ಮೈಸೂರು: ಅಯೋಧ್ಯೆ ರಾಮಜನ್ಮ ಭೂಮಿ ನಿರ್ಮಾಣ ಹೋರಾಟ ಸಾಕಾರಗೊಳ್ಳಲು ವಿಜಯಸಂಕಲ್ಪ ಯಾತ್ರೆ ಮೂಲಕ ಯಶಸ್ವಿಯಾಗಲು ಯೋಜನೆ ರೂಪಿಸಿದವರು ಮಾಜಿ ಪ್ರಧಾನಿ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಎಚ್.ವಿ.ರಾಜೀವ್ ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಅವರ 97ನೇ ಜನ್ಮದಿನಾಚರಣೆ ಅಂಗವಾಗಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಚಾಮುಂಡಿಪುರಂನಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಟಲ್ ಬಿಹಾರಿ ವಾಜಪೇಯಿ ರವರು ಮೂರು ಬಾರಿ ನಮ್ಮ ದೇಶದ ಪ್ರಧಾನ ಮಂತ್ರಿಗಳಾಗಿ ತಮ್ಮದೇ ಆದ ಅಭೂತಪೂರ್ವ ಸೇವೆ ಸಲ್ಲಿಸಿದ್ದಾರೆ.
ರಾಜಕಾರಣದೊಂದಿಗೆ ಅನೇಕ ಸಾಮಾಜಿಕ, ಸಾಂಸ್ಕೃತಿಕ, ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆಗೈದಿದ್ದಾರೆ. 1961 ರಿಂದ ಬಹುಕಾಲ ರಾಷ್ಟ್ರೀಯ ಭಾವೈಕ್ಯತಾ ಮಂಡಳಿಯ ಸದಸ್ಯರಾಗಿ, ಆಲ್ ಇಂಡಿಯಾ ಸ್ಟೇಷನ್ ಮಾಸ್ಟರ್ಸ್ ಹಾಗೂ ಅಸಿಸ್ಟೆಂಟ್ಸ್ ಸ್ಟೇಷನ್ ಮಾಸ್ಟರ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾಗಿಯೂ ದುಡಿದದ್ದು, ಪಂಡಿತ್ ಧೀನ್ ದಯಾಳ್ ಉಪಾಧ್ಯಾಯ ಸ್ಮಾರಕ ಸಮಿತಿ, ಜನ್ಮಭೂಮಿ ಸ್ಮಾರಕ ಸಮಿತಿಗಳ ಸದಸ್ಯರಾಗಿಯೂ ಇವರ ಕೊಡುಗೆ ಕೈಗನ್ನಡಿಯಾಗಿದೆ ಎಂದು ಅವರು ಹೇಳಿದರು.
ಇದಲ್ಲದೇ ರಾಜ್ಯಸಭೆ, ಲೋಕಸಭೆಗಳ ಅನೇಕ ಸಮಿತಿಗಳಲ್ಲಿ ಕಾರ್ಯ ನಿರ್ವಹಿಸಿರುತ್ತಾರೆ. ಉತ್ತಮ ಕವಿ, ಬರಹಗಾರರಾಗಿಯೂ ಹೆಸರು ಗಳಿಸಿದ್ದಾರೆ. ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶಿ ನೀತಿ ಅನುಸರಿಸುವಿಕೆ ಮತ್ತು ವೀರ ಅರ್ಜುನ್ ಅಂತಹ ಅನೇಕ ಪತ್ರಿಕೆಗಳ ಸಂಪಾದಕರಾಗಿಯೂ ಅಟಲ್ ಜೀ ರವರು ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ನಗರ ಪಾಲಿಕಾ ಸದಸ್ಯರಾದ ಮಾ ವಿ ರಾಂಪ್ರಸಾದ್, ಇಳೈ ಆಳ್ವಾರ್ ಸ್ವಾಮೀಜಿ, ಕಲ್ಯಾಣ ಮಂಟಪ ಮಾಲೀಕರ ಸಂಘದ ಅಧ್ಯಕ್ಷರಾದ ಕೆ ಆರ್ ಸತ್ಯನಾರಾಯಣ್, ಕರ್ನಾಟಕ ಸರ್ಕಾರದ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ರಾಜ್ಯ ನಿರ್ದೇಶಕ ಎಂ ಆರ್ ಬಾಲಕೃಷ್ಣ, ಹಿರಿಯ ಪತ್ರಕರ್ತರಾದ ಅನಿಲ್ ಕುಮಾರ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ರಾಕೇಶ್ ಭಟ್, ಸುಚೇಂದ್ರ, ವಿಕಾಶ್ ಶಾಸ್ತ್ರಿ, ಕಲ್ಕೆರೆ ನಾಗರಾಜ್, ಶ್ರೀನಿವಾಸ್ ಪ್ರಸಾದ್, ರಂಗನಾಥ್, ಕೃಷ್ಣ, ರಾಜಗೋಪಾಲ್, ಚಕ್ರಪಾಣಿ, ಕಡಕೊಳ ಜಗದೀಶ್, ತೇಜಸ್ವಿ ಕೌಶಿಕ್, ಗಗನ್, ಕಡಕೊಳ ಜಗದೀಶ್, ಜಯಸಿಂಹ ಶ್ರೀಧರ್ ಹಾಗೂ ಇನ್ನಿತರರು ಇದ್ದರು.