ಮೈಸೂರು: ಪ್ರಾಣಿ ವಿನಿಮಯ ಯೋಜನೆಯಡಿ ನಗರದ ಚಾಮರಾಜೇಂದ್ರ ಮೃಗಾಲಯದಿಂದ ಹಂಪಿ ಮೃಗಾಲಯಕ್ಕೆ ಶಂಕರ ಹೆಸರಿನ ಎರಡೂವರೆ ವರ್ಷದ ಗಂಡು ಜಿರಾಫೆಯನ್ನು ಕಳುಹಿಸಿಕೊಡಲಾಗಿದೆ.
ಹಂಪಿ ಮೃಗಾಲಯಕ್ಕೆ ಹಲವು ವರ್ಷಗಳಿಂದ ಜಿರಾಫೆ ನೀಡುವ ಬಗ್ಗೆ ಬೇಡಿಕೆ ಇದ್ದ ಹಿನ್ನೆಲೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಆದೇಶದನ್ವಯ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿದ್ದ 9 ಜಿರಾಫೆಗಳ ಪೈಕಿ ಎರಡೂವರೆ ವರ್ಷದ ಶಂಕರ ಹೆಸರಿನ ಗಂಡು ಜಿರಾಫೆಯನ್ನು ವಿಶೇಷ ವಾಹನದ ಮೂಲಕ ಹಂಪಿ ಮೃಗಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಸದ್ಯ ಹಂಪಿ ಮೃಗಾಲಯವನ್ನು ಸುರಕ್ಷಿತವಾಗಿ ತಲುಪಿದ ಶಂಕರನನ್ನು ನಿಗಾದಲ್ಲಿ ಇರಿಸಲಾಗಿದೆ. ಶಂಕರ ಜಿರಾಫೆಯು ಮೈಸೂರು ಮೃಗಾಲಯದಲ್ಲಿರುವ ಭರತ ಮತ್ತು ಲಕ್ಷ್ಮೀ ಹೆಸರಿನ ಜಿರಾಫೆಗಳಿಗೆ ಜನಿಸಿದ್ದ ಗಂಡು ಮರಿಯಾಗಿದೆ. ಈ ಮೂಲಕ ಹಂಪಿ ಮೃಗಾಲಯದಲ್ಲಿ ಕಳೆದೊಂದು ವರ್ಷದಿಂದ ಒಬ್ಬಂಟಿಯಾಗಿದ್ದ ಹೆಣ್ಣು ಜಿರಾಫೆಗೆ ಶಂಕರ ಜೊತೆಯಾದಂತಾಗಿದೆ.
ಈಗ ಮೈಸೂರು ಮೃಗಾಲಯದಲ್ಲಿ ಯುವರಾಜ, ಖುಷಿ, ಭರತ ಸೇರಿದಂತೆ 8 ಜಿರಾಫೆಗಳಿದ್ದು, ಪ್ರಾಣಿ ವಿನಿಮಯ ಯೋಜನೆಯಡಿ ಇನ್ನೂ ಕೆಲವನ್ನು ಸ್ಥಳಾಂತರ ಮಾಡುವ ಪ್ರಸ್ತಾವ ಮೃಗಾಲಯ ಪ್ರಾಧಿಕಾರ ಮುಂದಿದ್ದು, ಇನ್ನೂ ನಿರ್ಧಾರ ಪ್ರಕಟವಾಗಿಲ್ಲ. ಜತೆಗೆ ಈ ಯೋಜನೆಯಡಿ ಮೈಸೂರು ಮೃಗಾಲಯ ವಿದೇಶದಿಂದ ಆಫ್ರಿಕಾದ ಆನೆ, ಜಾಗ್ವಾರ್, ಚೀತಾ, ಗೊರಿಲ್ಲಾ ಮತ್ತು ಚಿಂಪಾಂಜಿ ತರುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.