ಮೈಸೂರು: ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ಸಲುವಾಗಿ ಸರ್ಕಾರ ರಾಜ್ಯದಾದ್ಯಂತ ಪಬ್ಲಿಕ್ ಶಾಲೆಗಳನ್ನು ಸ್ಥಾಪನೆ ಮಾಡಿದೆ. ಆದರೆ ಈ ಶಾಲೆಗಳ ಸ್ಥಿತಿಗತಿಗಳನ್ನು ಪರಿಶೀಲಿಸದ ಕಾರಣದಿಂದ ಹಲವು ಶಾಲೆಗಳಲ್ಲಿ ಕಲಿಯುವ ಮಕ್ಕಳ ಸ್ಥಿತಿ ದೇವರಿಗೆ ಪ್ರೀತಿ ಎನ್ನುವಂತಾಗಿದೆ.
ಈ ಪಬ್ಲಿಕ್ ಶಾಲೆಗಳು ಮೂಲ ಸೌಕಯಗಳಿಲ್ಲದ ಸರ್ಕಾರಿ ಶಾಲೆಗಳಂತೆಯೇ ಆಗಿದ್ದು, ಮೂಲ ಸೌಕರ್ಯಗಳ ಕೊರತೆಯಿಂದ ಮಕ್ಕಳು ಬೆಂಚುಗಳಿಲ್ಲದೆ, ನೆಲದಲ್ಲಿ ಕುಳಿತುಕೊಳ್ಳುವಂತಾಗಿದೆ. ಅಷ್ಟೇ ಅಲ್ಲದೆ ಸುಸಜ್ಜಿತ ಕೊಠಡಿ ಮತ್ತು ಶಿಕ್ಷಕರ ಕೊರತೆಯಿಂದ ವಿದ್ಯಾರ್ಥಿಗಳು ಬಳಲುವಂತಾಗಿದೆ. ಪಬ್ಲಿಕ್ ಶಾಲೆಗಳು ಹೀಗೂ ಇರುತ್ತವೆಯಾ? ಎಂಬುದು ಹುಣಸೂರು ತಾಲೂಕಿನ ಗಾವಡಗೆರೆ ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದವರಿಗೆ ಗೊತ್ತಾಗುತ್ತದೆ.
ಈ ಶಾಲೆಯಲ್ಲಿ ಪಾಠ ಪ್ರವಚನಕ್ಕೆ ಕೊರತೆ ಇಲ್ಲ, ಆದರೆ ಈ ಶಾಲೆಯಲ್ಲಿ ಮಕ್ಕಳಿಗೆ ಅನುಗುಣವಾಗಿ ಕೊಠಡಿಗಳು ಇಲ್ಲದ ಕಾರಣ. ಮಕ್ಕಳು ಶಾಲೆಯ ಬೇರೆ ಬೇರೆ ತರಗತಿಗಳಲ್ಲಿ ಕುಳಿತು ಪಾಠ ಕೇಳಬೇಕಾಗಿದ್ದು, ಒಂದೇ ತರಗತಿಯಲ್ಲಿ ಕುರಿಗಳನ್ನು ಕೂಡಿ ಹಾಕುವಂತೆ ಮಕ್ಕಳನ್ನು ಕೂರಿಸಿ ಪಾಠಮಾಡಲಾಗುತ್ತಿದೆ.
ಗಾವಡಗೆರೆ ಪಬ್ಲಿಕ್ ಶಾಲೆಯಲ್ಲಿ 13 ಕೊಠಡಿಗಳಿದ್ದು ಇವುಗಳಲ್ಲಿ 5 ಕೊಠಡಿಗಳು ಮಾತ್ರ ಪಾಠ ಮಾಡಲು ಯೊಗ್ಯವಾಗಿದ್ದು ಉಳಿದ 8 ಕೊಠಡಿಗಳು ಮಳೆಗೆ ಸೋರಿ ಇವತ್ತೋ ನಾಳೆಯೋ ಬೀಳುವಂತಾಗಿದೆ. ಇನ್ನು ಈ ಶಾಲೆಯಲ್ಲಿ ಮುಖ್ಯ ಶಿಕ್ಷಕರು ಸೇರಿದಂತೆ ಒಟ್ಟು 12 ಜನ ಶಿಕ್ಷಕರ ಅಗತ್ಯವಿದ್ದು, ಸದ್ಯ 7 ಜನ ಶಿಕ್ಷಕರಿದ್ದು ಇನ್ನೂ ಗಣಿತ ಹಾಗೂ ವಿಜ್ಙಾನ ವಿಷಯಗಳ ಇಬ್ಬರು ಶಿಕ್ಷಕರ ಅಗತ್ಯತೆ ಇದೆ.
ಪ್ರಾಥಮಿಕ ವಿಭಾಗದಲ್ಲಿ ಒಟ್ಟು 450 ಮಕ್ಕಳಿದ್ದಾರೆ ಇವರಲ್ಲಿ 201 ಹೆಣ್ಣು ಹಾಗೂ 163 ಗಂಡು ಮಕ್ಕಳಿದ್ದು ಉಳಿದ 60 ಮಕ್ಕಳು 1, 2 ಹಾಗೂ 3ನೇ ತರಗತಿಯ ಆಂಗ್ಲ ಮಾಧ್ಯಮದ ಮಕ್ಕಳನ್ನು ಪ್ರೌಢ ಶಾಲೆಯ ಕೊಠಡಿಗಳಿಗೆ ಕಳುಹಿಸಲಾಗುತ್ತಿದೆ. ಹೆಣ್ಣು ಮಕ್ಕಳು ಬಳಸುವ ಶೌಚಾಲಯಗಳು ತುಂಬಾ ಇಕ್ಕಟ್ಟಾಗಿದ್ದು, ಕಳಪೆಯಾಗಿವೆ.
ಗಾವಡಗೆರೆ ಭಾಗದಲ್ಲಿ ಹೆಚ್ಚು ಬಡವರು ರೈತಾಪಿ ಜನರಿದ್ದು ನಾವು ಸರ್ಕಾರಿ ಶಾಲೆಗಳನ್ನು ನಂಬಿ ಶಾಲೆಗೆ ಸೇರಿಸುತ್ತೇವೆ ಆದರೆ ಇಲ್ಲಿ ಶಿಕ್ಷಕರ ಕೊರತೆ ಹಾಗೂ ಕೊಠಡಿಗಳ ಸಮಸ್ಯೆಯಿದ್ದು ಸಂಬಂಧಪಟ್ಟವರು ಗಮನಹರಿಸಬೇಕಿದೆ ಎಂದು ಪೋಷಕಿ ರುಕ್ಮಿಣಿ ಹೇಳಿದರೆ, ಶಾಲೆಯ ಮಧ್ಯಭಾಗದಲ್ಲಿ ದುರಸ್ಥಿಯಲ್ಲಿದ್ದ ಕಟ್ಟಡಗಳನ್ನು ತೆರವುಗೊಳಿಸಿ ಎರಡು ವರ್ಷ ಆಯ್ತು ಆದರೆ ಇದುವರೆಗೂ ಕಾಮಗಾರಿಯ ಕೆಲಸವನ್ನು ಮಾಡದ ಗುತ್ತಿಗೆ ದಾರರ ಬಗ್ಗೆ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ಜಗದೀಶ್ ಆಗ್ರಹಿಸಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಸರ್ಕಾರದ ಪಬ್ಲಿಕ್ ಶಾಲೆಗಳು ಹಲವು ಸಮಸ್ಯೆಗಳಿಂದ ನರಳುತ್ತಿರುವುದಂತು ಸತ್ಯ.