ಕೃಷ್ಣರಾಜಪೇಟೆ: ದೇವಾಲಯಗಳು ನಮ್ಮ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಜೀವಂತ ಸ್ಮಾರಕಗಳಾಗಿವೆ ಶರಣ ಶ್ರದ್ಧಾ ಕೇಂದ್ರಗಳಾದ ದೇವಾಲಯಗಳ ಸಂರಕ್ಷಣೆಯು ನಮ್ಮೆಲರ ಹೊಣೆಯಾಗಿದ್ದು, ನಮ್ಮ ಮುಂದಿನ ತಲೆಮಾರಿಗೆ ಜೋಪಾನ ಮಾಡಬೇಕಾಗಿದೆ ಎಂದು ರಾಜ್ಯದ ಯುಜನ ಸಬಲೀಕರಣ, ರೇಷ್ಮೆ ಮತ್ತು ಕ್ರೀಡಾ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ ಹೇಳಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಐತಿಹಾಸಿಕ ಗ್ರಾಮವಾದ ರಾಯಸಮುದ್ರದಲ್ಲಿ ಜೀರ್ಣೋದ್ದಾರವಾಗುತ್ತಿರುವ ವೀರಭದ್ರೇಶ್ವರ ಸ್ವಾಮಿ ದೇವಾಲಯಕ್ಕೆ ರಾಜ್ಯ ಸರ್ಕಾರದ ವತಿಯಿಂದ ಬಿಡುಗಡೆಯಾದ 35 ಲಕ್ಷ ರೂ.ಗಳ ವಿಶೇಷ ಅನುದಾನದ ಆದೇಶ ಪ್ರತಿಯನ್ನು ಗ್ರಾಮಸ್ಥರಿಗೆ ನೀಡಿ, ಗ್ರಾಮದ ವತಿಯಿಂದ ನೀಡಿದ ಆತ್ಮೀಯ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.
ಪ್ರಕೃತಿಯ ಮಡಿಲಿನಲ್ಲಿ ಇರುವ ಪುರಾಣ ಪ್ರಸಿದ್ಧವಾದ ಐತಿಹಾಸಿಕ ಏಳು ಸುತ್ತಿನ ಕೋಟೆಯನ್ನು ಒಳಗೊಂಡಿರುವ ರಾಯಸಮುದ್ರ ಗ್ರಾಮ ನಮ್ಮ ತಾಲೂಕಿನ ಸಾಂಸ್ಕೃತಿಕ ಗ್ರಾಮವಾಗಿದೆ. ಗ್ರಾಮಸ್ಥರು ಒಂದಾಗಿ ಶಿಥಿಲವಾಗಿದ್ದ ಗ್ರಾಮ ರಕ್ಷಕ ಶ್ರೀ ವೀರಭದ್ರೇಶ್ವರ ಸ್ವಾಮಿಯ ದೇವಾಲಯವನ್ನು ಜೀರ್ಣೋದ್ದಾರ ಮಾಡಲು ಸಂಕಲ್ಪಮಾಡಿ ಗ್ರಾಮದಲ್ಲಿ ಭಕ್ತಾಧಿಗಳು ಹಾಗೂ ಸಾರ್ವಜನಿಕರ ನೆರವಿನಿಂದ ಕೋಟ್ಯಾಂತರ ರೂಪಾಯಿ ನಿಧಿ ಸಂಗ್ರಹಿಸಿ ಸಂಪೂರ್ಣವಾಗಿ ಕಲ್ಲಿನಿಂದಲೇ ದೇವಾಲಯವನ್ನು ವಿಶಿಷ್ಟವಾಗಿ ನಿರ್ಮಿಸುವ ಮಹತ್ಕಾರ್ಯಕ್ಕೆ ಕೈಹಾಕಿದ್ದಾರೆ. ಈ ಪುಣ್ಯದ ಕಾರ್ಯಕ್ಕೆ ಅಳಿಲು ಸೇವೆಯಂತೆ ರಾಜ್ಯ ಸರ್ಕಾರದಿಂದ 35 ಲಕ್ಷ ರೂಪಾಯಿ ವಿಶೇಷ ಅನುದಾನವನ್ನು ಮಂಜೂರು ಮಾಡಿಸಿ ದೇವರ ಕಾರ್ಯಕ್ಕೆ ನೆರವಾಗಿದ್ದೇನೆ ಎಂದು ಹೇಳಿದ ಸಚಿವ ನಾರಾಯಣಗೌಡ ರಾಯಸಮುದ್ರ ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ದಿಕ್ಕಿನಲ್ಲಿ ಈಗಾಗಲೇ ಕಾರ್ಯೋನ್ಮುಖನಾಗಿರುವ ನಾನು ಗ್ರಾಮದ ಸುಜಿಗಲ್ಲುಗುಡ್ಡ ಕೆರೆ, ಜೇನುಕಲ್ಲುಗುಡ್ಡ ಜೋಡಿ ಕೆರೆಗಳನ್ನು ಸಣ್ಣನೀರಾವರಿ ಇಲಾಖೆಯ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗಿದೆ. ಇತಿಹಾಸದ ಮೇಲೆ ಬೆಳಕು ಚೆಲ್ಲುವ ರಾಯಸಮುದ್ರದ ನಾರಾಯಣದುರ್ಗಕ್ಕೆ ಪ್ರವಾಸಿಗರು ಮತ್ತು ಚಾರಣಿಗರು ಬಂದುಹೋಗಲು ಅನುಕೂಲವಾಗುವಂತೆ ರಸ್ತೆ ಸಂಪರ್ಕ ಸೇರಿದಂತೆ ನಮ್ಮ ಕ್ರೀಡಾ ಇಲಾಖೆ ವತಿಯಿಂದ ಸಾಹಸ ಕ್ರೀಡೆಗಳನ್ನು ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಸಚಿವ ನಾರಾಯಣಗೌಡ ಹೇಳಿದರು.
ರಾಯಸಮುದ್ರ ಗ್ರಾಮದ ಶ್ರೀವೀರಭದ್ರೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ವ್ಯವಸ್ಥಾಪನಾ ಸಮಿತಿಯ ಸಂಚಾಲಕ ಡಾ.ವೆಂಕಟೇಶ್, ಜಿಲ್ಲಾಪಂಚಾಯ್ತಿ ಮಾಜಿ ಉಪಾಧ್ಯಕ್ಷ ಎಸ್.ಅಂಬರೀಷ್, ಪುರಸಭಾ ಸದಸ್ಯ ಎಚ್.ಆರ್.ಲೋಕೇಶ್, ಗ್ರಾಮದ ಮುಖಂಡರಾದ ಪುಟ್ಟಸ್ವಾಮೀಗೌಡ, ಧನಂಜಯ, ಬೋರೇಗೌಡ, ಆರ್.ಬಿ.ಪದ್ಮನಾಭ, ಆರ್.ಎಸ್.ಸತೀಶ್, ಭಜರಂಗದಳದ ಸಂಚಾಲಕ ನಾರಾಯಣಗೌಡ, ಹಾಗೂ ಗ್ರಾಮದ ಯಜಮಾನರುಗಳು ಮತ್ತು ಗ್ರಾಮಸ್ಥರು ಹಾಜರಿದ್ದರು.