ಮೈಸೂರು : ಚಿಕ್ಕಬಳ್ಳಾಪುರದ ಐಶ್ಚರ್ಯ ಕಲಾನಿಕೇತನ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮೈಸೂರಿನ ರಾಮಕೃಷ್ಣ ನಗರದ ರಮಾಗೋವಿಂದ ಕಲಾಮಂದಿರದಲ್ಲಿ ಹಮ್ಮಿಕೊಂಡಿರುವ ರಂಗೋತ್ಸವ ಕಾರ್ಯಕ್ರಮವು ಪ್ರೇಕ್ಷಕರ ಗಮನಸೆಳೆದಿದೆ.
ಬೆಂಗಳೂರಿನ ಪ್ರಯೋಗ ಮಂಟಪ ದ ಶ್ರೀ ವೆಂಕಟೇಶ ಜೋಶಿ ಇವರ ತಂಡದಿಂದ ರಂಗಗೀತೆಗಳ ಗಾಯನದಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಐಶ್ವರ್ಯ ಕಲಾನಿಕೇತನ ಕಲಾವಿದರ ತಂಡದಿಂದ ಹಾಸ್ಯಭರಿತ ನಾಟಕ ಶ್ರೀ ಕೃಷ್ಣ ಸಂಧಾನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದು ರಾಜೇಶ್ ಕಶ್ಯಪ್ ನಿರ್ದೇಶನದಲ್ಲಿ ಯಶಸ್ವಿಯಾಗಿ ಮೂಡಿಬಂದಿತು.
ಹಿರಿಯ ನಿವೃತ್ತ ವೈದ್ಯಾಧಿಕಾರಿಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯರವರು ನಗಾರಿವಾದ್ಯ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜಮುಖಿ ಕೆಲಸಗಳಲ್ಲಿ ರಂಗಭೂಮಿಯ ಪಾತ್ರವನ್ನು ಶ್ಲಾಘಿಸಿ ತಮ್ಮ ವೃತ್ತಿ ಜೀವನದಲ್ಲಿ ರಂಗಭೂಮಿ ಹಾಗೂ ಕಿರುಚಿತ್ರ ನಿರ್ಮಾಣಗಳೊಂದಿಗಿದ್ದ ತಮ್ಮ ಒಡನಾಟವನ್ನು ಮೆಲುಕು ಹಾಕಿದರು.
ಹಿರಿಯ ರಂಗಕರ್ಮಿ ಪ್ರೊ. ಹೆಚ್.ಎಸ್. ಉಮೇಶ್ರವರು ಮಾತನಾಡಿ ಎಲ್ಲಾ ಸಂಸ್ಕೃತಿ ಪರಂಪರೆಗಳಲ್ಲೂ ಆಳವಾಗಿ ಬೆರೆತು ಹೋಗಿರುವ ಅಲ್ಲಿನ ಸಾಹಿತ್ಯ, ನಾಟಕಗಳ ಹಿರಿಮೆಯನ್ನು ವಿವರಿಸಿ ಅವುಗಳನ್ನು ಯಾವುದೇ ಪರಕೀಯ ಆಕ್ರಮಣಗಳು ನಾಶ ಮಾಡಲಾಗದ ಆಸ್ತಿ ಎಂದು ಅಭಿಪ್ರಾಯಪಟ್ಟರು.
ರಂಗಕರ್ಮಿ ರಾಜಶೇಖರ ಕದಂಬರವರು ಮಾತನಾಡಿ ಸಾಂಸ್ಕೃತಿಕ ನಗರಿಯಾದ ಮೈಸೂರಿನ ಜನತೆಗೆ ಚಿಕ್ಕಬಳ್ಳಾಪುರದಿಂದ ಬಂದು ನಾಟಕಗಳ ರಸಾಯನ ಉಣಬಡಿಸುತ್ತಿರುವ ಐಶ್ವರ್ಯ ಕಲಾನಿಕೇತನ ಸಂಸ್ಥೆಯ ಈ ಪ್ರಯತ್ನವನ್ನು ರಂಗಭೂಮಿಯ ಬಗ್ಗೆ ಹೊಂದಿರುವ ಬದ್ಧತೆ, ಆಸಕ್ತಿಗಳಿಗೆ ಉದಾಹರಣೆ ಎಂದು ಉಲ್ಲೇಖಿಸಿದರು.
ಈ ಸಂದರ್ಭದಲ್ಲಿ ರಂಗಭೂಮಿಯಲ್ಲಿ ಸಾಧನೆಗೈದಿರುವ ಹಿರಿಯ ಕಲಾವಿಧರುಗಳಾದ ನಾ. ನಾಗಚಂದ್ರ, ಕೆ.ಎನ್. ವಾಸುದೇವಮೂರ್ತಿ, ಗೆಜ್ಜೆಹೆಜ್ಜೆ ತಂಡದ ಉದಯಕುಮಾರ್, ಹರ್ಷಕುಮಾರ್ ನಾಯ್ಡು, ಚೇತನ್ ಕುಮಾರ್, ರಮ್ಯ ಅವರುಗಳನ್ನು ಸನ್ಮಾನಿಸಲಾಯಿತು. ಚಲನಚಿತ್ರ ನಿರ್ಮಾಪಕರಾದ ದೇವರಾಜ, ಐಶ್ವರ್ಯ ಕಲಾನಿಕೇತನ ಸಂಸ್ಥೆಯ ಕಾರ್ಯದರ್ಶಿ ಪ್ರಸನ್ನ ಕುಮಾರ್ ಇನ್ನಿತರರು ಇದ್ದರು.