ಹೊಸೂರು: ಜಾತಿ ಪದ್ದತಿಯಿಂದ ಹೊರಬಂದು ಇಂದಿನ ಯುವಕರು ಸಾಧನೆ ಮಾಡಬೇಕು. ಜಾತಿ ಸಾಧನೆಗಳಿಗೆ ಅಡ್ಡಿಯಾಗಬಾರದು ಎಂದು ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಶ್ರೀಧರ್ ನಾಯಕ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆಯಲ್ಲಿ ವಾಲ್ಮೀಕಿ ಯುವ ವೇದಿಕೆ ವತಿಯಿಂದ ನಡೆದ ವಾಲ್ಮೀಕಿ ಜಯಂತಿ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಾತಿ, ಧರ್ಮಗಳ ಹಣೆಪಟ್ಟಿಗಳನ್ನ ಕಳಚಿ ಯುವಕರು ಸಾಧಿಸಬೇಕು. ಆದರೆ ಸಾಧನೆಗಳನ್ನು ಜಾತಿಯಿಂದ ಅಳೆಯಬಾರದು .ಸಮಾಜದ ಯುವ ಮನಸ್ಸುಗಳು ಕನಸನ್ನು ಕಾಣುತ್ತಾ ಕೂರುವ ಬದಲು ಮಾನಸಿಕ ಬದಲಾವಣೆಯಿಂದಲೇ ರಾಮಾಯಣದಂತಹ ಕೃತಿ ನೀಡಿದ ವಾಲ್ಮೀಕಿಯಂತೆ ಕಠಿಣ ಸಾಧನೆಗಳ ಮೂಲಕ ಕನಸನ್ನು ನನಸು ಮಾಡಬಹುದಾಗಿದ್ದು ಇಂತಹ ಮಹರ್ಷಿಗಳ ಆದರ್ಶಗಳೊಂದಿಗೆ ಜೀವನ ಹಾಗೂ ಸಮಾಜವನ್ನ ಉದ್ದಾರಗೊಳಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಂತರ ಯುವ ವೇದಿಕೆ ರಾಜ್ಯಾಧ್ಯಕ್ಷ ದೇವರಾಜ ಕಾಟೂರು ಮಾತನಾಡಿ, ಅಂಬೇಡ್ಕರ್ ದೇಶಕ್ಕೆ ಕಾನೂನಿನ ಸಂವಿಧಾನ ನೀಡಿದರೆ, ಶ್ರೀಮಹರ್ಷಿ ವಾಲ್ಮೀಕಿ ಧಾರ್ಮಿಕ ಸಂವಿಧಾನ ಆದರ್ಶ ಮೌಲ್ಯಗಳಿರುವ ರಾಮಾಯಣ ಕೃತಿಯನ್ನ ನೀಡಿದ್ದಾರೆ ಎಂದು ಹೇಳಿದರು.
ವಾಲ್ಮೀಕಿ ಮಹರ್ಷಿಗಳ ಕುರಿತು ಹಲವರು ಆತ ದರೋಡೆಕೋರ, ಕಳ್ಳ, ಬೇಡ ಎಂಬ ಮಾತುಗಳನ್ನು ಹೇಳಿ ಅವರ ಮೇಲಿನ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದು ಮೂರು ಸಾವಿರ ವರ್ಷಗಳ ಹಿಂದೆ ಯಾವ ಸ್ಥಿತಿ ಇಲ್ಲಿತ್ತು ಎಂಬ ಪರಿಜ್ಞಾನವೂ ಇಲ್ಲದೆ ಇತಿಹಾಸವನ್ನು ತಿರುಚುವ ಕೆಲಸ ಮಾಡುತ್ತಿರುವುದನ್ನ ನಿಲ್ಲಿಸಬೇಕು. ಅವರ ಬಗ್ಗೆ ಸರಿಯಾಗಿ ಅಧ್ಯಯನ ಮಾಡಬೇಕು ಎಂದರು.
ಅಷ್ಟೇ ಅಲ್ಲದೆ ಈ ಗ್ರಾಮದಲ್ಲಿ ಎಲ್ಲ ಸಮಾಜದ ಹಿರಿಯರು, ಕಿರಿಯರು ಹಾಗೂ ಮಹಿಳೆಯರು ಸೇರಿ ಈ ವಾಲ್ಮೀಕಿ ಜಯಂತಿ ಆಚರಣೆ ಮಾಡುತ್ತಿರುವುದು ನಿಜಕ್ಕೂ ಮಾದರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಂಗವಾಗಿ ಗ್ರಾಮದ ಎಲ್ಲ ಸಮಾಜದ ಪ್ರಮುಖರು, ಸಮಾಜದ ನಿವೃತ್ತ ನೌಕರರು, ಹಿರಿಯ ಮಹಿಳಾ ಪ್ರಮುಖರು, ಹಾಗೂ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಅಧಿಕಾರಿ ಕೆ.ವಿ.ರಂಗನಾಥ್, ಆರೋಗ್ಯ ಇಲಾಖೆಯ ಕೆ.ವಿ. ರಮೇಶ್, ನಾಗರಾಜನಾಯಕ್, ನಾಗರಾಜ್ ನಾಯಕ, ದೊಡ್ಡ ಯಜಮಾನ ಶಿವಣ್ಣ ನಾಯಕ, ಚಿಕ್ಕ ಯಜಮಾನ ರಾಜನಾಯಕ, ನಿಂಗನಾಯಕ, ಬಸರಾಜನಾಯಕ, ವೆಂಕಟರಾಮಸ್ವಾಮಿ ನಾಯಕ, ಶಿವಣ್ಣ ನಾಯಕ, ಗ್ರಾಮದ ಮುಖಂಡರಾದ ಗಿರಿಗೌಡ, ವೀರಶೆಟ್ಟಿ, ಅರ್ಚಕ ನಾರಾಯಣ ಅಯ್ಯಂಗಾರ್, ಕಾಳೇಗೌಡ, ವೆಂಕಟರಾಮ, ಗ್ರಾ.ಪಂ ಸದಸ್ಯ ಗೋವಿಂದೇಗೌಡ, ಶಾರದಮ್ಮ, ಮಾಜಿ ಸದಸ್ಯರು, ಡಿ.ಎಸ್ ಕುಮಾರ್, ಶಂಕರ್ ಶೆಟ್ಟಿ, ಕಾಮತ್ ಬಾಬು, ರವಿ, ಶಿಕ್ಷಕ ಭೈರನಾಯಕ, ಗೋವಿಂದ ನಾಯಕ, ಸಿ.ಕೆ. ಮಂಜುನಾಥ್, ಜಯಮ್ಮ, ರತ್ನಮ್ಮ, ಮಹಾದೇವಿ, ಪ್ರಭಾವತಿ, ವಾಲ್ಮೀಕಿ ಯುವ ವೇದಿಕೆಯ ಯುವಕರು ಹಾಗೂ ಶ್ರೀಕೋದಂಡರಾಮ ಯುವಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.