ಮೈಸೂರು: ಸಿರಿಧಾನ್ಯಗಳ ಸೇವನೆಯಿಂದ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ. ಮಹಾಂತೇಶಪ್ಪ ಹೇಳಿದರು.
ಸುತ್ತೂರಿನಲ್ಲಿ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ನಂಜನಗೂಡು ಇವರ ಸಹಯೋಗದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನದಡಿ ಸಿರಿಧಾನ್ಯಗಳ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಿರಿಧಾನ್ಯ ಬೆಳೆಗಾರರಿಗೆ ಕೃಷಿ ಇಲಾಖೆಯಿಂದ ದೊರೆಯಬಹುದಾದ ಸೌಲಭ್ಯಗಳ ಬಗ್ಗೆ ಹಾಗೂ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಇರುವ ಯೋಜನೆಗಳ ಬಗ್ಗೆಯೂ ತಿಳಿಸಿದರು.
ಸುತ್ತೂರಿನ ಜೆಎಸ್ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ. ಎಲ್. ತ್ರಿಪುರಾಂತಕ ಮಾತನಾಡಿ ಆಧುಕತೆಯಿಂದ ಅನೇಕ ರೀತಿಯ ಆರೋಗ್ಯದ ಸಮಸ್ಯೆಗಳು ಉಂಟಾಗುತ್ತಿದ್ದು, ಭಾರತೀಯ ಸಂಸ್ಕೃತಿಯ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಹೇಳಿದರು.
ಮೈಸೂರು ವಿಭಾಗದ ಉಪ ಕೃಷಿ ನಿರ್ದೇಶಕ ರಾಜು ಕೆ. ಮಾತನಾಡಿ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ ಇತರೆ ಸಂಘ ಸಂಸ್ಥೆಗಳು ಸಿರಿಧಾನ್ಯಗಳ ಪ್ರಚಾರಕ್ಕಾಗಿ ಸಾಕಷ್ಟು ಶ್ರಮ ವಹಿಸುತ್ತಿದ್ದು, ಇಂದು ಸಿರಿಧಾನ್ಯಗಳು ಎಲ್ಲ ಕಡೆ ದೊರೆಯಲು ಸಹಾಯಕವಾಗಿವೆ. ವಿಶ್ವ ಆಹಾರ ಸಂಸ್ಥೆಯು 2023 ನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಿದ್ದು, ಈ ಸಿರಿಧಾನ್ಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆಯಲು ಸರ್ಕಾರದ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಕೆವಿಕೆಯ ಹಿರಿಯ ವಿಜ್ಞಾನಿ ಮಂಜುನಾಥ ಅಂಗಡಿ ಮಾತನಾಡಿ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಅವಶ್ಯಕವಾಗಿದೆ. ರೈತರು ಬೆಳೆಗಳನ್ನು ಬೆಳೆಯುವುದರ ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಿರಿಧಾನ್ಯಗಳನ್ನು ಆಹಾರದಲ್ಲಿ ಬಳಸಬೇಕೆಂದು ತಿಳಿಸಿದರು.
ನಿವೃತ್ತ ಗೃಹ ವಿಜ್ಞಾನಿ ಜಮುನಾ ಅರಸ್, ರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸಿರಿಧಾನ್ಯಗಳಾದ ಸಾಮೆ, ರಾಗಿ, ನವಣೆ, ಹಾರಕ, ಬರಗು, ಊದಲು, ಜೋಳ, ಸಜ್ಜೆ ಹಾಗೂ ಕೊರಲೆಗಳು ಅಧಿಕ ಪ್ರಮಾಣದ ಪೋಷಕಾಂಶಗಳನ್ನು ಹೊಂದಿವೆ. ಮುಖ್ಯವಾಗಿ ನಾರು, ಕಬ್ಬಿಣ, ಕ್ಯಾಲ್ಸಿಯಂ, ಜೀವಸತ್ವಗಳು ಹಾಗೂ ಇತ್ಯಾದಿ ಪೋಷಕಾಂಶಗಳ ಆಗರವಾಗಿವೆ. ಇವುಗಳನ್ನು ಬಳಸಿ ಎಲ್ಲ ಬಗೆಯ ಆಹಾರಗಳನ್ನು ತಯಾರಿಸಬಹುದು. ಸಿರಿಧಾನ್ಯಗಳಲ್ಲಿ ನಾರಿನ ಪ್ರಮಾಣವು ಅಧಿಕವಾಗಿರುವುದರಿಂದ ಇವುಗಳ ಸೇವನೆಯ ನಂತರ ದೇಹದಲ್ಲಿ ನಿಧಾನವಾಗಿ ಸಕ್ಕರೆ ಅಂಶ ಬಿಡುಗಡೆಯಾಗುವುದು. ಆದ್ದರಿಂದ ಮಧುಮೇಹಿಗಳಿಗೆ ಉತ್ತಮ ಆಹಾರವಾಗಿವೆ ಎಂದು ಹೇಳಿದರು.
ಕೆವಿಕೆಯ ಬೇಸಾಯ ಶಾಸ್ತ್ರ ವಿಜ್ಞಾನಿ ಶಾಮರಾಜ್ ರವರು ಸಿರಿಧಾನ್ಯಗಳ ಸುಧಾರಿತ ಬೇಸಾಯ ಕ್ರಮಗಳು, ಸಿರಿಧಾನ್ಯಗಳ ತಳಿಗಳು, ರೋಗ ಹಾಗೂ ಕೀಟ ಬಾಧೆಯನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರೆ, ವಸುಧಾ ಆಹಾರ ಉತ್ಪನ್ನಗಳ ಉದ್ಯಮಿ ಧನಲಕ್ಷ್ಮಿ ಅವರು ಸಿರಿಧಾನ್ಯಗಳನ್ನು ಬಳಸಿ ತಯಾರಿಸಬಹುದಾದ ಉತ್ಪನ್ನಗಳ ಬಗ್ಗೆ ಜೊತೆಗೆ ತಮ್ಮ ಘಟಕದಲ್ಲಿ ತಯಾರಿಸುವ ಸಿರಿಧಾನ್ಯಗಳ ಆಹಾರ ಉತ್ಪನ್ನಗಳ ಬಗ್ಗೆ ತಿಳಿಸಿದರು
ಇದೇ ಸಂದರ್ಭ ಏರ್ಪಡಿಸಿದ್ದ ಸಿರಿಧಾನ್ಯಗಳ ಪ್ರಚಾರ ಕಾರ್ಯಕ್ರಮದ ಅಂಗವಾಗಿ ಸಿರಿಧಾನ್ಯಗಳ ಅಡುಗೆ ಸ್ಪರ್ಧೆ ಹಾಗೂ ಚಿತ್ರಕಲಾ ಮತ್ತು ಸಿರಿಧಾನ್ಯಗಳ ಅಡುಗೆ ಸ್ಪರ್ಧೆಯಲ್ಲಿ ಜೆಎಎಸ್ಎಸ್ ಬಿಎಡ್ ಕಾಲೇಜಿನ 16 ವಿದ್ಯಾರ್ಥಿಗಳು ಹಾಗೂ ಆಹಾರ ಉದ್ಯಮಿ ಧನಲಕ್ಷ್ಮಿಯವರು ಸಿರಿಧಾನ್ಯಗಳ ಆಹಾರಗಳನ್ನು ತಯಾರಿಸಿ ಪ್ರದರ್ಶಿಸಿದರು.
ಸ್ಪರ್ಧೆಯಲ್ಲಿ ಕುಮಾರಿ ಪೂಜಾ ಹಾಗೂ ಪುಷ್ಪಾ ರವರು ಪ್ರಥಮ ಸ್ಥಾನ ಗಳಿಸಿದರೆ, ಕುಮಾರಿ ನಿಸರ್ಗ ಎಸ್.ಪಿ., ಯವರು ದ್ವಿತೀಯ ಸ್ಥಾನ ಹಾಗೂ ಧನಲಕ್ಷ್ಮಿ ಯವರು ತೃತೀಯ ಸ್ಥಾನ ಪಡೆದರು. ಸಿರಿಧಾನ್ಯಗಳ ಚಿತ್ರಕಲಾ ಸ್ಪರ್ಧೆಯಲ್ಲಿ ಬಿಎಡ್ ಕಾಲೇಜಿನ 21 ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ ಸ್ಥಾನವನ್ನು ಕುಮಾರಿ ಸಿಂಧೂಶ್ರೀ ಪಿ, ದ್ವಿತೀಯ ಸ್ಥಾನವನ್ನು ಕುಮಾರಿ ಮಮತಾ ಎಮ್. ಹಾಗೂ ತೃತೀಯ ಸ್ಥಾನವನ್ನು ವರ್ಷಾರವರು ಗಳಿಸಿದರು. ಎರಡೂ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನವನ್ನು ಜೊತೆಗೆ ಭಾಗವಹಿಸಿದವರಿಗೆ ಪ್ರಶಂಸನಾ ಪತ್ರವನ್ನು ವಿತರಿಸಲಾಯಿತು.