ಮೈಸೂರು: ಅಧಿಕಾರಕ್ಕೆ ಬರಲು ದೇಶ ದ್ರೋಹಿಗಳ ಜೊತೆ ಕೈ ಜೋಡಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಮೈಸೂರು ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕವನ್ನು ಗೂಂಡಾಗಿರಿ ರಾಜ್ಯ ಮಾಡಲು ಎಸ್ಡಿಪಿಐ ಬೆಂಬಲ ಪಡೆಯುತ್ತಿದ್ದೀರಾ ಎಂದು ಪ್ರಶ್ನಿಸಿದ ಅವರು, ರಾಜಕೀಯ ಹತ್ಯೆಯನ್ನು ಗುರಿಯಾಗಿಸಿಕೊಂಡಿರುವ ಎಸ್ಡಿಪಿಐ ಬೆಂಬಲ ಕೇಳಲಾಗುತ್ತಿದೆ. ಉತ್ತರ ಭಾರತದಲ್ಲಿ ಸೆಮಿ, ಪಿಎಫ್ಐ, ಕೆಎಫ್ಡಿ ಮುಂತಾದ ಸಂಘಟನೆ ನಿಷೇಧವಾದ ಮೇಲೆ ಹುಟ್ಟಿಕೊಂಡ ಎಸ್ಡಿಪಿಐನ ಬೆಂಬಲ ಕೇಳಲಾಗುತ್ತಿದೆ ಎಂದರು.
ರಾಜು ಹತ್ಯೆ ಆರೋಪಿ ಅಬೀದ್ ಪಾಷ ಈ ಹಿಂದೆ ಹುಣಸೂರಿನ ಇಬ್ಬರು ಯುವಕರನ್ನು ಹತ್ಯೆಗೈದಿದ್ದ. ಕಾಂಗ್ರೆಸ್ನ ಶಾಸಕರ ಕತ್ತು ಕೊಯ್ಯುವ ಕೆಲಸವನ್ನು ಎಸ್ಡಿಪಿಐ ಮಾಡಿದ್ದರೂ ಸಿದ್ದರಾಮಯ್ಯ ಅವರ ಬೆಂಬಲವನ್ನೇ ಕೋರುತ್ತಿರುವುದು ನೋಡಿದರೆ, ಮುಂದೊಂದು ದಿನ ಕರ್ನಾಟಕವನ್ನು ಮತ್ತೊಂದು ಕೇರಳ ಮಾಡಿ, ಅವರಿಗೆ ಅಧಿಕಾರ ಬಿಟ್ಟುಕೊಡುವಂತಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ನಿಷೇಧಿತ ಸಂಘಟನೆಗೆ ಸೇರಿದವರ ಮೇಲಿದ್ದ ಸುಮಾರು ೧೭೫ ಪ್ರಕರಣಗಳನ್ನು ಪೊಲೀಸರ ವಿರೋಧದ ನಡುವೆ ಸಂಪುಟ ಸಭೆಯಲ್ಲಿ ಮಂಡಿಸಿ ಹಿಂದಕ್ಕೆ ಪಡೆದರು. ಆಗಲೇ ಸರಣಿ ಹತ್ಯೆಗೆ ದಾರಿ ಮಾಡಿಕೊಟ್ಟಾಂತಾಯಿತು. ಇವರೆಲ್ಲರೂ ಸಿದ್ದರಾಮಯ್ಯ ಅವರ ದತ್ತು ಮಕ್ಕಳು ಎಂಬುದು ಅರಿವಿಗೆ ಬಂತು ಎಂದರು.
ಇದಾದ ಬಳಿಕ ಪಿರಿಯಾಪಟ್ಟಣ, ಬಂಟ್ವಾಳ, ಸುರತ್ಕಲ್, ಪ್ರವೀಣ್ ನೆಟ್ಟಾರು ಮುಂತಾದವರ ಹತ್ಯೆ ನಡೆಯಿತು. ಮುಂದಿನ 2047ರ ವೇಳೆಗೆ ಇಸ್ಲಾಮಿಕ್ ಕಾರಿಡಾರ್ ಮಾಡಲು ಇವರು ಹೊರಟಂತಿದೆ ಎಂದು ದೂರಿದರು.
ಉತ್ತರಪ್ರದೇಶದಂತೆ 10 ಸಾವಿರ ಎನ್ಕೌಟಂರ್ ಪರಿಸ್ಥಿತಿ ಕರ್ನಾಟಕದಲ್ಲಿಯೂ ನಿರ್ಮಾಣ ಆಗಬೇಕೆ? ಎಸ್ಐಗಳಾದ ಮಲ್ಲಿಕಾರ್ಜುನ ಬಂಡೆ, ಜಗದೀಶ್ ಅವರನ್ನು ಹತ್ಯೆ ಮಾಡಿದವರು ಯಾರು? ಎಂದು ಅವರು ಪ್ರಶ್ನಿಸಿದರು. ನೆಹರು ಅವರನ್ನು ಪ್ರಧಾನಿ ಮಾಡಲು ದೇಶವನ್ನೆ ಒಡೆದ ಕಾಂಗ್ರೆಸ್, ಈಗ ಅಧಿಕಾರಕ್ಕೆ ಬರುವ ಉದ್ದೇಶದಿಂದ ಅದೇ ಕೆಲಸ ಮಾಡುತ್ತಿದೆ ಎಂದು ದೂರಿದರು.
ಕಳೆದ 15 ವರ್ಷಗಳಿಂದ ವರುಣ ಕ್ಷೇತ್ರದಲ್ಲಿ ನಡೆದ ಅಪ್ಪ-ಮಗನ ದರ್ಬಾರ್ ಅಂತ್ಯವಾಗಲಿದೆ. ಜಿಲ್ಲೆಯಲ್ಲಿ ಸುಮಾರು 8 ರಿಂದ 10 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಈ ಬಾರಿ ಬದಲಾವಣೆಗೆ ಅವಕಾಶ ಮಾಡಿಕೊಡಿ. ನಗರ ಮತ್ತು ಗ್ರಾಮಾಂತರ ಪ್ರದೇಶಕ್ಕೂ ಅಮೃತ್ ಯೋಜನೆಯಡಿ ಶುದ್ಧ ಕುಡಿಯುವ ನೀರು ಪೂರೈಸುತ್ತೇವೆ ಎಂದರು.
ವರುಣ ಕ್ಷೇತ್ರದಲ್ಲಿ ನಮಗೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡುತ್ತಾರೆ ಎಂಬ ಅನುಮಾನ, ಭಯವನ್ನು ಜನ ವ್ಯಕ್ತಪಡಿಸುತ್ತಿದ್ದಾರೆ.
ಭಯದಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಿ ಸ್ಪರ್ಧಿಸುತ್ತಿದ್ದ ಸಿದ್ದರಾಮಯ್ಯ ಅವರು ಏಕೋ ಕೋಲಾರವೂ ಕಷ್ಟ ಎಂದು ತಿಳಿದು ಹಳೆ ಗಂಡನ ಪಾದವೇ ಗತಿ ಅಂತ ವರುಣಕ್ಕೆ ಬಂದಿದ್ದಾರೆ. ಸೋಮಣ್ಣ ಸರ್ವ ಜನಾಂಗದ ನಾಯಕ. ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರ ಅಭಿವೃದ್ಧಿಯಲ್ಲಿ ಸಾಕಷ್ಟು ನೆರವು ನೀಡಿದೆ. ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ ರಾಜ್ಯ ಸರ್ಕಾರ ೩೧೯ ಕೋಟಿ ಕೊಟ್ಟಿದೆ. ಶಿವಮೊಗ್ಗ ವಿಮಾನ ನಿಲ್ದಾಣವನ್ನು ರಾಜ್ಯ ಸರ್ಕಾರವೇ ನಿರ್ಮಿಸಿದೆ. ಅಮೃತ್, ಜಲಜೀವನ ಮಿಷನ್, ಕಿಸಾನ್ ಸಮ್ಮಾನ್ ಯೋಜನೆಗೆ ಕೇಂದ್ರದಷ್ಟೇ ಪಾಲು ರಾಜ್ಯ ಸರ್ಕಾರದ್ದೂ ಇದೆ. ರೈತರಿಗೆ ಉಚಿತ ವಿದ್ಯುತ್, ಪೆರಿಪಿರಲ್ ರಿಂಗ್ ರಸ್ತೆ, ಸ್ಮಾರ್ಟ್ ಸಿಟಿ ಮುಂತಾದ ಅನೇಕ ಯೋಜನೆಗೆ ರಾಜ್ಯ ಸರ್ಕಾರ ನೆರವಾಗಿದೆ ಎಂದರು.