ಚಾಮರಾಜನಗರ: ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಬೇಕಾದ ಗುಂಡ್ಲುಪೇಟೆ ಪಟ್ಟಣದ ವಿದ್ಯಾರ್ಥಿ ನಿಲಯ ಕಟ್ಟಡ ಅಪೂರ್ಣವಾಗಿ ನಿಂತ ಕಾರಣ ಪುಂಡಪೋಕರಿಗಳ ಅಡ್ಡೆಯಾಗಿದೆ.
ಚಾಮರಾಜನಗರದ ಹೆಚ್ಚಿನ ಗ್ರಾಮೀಣ ಪ್ರದೇಶಗಳಲ್ಲಿ ಬಡವರೇ ಹೆಚ್ಚಿದ್ದು, ಮೂಲ ಸೌಕರ್ಯದ ಕೊರತೆ ಜತೆಗೆ ವಿದ್ಯಾಭ್ಯಾಸ ಮಾಡಲು ಹತ್ತಿರದಲ್ಲಿ ಶಾಲಾ ಕಾಲೇಜುಗಳಿಲ್ಲದೆ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಹೀಗಿರುವಾಗ ಸುಸಜ್ಜಿತವಾದ ಕಟ್ಟಡದ ವಿದ್ಯಾರ್ಥಿನಿಲಯ ಆದಷ್ಟು ಬೇಗ ಆಗಲಿ ಎಂದು ಜನ ಬಯಸಿದ್ದರು. ಆದರೆ ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿ ನಿಲಯದ ಕಾಮಗಾರಿ ನಡೆಯದೆ ಅರ್ಧಕ್ಕೆ ನಿಂತ ಕಾಮಗಾರಿಯಿಂದ ಸರ್ಕಾರದ ಉದ್ದೇಶ ನೀರು ಪಾಲಾಗಿದ್ದು, ಅರ್ಧಕ್ಕೆ ಕಾಮಗಾರಿ ನಿಂತ ಕಟ್ಟಡವೀಗ ಪಾಳು ಬಿದ್ದಂತೆ ಗೋಚರಿಸುತ್ತಿದ್ದು, ಅನೈತಿಕ ಚಟುವಟಿಕೆಗೆ ಕೇಂದ್ರವಾಗುತ್ತಿರುವುದು ಎದ್ದು ಕಾಣುತ್ತಿದೆ.
ಇನ್ನು ಈ ಕಟ್ಟಡದ ನಿರ್ಮಾಣದ ಕುರಿತಂತೆ ಮಾಹಿತಿ ಕಲೆ ಹಾಕುತ್ತಾ ಹೋದರೆ ಸಮಾಜ ಕಲ್ಯಾಣ ಇಲಾಖೆಯು ಮಕ್ಕಳ ಹಿತದೃಷ್ಟಿಯಿಂದ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಮುಂದಾಗಿತ್ತು. ಕಟ್ಟಡದ ಕಾಮಗಾರಿಯನ್ನು 3.15 ಕೋಟಿ ರೂ ಅಂದಾಜು ವೆಚ್ಚದಲ್ಲಿ ಆರಂಭಿಸಲಾಗಿತ್ತು.
ಕಾಮಗಾರಿಗೆ ಆರಂಭಿಸುವಾಗ ತೋರಿದ ಕಾಳಜಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ತನಕ ಇಲ್ಲದೆ ಇರುವುದು ಕಾಮಗಾರಿ ಸಂಪೂರ್ಣವಾಗದಿರಲು ಕಾರಣ ಎನ್ನಲಾಗುತ್ತಿದೆ. ಇನ್ನು ಕಟ್ಟಡ ಕಾಮಗಾರಿ ಗುಣಮಟ್ಟವಿಲ್ಲ ಎನ್ನುವ ಕಾರಣಕ್ಕೆ ಟೆಂಡರ್ ಪಡೆದಿರುವ ಸಂಸ್ಥೆಯು ಗುತ್ತಿಗೆದಾರರನ್ನು ಕೈ ಬಿಟ್ಟಿತು. ಇದರಿಂದ ವಿದ್ಯಾರ್ಥಿ ನಿಲಯದ ಕಾಮಗಾರಿ ಪೂರ್ಣವಾಗಲೇ ಇಲ್ಲ ಎನ್ನಲಾಗಿದೆ. ಕಾಮಗಾರಿಯನ್ನು ಮುಗಿಸಿ ನಿಗದಿತ ಸಮಯಕ್ಕೆ ಇಲಾಖೆಗೆ ಒಪ್ಪಿಸದ ಕಾರಣ ಜತೆಗೆ ಕಾಮಗಾರಿ ನಿಂತು ಹೋಗಿರುವ ಕುರಿತಂತೆ ಗುಂಡ್ಲುಪೇಟೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಹೆಚ್.ಎನ್. ನಂಜುಂಡೇಗೌಡ ಅವರು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಿಗೆ ಪತ್ರ ಬರೆದು ಮಾಹಿತಿ ನೀಡಿದ್ದರೂ ಇದುವರೆಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಹೊರಬಂದಿಲ್ಲ. ಜತೆಗೆ ಕಾಮಗಾರಿಯೂ ಆರಂಭವಾಗಿಲ್ಲ ಎನ್ನಲಾಗಿದೆ.
ಇನ್ನಾದರೂ ಸ್ಥಳೀಯ ಶಾಸಕರಾದ ನಿರಂಜನಕುಮಾರ್ ಸೇರಿದಂತೆ ಜಿಲ್ಲಾಡಳಿತ ಇತ್ತ ಗಮನಹರಿಸಿ ಅಪೂರ್ಣಗೊಂಡಿರುವ ಕಟ್ಟಡಕ್ಕೊಂದು ಮುಕ್ತಿ ನೀಡುತ್ತಾರಾ ಕಾದು ನೋಡಬೇಕಿದೆ.