸ್ತ್ರ ಚಿಕಿತ್ಸೆ ಸುಧಾರಣೆಯೊಂದಿಗೆ ಗುಣಮಟ್ಟವನ್ನು ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡಿ ಉತ್ತೇಜನ ನೀಡುವ ಸಲುವಾಗಿ ಎನ್-ಕ್ವಾಶ್ ಯೋಜನೆಯಡಿ ಹೆರಿಗೆ, ಶಸ್ತ್ರಚಿಕಿತ್ಸೆ ವಿಭಾಗದ ಗುಣಮಟ್ಟ ಮೌಲ್ಯಮಾಪನ ಮಾಡುವ ಲಕ್ಷ್ ಕಾರ್ಯಕ್ರಮ, ಆಸ್ಪತ್ರೆಯಲ್ಲಿನ ಸ್ವಚ್ಛತೆ ಮೌಲ್ಯಮಾಪನ ಮಾಡುವ ಕಾಯಕಲ್ಪ ಕಾರ್ಯಕ್ರಮದಲ್ಲಿ ಕಳೆದ 2022-23ನೇ ಸಾಲಿನಲ್ಲಿ ಚೆಲುವಾಂಬ ಆಸ್ಪತ್ರೆ ಉತ್ತಮ ಅಂಕ ಗಳಿಸಿ ಪ್ರಶಸ್ತಿಗೆ ಭಾಜವಾಗಿತ್ತು.
ಲಕ್ಷ್ ಕಾರ್ಯಕ್ರಮದಲ್ಲಿ 12 ಲಕ್ಷ ರೂ. ಬಹುಮಾನ ಹಾಗೂ ಕಾಯಕಲ್ಪ ಕಾರ್ಯಕ್ರಮದಡಿ ಕಮೆಂಡೇಷನ್ ಬಹುಮಾನವಾಗಿ 3ಲಕ್ಷ ರೂ. ಪಡೆದುಕೊಂಡಿತ್ತು. ಈಗ ಮುಸ್ಕಾನ್ ಪುರಸ್ಕಾರಕ್ಕೆ ಪಾತ್ರವಾಗಿರುವ ಚೆಲುವಾಂಬ ಆಸ್ಪತ್ರೆ 12ಲಕ್ಷ ರೂ. ಬಹುಮಾನ ಪಡೆದುಕೊಳ್ಳಲಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಮುಸ್ಕಾನ್ ಪುರಸ್ಕಾರಕ್ಕೆ ಕೇಂದ್ರ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಚೆಲುವಾಂಬ ಆಸ್ಪತ್ರೆಗೆ ಭೇಟಿ ನೀಡಿ ಹೊರ ರೋಗಿಗಳ ವಿಭಾಗ, ಒಳ ರೋಗಿಗಳ ವಿಭಾಗ, ನವಜಾತ ಶಿಶುಗಳ ವಿಭಾಗ, ಅಪೌಷ್ಟಿಕ ಮಕ್ಕಳ ಆರೈಕೆ ವಿಭಾಗದಲ್ಲಿ ಮೌಲ್ಯಮಾಪನ ನಡೆಸಿ 86 ಅಂಕಗಳನ್ನು ನೀಡಿದ್ದರು.
ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ, ರೋಗಿಗಳೊಂದಿಗೆ ವೈದ್ಯರ ಆಪ್ತ ಸಮಾಲೋಚನೆ, ಉತ್ತಮ ಮೂಲಸೌಕರ್ಯ, ಸೇವೆ ಕುರಿತು ರೋಗಿಯ ತೃಪ್ತಿ, ಮೂಲಸೌಕರ್ಯ, ಸ್ವಚ್ಛತೆ, ನೈರ್ಮಲ್ಯ ಸೇರಿದಂತೆ ಇನ್ನಿತರ ಸೌಕರ್ಯಗಳ ಜತೆಗೆ ರಾಷ್ಟ್ರೀಯ ಗುಣಮಟ್ಟದ ಸೇವೆಯ ಮಾನದಂಡದ ಮೇಲೆ ಆಸ್ಪತ್ರೆಯ ವಿವಿಧ ವಿಭಾಗಕ್ಕೆ ಪ್ರತಿ ವರ್ಷ ಕೇಂದ್ರ ಸರ್ಕಾರ ಮೌಲ್ಯಮಾಪನ ಮಾಡಿ ಈ ರೀತಿ ಪ್ರಮಾಣೀಕರಿಸುತ್ತದೆ.
ಮುಸ್ಕಾನ್ ಕಾರ್ಯಕ್ರಮದಡಿ ಪ್ರಮಾಣೀಕೃತ ಗೌರವಕ್ಕೆ ಪಾತ್ರವಾದ ಚೆಲುವಾಂಬ ಮಕ್ಕಳ ಆಸ್ಪತ್ರೆಗೆ ಮುಂದಿನ ೫ ವರ್ಷದವರೆಗೆ ಕೇಂದ್ರ ಸರ್ಕಾರದಿಂದ ಮತ್ತಷ್ಟು ಆರೋಗ್ಯ ಸೇವೆ ಸುಧಾರಣೆ ಮತ್ತು ಮೂಲಸೌಕರ್ಯ ಬಲವರ್ಧನೆಗೆ ಅನುದಾನ ಬರಲಿದೆ. ಜತೆಗೆ ೧೨ ಲಕ್ಷ ರೂ. ಬಹುಮಾನ ಸಿಗಲಿದೆ. ಈಗ ನೀಡಲಾಗಿರುವ ಪ್ರಮಾಣೀಕೃತ ಮುಂದಿನ ಐದು ವರ್ಷದವರೆಗೆ ಚಾಲ್ತಿಯಲ್ಲಿರಲಿದೆ ಎಂದು ಚೆಲುವಾಂಬ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ.