ಮೈಸೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಮತ್ತು ಸಕಲೇಶಪುರ ಪ್ರವಾಸ ಕೈಗೊಂಡಿದ್ದ ಅವರು ಮಾರ್ಗ ಮಧ್ಯೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ್ದರು.
ಬೆಂಗಳೂರಿನಿಂದ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ನೇರವಾಗಿ ಚಾಮುಂಡಿಬೆಟ್ಟಕ್ಕೆ ತೆರಳಿ ಕರ್ನಾಟಕ ರಾಜ್ಯದ ಹೆಸರಿನಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಅರ್ಚಕರು ನೀಡಿದ ಕುಂಕುಮ, ಪ್ರಸಾದ ಸ್ವೀಕರಿಸಿದರು. ಜತೆಗೆ ನೈವೇಧ್ಯದ ಪ್ರಸಾದ ಪಡೆದುಕೊಂಡರು.
ಸುಮಾರು 15 ನಿಮಿಷ ದೇವಸ್ಥಾನದ ಒಳಗಿದ್ದ ಅಮಿತ್ ಶಾ ಅವರು, ಉತ್ಸವ ಮೂರ್ತಿಯ ಬಳಿ ನಿಂತು ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತರು, ಎಲ್ಲಾ ಅರ್ಚಕರು ಮತ್ತು ಸ್ಥಳೀಯ ನಾಯಕರ ಜೊತೆಗೂಡಿ ಫೋಟೋ ತೆಗೆಸಿಕೊಂಡರು. ಈ ವೇಳೆ ಸಂಸದ ಪ್ರತಾಪ ಸಿಂಹ, ಶಾಸಕ ಎಸ್.ಎ.ರಾಮದಾಸ್, ಮುಖಂಡರಾದ ಗಿರಿಧರ್, ಪ್ರಕಾಶ್ ಪಾಟೀಲ್, ಜೋಗಿ ಮಂಜು ಇದ್ದರು.
ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಭಾನುವಾರ ಸಿಆರ್ಪಿಎಫ್ ಕಮಾಡೆಂಟ್ ಸಭೆ ನಡೆಸಿದ್ದರು. ಅಮಿತ್ ಶಾ ಅವರಿಗೆ ನೀಡಲು ಹಿಮಾಲಯನ್ ಕಂಪನಿಯ ನೀರು, ಡ್ರೈ ಫ್ರೂಟ್ಸ್, ಚಾಕೋಲೆಟ್, ಅವರು ಕೂರುವ ಚೇರ್ಗೆ ಹಾಕುವ ಟವೆಲ್ ಮುಂತಾದವನ್ನು ಖರೀದಿಸಿ ಸಿದ್ಧಪಡಿಸಲಾಗಿತ್ತು.
ಮೈಸೂರಿನಿಂದ ಗುಂಡ್ಲುಪೇಟೆಗೆ ತೆರಳಿದ ಅಮಿತ್ ಶಾ ಅವರು, ಗುಂಡ್ಲುಪೇಟೆಯಲ್ಲಿ ರೋಡ್ ಶೋ ನಡೆಸಿದರು. ಬಳಿಕ ಸಕಲೇಶಪುರ ತಾಲೂಕಿನ ಆಲೂರಿನಲ್ಲಿ ರೋಡ್ ಶೋ ನಡೆಸಿದ ಬಳಿಕ ಮತ್ತೆ ಮೈಸೂರಿಗೆ ಬಂದು ಹುಬ್ಬಳ್ಳಿಗೆ ವಿಮಾನದಲ್ಲಿ ತೆರಳಿದರು.