ಮೈಸೂರು: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ, ಮತಾಂತರ, ಜಿಹಾದಿ ಮತ್ತೆ ಚಾಲ್ತಿಗೆ ಬರಲಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ಮಹೇಶ್ ಹೇಳಿದರು.
ಎಸ್ಟಿ ಮೋರ್ಚಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಗೋಹತ್ಯೆ, ಮತಾಂತರ, ಜಿಹಾದಿ ಇತ್ಯಾದಿಗಳನ್ನು ನಿಯಂತ್ರಿಸಿದೆ. ಕಾಂಗ್ರೆಸ್ಗೆ ಮತ ನೀಡಿದರೆ ಇವೆಲ್ಲ ಮತ್ತೆ ಚಾಲ್ತಿಗೆ ಬರಲಿವೆ. ಕಾಂಗ್ರೆಸ್ ಮುಸ್ಲಿಮರನ್ನು ಮತ ಬ್ಯಾಂಕ್ ಆಗಿ ಮಾಡಿಕೊಂಡಿತ್ತು. ಹಾಗಾಗಿ, ಅವರಿಗೆ ಹೆಚ್ಚು ಮೀಸಲಾತಿ ನೀಡಿತ್ತು. ಬಿಜೆಪಿ ಸರ್ಕಾರ ಅದನ್ನು ತೆಗೆದು ಮತ್ತೆ ಹಿಂದೂಗಳಿಗೆ ನೀಡಿದೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅಧಿಕಾರ ಪಡೆದರೆ ಹಿಂದೂಗಳಿಗೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮತ್ತೆ ಅನ್ಯಾಯವಾಗಲಿದೆ. ಇಂತಹ ವ್ಯವಸ್ಥೆ ಬಾರದಂತೆ ಮತದಾರರು ಎಚ್ಚರವಹಿಸಬೇಕು ಎಂದರು.
ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್ ಮಾಜಿ ಅಧ್ಯಕ್ಷ ಎಂ.ಅಪ್ಪಣ್ಣ ಮಾತನಾಡಿ, ವಾಲ್ಮೀಕಿ ಜಯಂತಿ ಸರ್ಕಾರಿ ಆಚರಣೆ ಮಾಡಿದ್ದು ಯಡಿಯೂರಪ್ಪ ಸರ್ಕಾರ. ದಶಕಗಳಿಂದ ಪರಿವಾರ, ತಳವಾರ ಸಮಸ್ಯೆಗೆ ಪರಿಹಾರವನ್ನು ಬಿಜೆಪಿ ಕಲ್ಪಿಸಿದೆ. ಮಾತ್ರವಲ್ಲದೆ, ಸಮುದಾಯವನ್ನು ಎಸ್ಟಿಗೆ ಸೇರಿಸಿ, ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಮೋದಿ ಸರ್ಕಾರ ಸಮುದಾಯಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಈಗಿರುವ ಬಿಜೆಪಿ ಸರ್ಕಾರದಲ್ಲಿ ಸಮುದಾಯದ ಅತಿ ಹೆಚ್ಚು ಶಾಸಕರಿದ್ದಾರೆ. ಅಂತೆಯೇ ನಿಗಮ-ಮಂಡಳಿಗಳಲ್ಲೂ ಅತಿ ಹೆಚ್ಚು ಮಂದಿಗೆ ಅವಕಾಶ ಮಾಡಿಕೊಟ್ಟಿದೆ. ಅತಿ ಹೆಚ್ಚು ಅನುದಾನ ನೀಡುವ ಮೂಲಕ ಮೂಲ ಸೌಕರ್ಯ ಕಲ್ಪಿಸಿಕೊಟ್ಟಿದ್ದಾರೆ. ಇವೆಲ್ಲವನ್ನೂ ಸಮುದಾಯ ಮನವರಿಕೆ ಮಾಡಿಕೊಂಡು ಮುಂದಿನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಎಲ್.ನಾಗೇಂದ್ರ ಮಾತನಾಡಿ, ಪರಿಶಿಷ್ಟ ಪಂಗಡದವರು ಶ್ರಮಿಕರು. ಇವರ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಮೀಸಲಾತಿಯನ್ನೂ ನೀಡಿದೆ. ಅದನ್ನು ಶೇ.೨ರಿಂದ ಶೇ.೭ಕ್ಕೆ ಏರಿಸಿದೆ. ನಾಯಕರು ಹುಟ್ಟಿನಿಂದಲೇ ನಾಯಕತ್ವ ಗುಣ ಹೊಂದಿದವರು. ನಾವೆಲ್ಲ ನಾಯಕರಾಗಲು ಕಾಯಬೇಕು. ಈ ಸಮುದಾಯದವರು ಸ್ವತಃ ನಾಯಕರೇ ಆಗಿದ್ದಾರೆ ಎಂದು ಪ್ರಶಂಸಿಸಿದರು.
ಚಾಮುಂಡೇಶ್ವರಿ ಕ್ಷೇತ್ರದ ಕಾಟೂರು ಲಿಂಗಪ್ಪ ನಾಯಕ ನೇತೃತ್ವದಲ್ಲಿ ಹಲವು ಮಂದಿ ಬಿಜೆಪಿ ಸೇರ್ಪಡೆಗೊಂಡರು.