ಮೈಸೂರು: ನಗರದಲ್ಲಿ ಭಾವನನ್ನೇ ಭಾಮೈದುನ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದ ಬೆನ್ನಲ್ಲೇ, ಸೋಮವಾರ ಮತ್ತೊಂದು ಕೊಲೆಯಾಗಿದೆ. ಮೃತರನ್ನು ಗೌಸಿಯಾನಗರದ ನಿವಾಸಿ ಇಬ್ರಾಹಿಂ ಎಂದು ಗುರುತಿಸಲಾಗಿದೆ.
ಉದಯಗಿರಿ ಠಾಣಾ ವ್ಯಾಪ್ತಿಯ ಗೌಸಿಯಾನಗರದಲ್ಲಿ ತನ್ನ ಮನೆಯ ಮುಂದೆ ನಿಂತಿದ್ದ ಇಬ್ರಾಹಿಂ ಎಂಬಾತನನ್ನು ಮೂವರ ಗುಂಪೊಂದು ಹಾಡಹಗಲೇ ಹೊಟ್ಟೆಗೆ ಮಾರಕಾಸ್ತ್ರದಿಂದ ತಿವಿದು ಕೊಲೆಗೈದು ಪರಾರಿಯಾಗಿದ್ದಾರೆ.
ಕೊಲೆಗೆ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಉದಯಗಿರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರವಿಕುಮಾರ್, ಸಬ್ ಇನ್ಸ್ಪೆಕ್ಟರ್ ಸುನಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.