ಬೆಳ್ತಂಗಡಿ : ‘ತಾಲ್ಲೂಕಿನಲ್ಲಿ ಹಲವಾರು ಪ್ರತಿಭೆಗಳಿದ್ದಾರೆ. ಈ ಪ್ರತಿಭೆಗಳಿಗೆ ತಾಲ್ಲೂಕಿನ ಜನತೆ ವಿಶೇಷ ಪ್ರೋತ್ಸಾಹ ನೀಡುವುದರೊಂದಿಗೆ ಅವರನ್ನು ರಾಜ್ಯ, ರಾಷ್ಟ್ರ ಮಟ್ಟದ ಸಾಧಕರನ್ನಾಗಿಸಬೇಕು’ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ಕೌಶಿಕ್ ಸುವರ್ಣ ಮತ್ತು ಸೃಷ್ಠಿ ಕೊಯ್ಯೂರು ಅಭಿನಯದ ‘ನೀ… ನಿಲ್ಲದೇ’ ಕನ್ನಡ ಡ್ಯಾನ್ಸ್ ಆಲ್ಬಂ ಬಿಡುಗಡೆಗೊಳಿಸಿ ಮಾತನಾಡಿದರು.
ಬೆಳ್ತಂಗಡಿ ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ತುಳುನಾಡು ಹಾಗೂ ಕರಾವಳಿ ಭಾಗದಲ್ಲಿ ರಂಗಶಾಲೆಗಳ ಕೊರತೆ ಇದೆ. ಯುವ ಕಲಾವಿದರು ಸಣ್ಣ ಯಶಸ್ಸು ಸಿಕ್ಕಿದ ಕೂಡಲೆ ವಿದ್ಯಾಭ್ಯಾಸ ಮುಂದವರಿಸುವುದಿಲ್ಲ. ಆದರೆ ಪ್ರತಿಯೊಬ್ಬ ಕಲಾವಿದರೂ ಕನಿಷ್ಠ ಪದವಿ ಶಿಕ್ಷಣವನ್ನು ಗಳಿಸಿಕೊಳ್ಳಬೇಕು. ತನ್ನ ವಿಶಿಷ್ಠ ಪ್ರತಿಭೆಯೊಂದಿಗೆ ತಾಲ್ಲೂಕಿನ ಗ್ರಾಮೀಣ ಕಲಾವಿದರು ರಾಜ್ಯ ರಾಷ್ಟ್ರ ಮಟ್ಟದ ಕಲಾವಿದರನ್ನಾಗಿ ಕಾಣುವುದೇ ಸಂತೋಷದ ಸಂಗತಿಯಾಗಿದೆ’ ಎಂದರು.
ಈ ಸಂದರ್ಭದಲ್ಲಿ ಕೊಯ್ಯೂರು ಪಂಚದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಭಟ್, ಪತ್ರಕರ್ತ ಮಂಜುನಾಥ್ ರೈ, ಮಾಜಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಗೀತಾ, ಮಾಜಿ ಸದಸ್ಯ ಪ್ರವೀಣ್ ಗೌಡ, ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್, ಕೊಯ್ಯೂರು ಪ್ರೌಢಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ, ನಿರ್ಮಾಪಕ ಪ್ರಕಾಶ್ ಅನಂತ ಮೊಗವೀರ, ಸ್ಮಿತೇಶ್ ಬಾರ್ಯ, ಸೃಷ್ಠಿ ಕೊಯ್ಯೂರು, ಕೌಶಿಕ್ ಸುವರ್ಣ, ವೇದಾ ಕೊಯ್ಯೂರು ಇದ್ದರು.
ಸುವರ್ಣ ಸಾಂಸ್ಕøತಿಕ ಪ್ರತಿಷ್ಠಾನದ ಸಂಪತ್ ಬಿ ಸುವರ್ಣ, ಶಿಕ್ಷಕಿ ಸವಿತಾ, ಪ್ರಮುಖರಾದ ರಮಾನಂದ ಸಾಲಿಯಾನ್, ಪ್ರಶಾಂತ್ ಮಚ್ಚಿನ, ಕಲಾವಿದರಾದ ಸಿದ್ದು ಮೂಲಿಮನಿ, ಅನೀಶ್ ಅಮೀನ್, ನೃತ್ಯ ತರಬೇತುದಾರರಾದ ವಿನೋದ್, ಉದಯ್, ಜಿತೇಶ್, ಅಮೃತಾ ಮುಂತಾದವರು ಶುಭ ಹಾರೈಸಿದರು. ಚಂದ್ರಹಾಸ ಬಳಂಜ ಕಾರ್ಯಕ್ರಮ ನಿರೂಪಿಸಿದರು.
‘ಈ ಡ್ಯಾನ್ಸ್ ಆಲ್ಬಂ ಬಿಡುಗಡೆಯ ಹಿಂದೆ ಹಲವು ತಂತ್ರಜ್ಞರ ಶ್ರಮ ಇದೆ. ವಿಶೇಷವಾಗಿ ತನ್ನ ಮಗಳನ್ನು ಬಾನೆತ್ತರಕ್ಕೆ ಏರಿಸಬೇಕೆಂಬ ಸೃಷ್ಠಿಯ ತಾಯಿಯ ಕನಸು ಇದೆ. ಅದ್ಭುತ ಪ್ರತಿಭೆಯಾದ ಸೃಷ್ಠಿಯ ಆಸಕ್ತಿಯ ಹಿಂದೆ ಎಲ್ಲರ ಪ್ರೋತ್ಸಾಹವಿದ್ದರೆ ಈ ಕನಸು ನನಸಾಗುವುದರಲ್ಲಿ ಅನುಮಾನವಿಲ್ಲ’ ಎಂದು ರಕ್ಷಿತ್ ಶಿವರಾಂ ಹೇಳಿದರು.