ಪಾಂಡವಪುರ: ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ರವರ ಕನಸನ್ನು ನನಸು ಮಾಡಿದವರೇ ಬಿಎಸ್ಪಿ ನಾಯಕ ದಾದಾಸಾಹೇಬ್ ಕಾನ್ಸಿರಾಮ್ ಎಂದು ಸಮಾಜ ಪರಿವರ್ತನಾ ಜನಸೇವಾ ಕೇಂದ್ರದ ತಾಲೂಕು ಅಧ್ಯಕ್ಷ ಲೋಕರಕ್ಷಕ ಹೇಳಿದರು.
ತಾಲೂಕಿನ ಟಿ.ಎಸ್.ಛತ್ರ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸಮಾಜ ಪರಿವರ್ತನಾ ಜನಸೇವಾ ಕೇಂದ್ರ ಪಾಂಡವಪುರ ವತಿಯಿಂದ ಬಹುಜನ ಸಮಾಜ ಪಾರ್ಟಿಯ ಸಂಸ್ಥಾಪಕರಾದ ದಾದಾಸಾಹೇಬ್ ಕಾನ್ಸಿರಾಮ್ ಜೀ ರವರ 15ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖಂಡ ಎನ್.ಎಂ.ಸ್ವಾಮಿ ನಲ್ಲಹಳ್ಳಿ ದಾದಾ ಸಾಹೇಬ್ ಕಾನ್ಸಿರಾಂ ಕುರಿತು ಮಾತನಾಡಿ, ಅಂಬೇಡ್ಕರ್ ಕನಸನ್ನು ನನಸು ಮಾಡಲು ಗುಲಾಮ ಸಮಾಜವಾಗಿದ್ದ ಎಸ್ಸಿ, ಎಸ್.ಟಿ, ಹಿಂದುಳಿದ ವರ್ಗ, ಧಾರ್ಮಿಕ ಅಲ್ಪಸಂಖ್ಯಾತರನ್ನು ಕಾನ್ಸಿರಾಂ ಎಚ್ಚರಿಸಿದ್ದರು. ಬಹುಜನರೆ ಒಂದಾಗಿ, ದೇಶ ಆಳಲು ಮುಂದಾಗಿ. ಓಟು ನಮ್ಮದು, ಸೀಟು ನಿಮ್ಮದು. ನಡೆಯೋದಿಲ್ಲ ನಡೆಯೋದಿಲ್ಲ, ಅನ್ಯಾಯ, ಅತ್ಯಾಚಾರ, ಕೊಲೆ, ದೌರ್ಜನ್ಯ, ದಬ್ಬಾಳಿಕೆಗಳು ಅಧಿಕಾರಹೀನರ ಮೇಲೆ ಮಾತ್ರ ನಡೆಯುತ್ತವೆ ಎಂದು ಹೇಳಿದ್ದರು ಎಂದರು.
ಜತೆಗೆ ಗುಲಾಮ ಸಮಾಜವನ್ನು ಆಳುವ ಸಮಾಜ ಮಾಡುವುದೇ ನನ್ನ ಧ್ಯೇಯ ಗುರಿ ಎಂದು ಪ್ರತಿಜ್ಞೆ ಮಾಡಿ ತನ್ನ ಕುಟುಂಬ, ಸಂಬಂಧಗಳು, ತಮ್ಮ ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಿ ಬುದ್ಧನ ನಂತರ ಬುದ್ಧರಾಗಿ ದೇಶದ ಉದ್ದಗಲಕ್ಕೂ ಸಂಚರಿಸಿ ಬಹುಜನರನ್ನು ಜಾಗೃತಿಗೊಳಿಸಿ ಸ್ವಾಭಿಮಾನವನ್ನು ತುಂಬಿದ್ದರು. ಒಡೆದುಹೋಗಿದ್ದ 6000ಕ್ಕೂ ಹೆಚ್ಚು ಜಾತಿಗಳು, ಒಂದು ಲಕ್ಷಕ್ಕೂ ಹೆಚ್ಚಿನ ಉಪಜಾತಿಗಳನ್ನು ಒಂದುಗೂಡಿಸಿ ಸಂವಿಧಾನದ ಉಳಿವಿಗೆ ಪ್ರಜಾಪ್ರಭುತ್ವದ ರಕ್ಷಣೆಗಾಗಿ ನೌಕರರು, ವಿದ್ಯಾವಂತರು, ಬಹುಜನರಿಗಾಗಿ ಬಹುಜನ ಸಮಾಜ ಪಕ್ಷವನ್ನು ಸ್ಥಾಪಿಸಿ ದೇಶದ ಉದ್ದಗಲಕ್ಕೂ ಕೋಟ್ಯಂತರ ಕಾರ್ಯಕರ್ತರನ್ನು ಸೃಷ್ಟಿಸಿದ ಅಪ್ಪಟ ಅಂಬೇಡ್ಕರ್ ವಾದಿ, ಮಹಾನ್ ತ್ಯಾಗ ಪುರುಷ ಬಹುಜನರ ಕಣ್ಮಣಿಯಾಗಿದ್ದ ಮನೆ ಬಿಟ್ಟ ಮಗ ಮಹಾನ್ ವ್ಯಕ್ತಿಯಾದವರೇ ದಾದಾಸಾಹೇಬ್ ಕಾನ್ಸಿರಾಂ ಎಂದು ತಿಳಿಸಿದರು.
ಈ ವೇಳೆ ಅನಿಲ್ ನ್ಯಾಮನಹಳ್ಳಿ, ಸುರೇಶ್ ಅನುವಾಳು, ವೆಂಕಟೇಶ್, ಲೋಕೇಶ್, ಟಿ.ಬಿ.ಶೇಖರ್, ಬೋರಯ್ಯ, ನರಸಿಂಹಮೂರ್ತಿ, ಭಾಗ್ಯಮ್ಮ, ಇ.ಬಿ.ಮಂಜು, ಗ್ರಾ.ಪಂ ಸದ್ಯಸ್ಯರು, ಗ್ರಾಮಸ್ಥರು ಇತರರಿದ್ದರು.