ಮೈಸೂರು: ಕೊರೊನಾ ಕಾರಣದಿಂದಾಗಿ ಮುಂದೂಡಿಕೆಯಾಗಿದ್ದ, ಅತಿಥಿಗಳ ಆಯ್ಕೆಯಲ್ಲಿ ವಿವಾದಕ್ಕೆ ಕಾರಣವಾಗಿದ್ದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಮಾ.11ರಿಂದ 20ರವರೆಗೆ ನಡೆಯಲಿದೆ.
ತಾಯಿ ವಸ್ತು ವಿಷಯಾಧಾರಿತವಾಗಿ ನಡೆಯುವ ನಾಟಕೋತ್ಸವವನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತುಳಸಿಗೌಡ ಮಾ.11 ರಂದು ಸಂಜೆ 5.30ಕ್ಕೆ ವನರಂಗದಲ್ಲಿ ಚಾಲನೆ ನೀಡಲಿದ್ದಾರೆ. ಈ ಸಲ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಬದಲಾಗಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಎಂದು ಹೆಸರು ಬದಲಾಯಿಸಲಾಗಿದೆ. ಈ ಬಾರಿ ತಾಯಿ ಪರಿಕಲ್ಪನೆ ಅಡಿ ನಾಟಕಗಳು, ಜಾನಪದ ನೃತ್ಯ, ಸಂಗೀತ, ಭಿತ್ತಿಚಿತ್ರ ಪ್ರದರ್ಶನ, ಸಿನಿಮಾ ಸೇರಿದಂತೆ ರಂಗೋತ್ಸವವನ್ನು ರೂಪಿಸಲಾಗಿದೆ.
ಕೊರೊನಾ ಅಬ್ಬರ ಕಡಿಮೆಯಾಗಿದೆ. ಕೋವಿಡ್ ನಿರ್ಬಂಧಗಳು ತೆರವಾಗಿವೆ. ಎಲ್ಲೆಡೆ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಬಾರಿ 35 ನಾಟಕಗಳನ್ನು ಆಯ್ಕೆ ಮಾಡಿದ್ದು, ತಮಿಳು, ರಾಜಸ್ತಾನಿ, ಒರಿಯಾ, ಮಲಯಾಳಂ, ತುಳು, ತೆಲುಗು ಸೇರಿದಂತೆ 12 ಭಾಷೆಯ ನಾಟಕಗಳು ಪ್ರದರ್ಶನವಾಗಲಿವೆ.
ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನಾಟಕಗಳೂ ಇವೆ. ಇದರೊಂದಿಗೆ 20 ಕನ್ನಡ ನಾಟಕಗಳು ಇರಲಿವೆ. ವೃತ್ತಿ ಕಂಪನಿ ನಾಟಕ, ಪೌರಾಣಿಕ ನಾಟಕಕ್ಕೂ ಅವಕಾಶ ನೀಡಲಾಗಿದೆ. ಜತೆಗೆ, ಬಯಲಾಟ, ಯಕ್ಷಗಾನ, ದೊಡ್ಡಾಟ, ಗೊಂಬೆಯಾಟಕ್ಕೂ ವೇದಿಕೆ ಕಲ್ಪಿಸಲಾಗಿದೆ.
ವಿವಿಧ ಜಾನಪದ ಕಲೆಗಳ ಪ್ರದರ್ಶನ ನಡೆಯಲಿದ್ದು, ಜೋಗತಿ ನೃತ್ಯ, ಮಲ್ಲಕಂಬ, ಸಿದ್ಧಿ ಕುಣಿತ, ಲಂಬಾಣಿ ನೃತ್ಯ, ಚಂಡೆ ಮೇಳ, ಗೊಂಬೆ ಗಾರುಡಿಗ ಇನ್ನಿತರ ಪ್ರಕಾರದ ಕಲೆಗಳ ಪ್ರದರ್ಶನ ಇರಲಿದೆ. ಇದರಲ್ಲಿ ಶೇ.50ರಷ್ಟು ಮಹಿಳೆಯರಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಹೊರ ರಾಜ್ಯಗಳ ಜಾನಪದ ಕಲೆಗಳಾದ ಛತ್ತೀಸ್ಘಡದ ಕಕ್ಸರ್ನೃತ್ಯ, ಮಧ್ಯಪ್ರದೇಶದ ಬಾಗೋರಿಯಾ, ಮಹಾರಾಷ್ಟ್ರದ ಢಾಂಗಾಲಿಯಾ, ಒರಿಸ್ಸಾದ ಗೋಟಿಪೂವಾ, ಮಣಿಪುರದ ಲಾಯ್ ಹರೋಬ, ಕೇರಳದ ಕಳರಿಪಯಟ್ ನೃತ್ಯ ಈ ಸಲದ ವಿಶೇಷವಾಗಿದೆ.
ಮಾ.19 ಮತ್ತು 20ರಂದು ತಾಯಿ ಹೆಸರಿನಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಬಿ.ವಿ.ಕಾರಂತ ರಂಗಚಾವಡಿಯಲ್ಲಿ ನಿತ್ಯ ಸಂಜೆ 4ರಿಂದ 5ರ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸ್ನಾತಕ ಪದವಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ಮಾತೃ ದೇವೋಭವ ಕುರಿತು ಪ್ರೊ.ಕೃಷ್ಣೇಗೌಡ, ಕನ್ನಡ ಕಾವ್ಯಗಳಲ್ಲಿ ತಾಯಿ ಕುರಿತು ಹಿರೇಮಗಳೂರು ಕಣ್ಣನ್ ಮತ್ತು ತಾಯಿ ಮತ್ತು ತಾಯ್ತನದ ಬಗ್ಗೆ ಚಕ್ರವತಿ ಸೂಲಿಬೆಲೆ ವಿಚಾರ ಮಂಡಿಸಲಿದ್ದಾರೆ.
ಚಲನಚಿತ್ರೋತ್ಸವದಲ್ಲಿ ತಾಯಿ ಪರಿಕಲ್ಪನೆಯ 2 ಕನ್ನಡ ಚಿತ್ರಗಳು ಸೇರಿದಂತೆ 25 ಸಿನಿಮಾಗಳು ಪ್ರದರ್ಶನವಾಗಲಿದ್ದು, ದಿವಂಗತ ಪುನೀತ್ ರಾಜ್ಕುಮಾರ್ ಅಭಿಯನದ ‘ರಾಜ್ಕುಮಾರ್’ ಮತ್ತು ಡಾ.ರಾಜ್ಕುಮಾರ್ ನಟಿಸಿರುವ ಬಬ್ರುವಾಹನ ಚಿತ್ರವೂ ಸೇರಿದೆ.
ಮಾರ್ಚ್ 1ರಿಂದ ಆನ್ಲೈನ್ನಲ್ಲಿ ನಾಟಕಗಳ ಟಿಕೆಟ್ ದೊರೆಯಲಿದ್ದು, ಟಿಕೆಟ್ ದರವನ್ನು 100 ರೂ. ನಿಗದಿ ಪಡಿಸಲಾಗಿದೆ. ಈ ಸಲ 60 ಮಳಿಗೆಗಳು ಇರಲಿವೆ. ಆಹಾರ, ಕರಕುಶಲ ಮತ್ತು ಪುಸ್ತಕ ಮಳಿಗೆಗಳು ರಂಗಾಯಣದ ಹೊರಭಾಗದಲ್ಲಿ ಇರಲಿವೆ.