ಮೈಸೂರು: ರಂಗಾಯಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವಿಶೇಷ ಘಟಕ ಯೋಜನೆ ಅಡಿಯಲ್ಲಿ ಮಾ.5 ಮತ್ತು 6ರಂದು. ಜನಪರ ಉತ್ಸವ ರಂಗಾಯಣದ, ವನರಂಗ ಮತ್ತು ಬಿ.ವಿ. ಕಾರಂತ ರಂಗಚಾವಡಿಯಲ್ಲಿ ನಡೆಯಲಿದ್ದು, 50ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸುತ್ತಿದ್ದು ಇದರಲ್ಲಿ 900ಕ್ಕೂ ಹೆಚ್ಚು ಪರಿಶಿಷ್ಟ ಜನಪದ ಕಲಾವಿದರು ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ.
ಮಾ.5ರಂದು ಮಧ್ಯಾಹ್ನ 3 ಗಂಟೆಗೆ ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ರಂಗಾಯಣದವರೆಗೆ ಜನಪದ ಕಲಾ ತಂಡಗಳ ಮೆರವಣಿಗೆ ನಡೆಯಲಿದ್ದು, ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡುವರು. ನಂತರ ಅಂದು ಸಂಜೆ 4.30ಕ್ಕೆ ವನರಂಗದಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಲಿದ್ದು, ಹಿರಿಯ ಜನಪದ ಅಂಧ ಕಲಾವಿದೆ ಸೋಬಾನೆ ಗೌರಮ್ಮ ಜನಪದ ಕಲಾಪ್ರದರ್ಶನಕ್ಕೆ ಚಾಲನೆ ನೀಡುವರು. ಕಾರ್ಯಕ್ರಮದ ಭಾಗವಾಗಿ ನಡೆಯುವ ಶಿಲ್ಪಕಲಾ ಶಿಬಿರಕ್ಕೆ ಸಂಸದ ವಿ.ಶ್ರೀನಿವಾಸ ಪ್ರಸಾದ್ ಚಾಲನೆ ನೀಡಲಿದ್ದು, ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ.
ಮೊದಲ ದಿನ ಸುಳ್ಯ ಮಂಜುನಾಥ್ ಮತ್ತು ತಂಡದಿಂದ ಕರಗೋಲು, ಮೈಸೂರಿನ ಮಧುಸೂಧನ ಮತ್ತು ತಂಡದಿಂದ ಕಂಸಾಳೆ, ಮಾಗಡಿ ಕೆಂಪಮ್ಮ ಮತ್ತು ತಂಡದಿಂದ ಪಟಕುಣಿತ, ರಾಮನಗರ ಚಂದ್ರಶೇಖರ್ ಮತ್ತು ತಂಡದಿಂದ ಚಿಲಿಪಿಲಿ ಗೊಂಬೆ, ಮದ್ದೂರು ಲಿಂಗರಾಜು ಮತ್ತು ತಂಡದಿಂದ ತಮಟೆ, ಹುಣಸೂರಿನ ಪುರುಷೋತ್ತಮ್ ಮತ್ತು ತಂಡದಿಂದ ನಗಾರಿ, ಬಳ್ಳಾರಿಯ ರಾಮು ಮತ್ತು ತಂಡದಿಂದ ಹಗಲುವೇಷ, ಸಾಗರದ ನಿರ್ಮಲಾ ಮತ್ತು ತಂಡದಿಂದ ಮಹಿಳಾ ಡೊಳ್ಳು ಕುಣಿತ, ಮಳವಳ್ಳಿ ಪುನೀತ್ಕುಮಾರ್ ಮತ್ತು ತಂಡದಿಂದ ಕೊಂಬು ಕಹಳೆ, ಹಾಸನದ ರಂಜಿತಾ ಮತ್ತು ತಂಡದಿಂದ ಮಹಿಳಾ ವೀರಗಾಸೆ, ಕನಕಪುರದ ಪರಶುರಾಮನಾಯಕ ಮತ್ತು ತಂಡದಿಂದ ಪೂಜಾಕುಣಿತ, ಕೊಡಗಿನ ಶ್ರೀನಿವಾಸ್ ಮತ್ತು ತಂಡದಿಂದ ಕೊಡವ ವಾಲಗ, ಬೆಂಗಳೂರಿನ ಕೃಷ್ಣಮೂರ್ತಿ ಮತ್ತು ತಂಡದಿಂದ ಹುಲಿವೇಷ ಕುಣಿತ, ಬೆಳಗಾವಿಯ ಶಶಿಧರ ಭಜಂತ್ರಿ ಮತ್ತು ತಂಡದಿಂದ ಕರಡಿ ಮಜಲು ಹಾಗೂ ತುಮಕೂರಿನ ತ್ಯಾಗರಾಜು ಮತ್ತು ತಂಡದಿಂದ ಸೋಮನಕುಣಿತ ಜನಪದ ಕಲಾ ಪ್ರಕಾರಗಳ ಪ್ರದರ್ಶನಗಳು ನಡೆಯಲಿದೆ.
ಮಾ.6ರಂದು ಬೆಳಗ್ಗೆ 9.30ರಿಂದ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಚಂಡೆಮೇಳದೊಂದಿಗೆ ಈ ಕಾರ್ಯಕ್ರಮ ಆರಂಭಗೊಳ್ಳಲಿದೆ. ನಂತರ ಬೆಳಗ್ಗೆ 11 ಗಂಟೆಗೆ ನಡೆಯುವ ವಿಚಾರ ಸಂಕಿರಣದಲ್ಲಿ ಜಾನಪದ ತಜ್ಞ ನಂಜಯ್ಯ ಹೊಂಗನೂರು ಮತ್ತು ಡಾ.ರತ್ನಮ್ಮ ಜಾನಪದ ನೆಲದ ಸಂಸ್ಕೃತಿ ವಿಷಯ ಕುರಿತು ವಿಚಾರ ಮಂಡಿಸಲಿದ್ದಾರೆ. ಹಿರಿಯ ಜನಪದ ವಿದ್ವಾಂಸ ಪ್ರೊ.ಚೇತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಆಶಯ ನುಡಿಗಳನ್ನಾಡಲಿದ್ದಾರೆ. ವಿಚಾರ ಸಂಕಿರಣದ ನಂತರ ಪಂಡಿತ್ ವೆಂಕಟೇಶ್ಕುಮಾರ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ ಕಾರ್ಯಕ್ರಮ ನಡೆಯಲಿದ್ದು, ಸುಗಮ ಸಂಗೀತ, ಕರ್ನಾಟಕ ಸಂಗೀತ, ಬಹುವಾದ್ಯ ಲಹರಿ, ಜುಗಲ್ಬಂದಿ ಸಹಿತವಾಗಿ ವಿವಿಧ ಜಾನಪದ ಗಾಯನ, ಕುಣಿತಗಳ ಪ್ರದರ್ಶನಗಳು ನಡೆಯಲಿವೆ. ಸಂಜೆ 7.30ಕ್ಕೆ ರಂಗಜಗುಲಿಯ ಒಂದು ಹಳ್ಳಿಯ ಕಥೆ ನಾಟಕ ಪ್ರದರ್ಶನದೊಂದಿಗೆ ಕಾರ್ಯಕ್ರಮಕ್ಕೆ ತೆರೆಬೀಳಲಿದೆ