ಉಡುಪಿ: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಖಂಡಿಸಿ ಹಾಗೂ ಪ್ರಜ್ವಲ್ ರೇವಣ್ಣರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಮಹಿಳೆಯರು ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಪೊರಕೆ ಹಿಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ವಕ್ತಾರೆ ವರೋನಿಕಾ ಕರ್ನೆಲಿಯೋ ಅವರು, ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದಿಂದ ಇಡೀ ಸಮಾಜವೇ ತಲೆತಗ್ಗಿಸುವಂತಾಗಿದೆ. ಪುರುಷರು ಮಹಿಳೆಯರ ಬಗ್ಗೆ ಸಂಶಯದಿಂದ ನೋಡುವಂತಾಗಿದೆ. ಈತನ ಕರ್ಮಕಾಂಡ ಯಾರನ್ನು ಬಿಟ್ಟಿಲ್ಲ. ವೃದ್ಧೆಯರನ್ನು ಬಿಡದೆ ಅತ್ಯಾಚಾರ ಎಸಗಿರುವ ಈತ ದೊಡ್ಡ ಕ್ರಿಮಿನಲ್. ಇದಕ್ಕೆ ನ್ಯಾಯ ಸಿಗಲೇ ಬೇಕು. ಸರಕಾರ ಈ ಬಗ್ಗೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಆತನನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ, ಕಾಂಗ್ರೆಸ್ ಉಡುಪಿ ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಕಾಂಗ್ರೆಸ್ ಮುಖಂಡರಾದ ಉದ್ಯಾವರ ನಾಗೇಶ್ ಕುಮಾರ್, ಹರೀಶ್ ಕಿಣಿ, ಮಲ್ಲಿಕಾ ಪೂಜಾರಿ, ಗೋಪಿ ನಾಯ್ಕ್, ಡಾ.ಸುನೀತಾ ಶೆಟ್ಟಿ, ಶಶಿಧರ್ ಶೆಟ್ಟಿ ಎರ್ಮಾಳು, ಗಣೇಶ್ ನೆರ್ಗಿ, ಪ್ರಭಾ ಶೆಟ್ಟಿ, ರೋಶನಿ ಒಲಿವೇರಾ, ಮೀನಾಕ್ಷಿ ಮಾಧವ ಬನ್ನಂಜೆ, ಐಡಾ ಗಿಬ್ಬಾ, ಚಂದ್ರಿಕಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು