ಮೈಸೂರು: ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ವಿಧೇಯಕ ಜಾರಿ ಕುರಿತಂತೆ ಭಾರೀ ಚರ್ಚೆಯಾಗುತ್ತಿದ್ದರೆ ಇತ್ತ ಆಡಳಿತ ಪಕ್ಷದವರೇ ಆದ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರು ಭಾರತ ಬಹುತ್ವವುಳ್ಳದೇಶವಾಗಿದ್ದು, ಅಂಬೇಡ್ಕರ್ ಸಂವಿಧಾನವನ್ನು ನೀಡಿದ್ದು, ತಮಗೆ ಇಷ್ಟ ಬಂದ ಧರ್ಮ, ದೇವರನ್ನು ಪೂಜೆ ಮಾಡಲು ಅವಕಾಶ ನೀಡಲಾಗಿದೆ ಎಂದು ಹೇಳುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 12 ಶತಮಾನದಲ್ಲಿ ಸಮಾನತೆ ಬಗ್ಗೆ ಬಸವಣ್ಣ ತಿಳಿಸುವ ಮೂಲಕ ಮಾನದ ಧರ್ಮ ಸ್ಥಾಪನೆ ಮಾಡಿದ್ದಾರೆ. ಜತೆಗೆ ಜಾತಿ ಧರ್ಮ ಭೇದವಿಲ್ಲದೆ ಸಮಾನತೆಯನ್ನು ಸಾರಿದ್ದಾರೆ.
ಪ್ರಧಾನಿ ಮೋದಿ ಹಿಂದುತ್ವದ ಬಗ್ಗೆ ಎಲ್ಲಿಯೂ ಹೇಳಿಲ್ಲ. ದೇಶದ ಮಹನಿಯರು ಸಹಬಾಳ್ವೆ ಬಗ್ಗೆಯೇ ಹೇಳಿದ್ದಾರೆ. ಆರ್.ಎಸ್.ಎಸ್ ನಾಯಕರ ಮಕ್ಕಳು ಮುಸ್ಲಿಂರ ಮಕ್ಕಳನ್ನು ಮದುವೆಯಾಗಿದ್ದಾರೆ ಅವರನ್ನು ಜೈಲಿಗೆ ಹಾಕಲು ಸಾಧ್ಯವಾ?. ಸಿನಿಮಾ ನಟರು ಬ್ರಾಹ್ಮಣರನ್ನು ಮದುವೆಯಾಗಿದ್ದಾರೆ. ಇವರನ್ನು ಜೈಲಿಗೆ ಹಾಕಲು ಸಾಧ್ಯವಾ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ನವರು ಇಬ್ಬಗೆಯ ನಾಟಕವಾಡುತ್ತಿದ್ದಾರೆ. ನಾವು ಹೊರಗೆ ಇದ್ದಾಗ ಮಂಡನೆ ಮಾಡಿದರು ಅಂತ ಹೇಳ್ತಾರೆ. ಹೊರಗಡೆ ಹರಟೆ ಹೊಡೆಯುತ್ತ ಕುಳಿತು ಮುಸ್ಲಿಂರ ಧಾರ್ಮಿಕ ಸ್ವಾತಂತ್ರ್ಯ ಕಾಪಾಡುತ್ತಿದ್ದೀರಾ ಎಂದು ವಾಗ್ದಾಳಿ ನಡೆಸಿದರು.
ದಲಿತರು ಮತಾಂತರ ಆಗಲೇ ಬಾರದು. ಧಾರ್ಮಿಕ ದಿಗ್ಬಂಧನ ಹಾಕಲಾಗುತ್ತಿದೆ. ದಿಗ್ಭಂದನ ಹೇರಲಾಗುತ್ತಿದೆ. ಬಸವಣ್ಣನ ತತ್ವವವನ್ನು ಅಳವಡಿಸಿಕೊಂಡಿರುವ ಮಠಾಧೀಶರು ಯಾರೂ ಮಾತನಾಡುತ್ತಿಲ್ಲ. ಚಿತ್ರದುರ್ಗದ ಮಠದವರು ಬಾಯಿ ಮುಚ್ಚಿ ಕುಳಿತಿದ್ದಾರೆ. ಸರ್ಕಾರದ ಅನುದಾನ ಬಾಯಿ ಮುಚ್ಚಿಸಿದೆ. ಅಹಿಂದ ಮಠಗಳು ಮಾತನಾಡುತ್ತಿಲ್ಲ. ನಿಮ್ಮ ಬಾಯಿ ಕಟ್ಟಿರುವುದು ಯಾರು ಎಂದು ಪ್ರಶ್ನಿಸಿದರು.
ಇನ್ನು ಸಾಹಿತಿಗಳು, ಚಿಂತಕರು ಬಾಯಿಬಿಡುತ್ತಿಲ್ಲ. ಅವರು ರಾಜ್ಯೋತ್ಸವ ಪ್ರಶಸ್ತಿಗಷ್ಟೆ ಸೀಮಿತವಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಬೆಳಗಾವಿಯಲ್ಲಿ ದಾಂಧಲೆಯಾದರೂ ಬೆಳಗಾವಿ ಜಿಲ್ಲೆ ನಾಯಕರು ಯಾರು ಮಾತನಾಡುತ್ತಿಲ್ಲ. ಕನ್ನಡಿಗರು ಮತ ಹಾಕಿಲ್ಲವಾ? ಮರಾಠಿ ಮತದಾರರೆ ಹೆಚ್ಚಾದರಾ? ಎಂದು ಪ್ರಶ್ನಿಸಿದ ಅವರು, ಎಂಇಎಸ್ ನ್ನು ಬ್ಯಾನ್ ಮಾಡ ಬೇಕು ಎಂದು ಆಗ್ರಹಿಸಿದರು.