ಮೈಸೂರು: ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸೇಂಟ್ ಮೇರಿಸ್ ಚರ್ಚ್ನಲ್ಲಿ ಹುಂಡಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕಾರ್ ಹೇಳಿದ್ದಾರೆ.
ಬಂಧಿತ ವ್ಯಕ್ತಿ 24 ವರ್ಷದ ವಿಶ್ವ ನಾಗಿದ್ದು, ಈತ ಚರ್ಚ್ ನಲ್ಲಿಯೇ ಕೆಲಸ ಮಾಡಿಕೊಂಡಿದ್ದ ಕಾರ್ಮಿಕನಾಗಿದ್ದಾನೆ. ಚರ್ಚ್ ನಲ್ಲಿ ಸಿಕ್ಕಿದ ಕೈ ಗವಸದಿಂದ (ಗ್ಲೌಸ್) ಪ್ರಕರಣವನ್ನು ಪತ್ತೆ ಮಾಡಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ, ಮೊದಲಿಗೆ ಗ್ಲೌಸ್ ದೊರತ ಬಳಿಕ ಚರ್ಚ್ನ 500 ಮೀಟರ್ ಸಮೀಪದಲ್ಲಿಯೇ ಇದ್ದ ಪೌರಕಾರ್ಮಿಕರ ಕಾಲೋನಿಯಲ್ಲಿ ಕೆಲವು ವ್ಯಕ್ತಿಗಳನ್ನು ಪಟ್ಟಿ ಮಾಡಿ ವಿಚಾರಣೆ ನಡೆಸಲಾಗಿತ್ತು. ಆದರೆ, ಚರ್ಚಿನಲ್ಲಿ ಸಿಕ್ಕ ಗ್ಲೌಸ್ ಅನ್ನು ವಿಶ್ವ ಬಳಸಿಲ್ಲ. ಅದು ಚರ್ಚ್ ಶುಚಿಗೆ ಬಳಸಲಾಗಿತ್ತು. ಆದರೆ, ಆರೋಪಿ ಪತ್ತೆಗೆ ಅದು ಪ್ರಮುಖ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
ಮದ್ಯ ವ್ಯಸನಿಯಾದ ವಿಶ್ವ ಪುರಸಭೆಯಲ್ಲಿ ಕೆಲಸ ಬಿಟ್ಟ ಬಳಿಕ ಚರ್ಚಿನಲ್ಲಿ ಪಾತ್ರೆ ತೊಳೆಯುವುದು, ಶುಚಿತ್ವ ಮಾಡುತ್ತಿದ್ದ. ಕೆಲ ತಿಂಗಳು ಸಂಬಳ ಕೊಟ್ಟಿಲ್ಲ ಎಂಬ ಕಾರಣಕ್ಕೆ ಆತ ಫಾದರ್ ಜಾನ್ ಪಾಲ್ ಮೈಸೂರಿನ ಸಭೆಯಲ್ಲಿ ಭಾಗವಹಿಸಿದ್ದರು. ಇನ್ನೊಬ್ಬ ಸಿಬ್ಬಂದಿಗೆ ರಜೆ ನೀಡಲಾಗಿತ್ತು ಈ ಸಮಯದಲ್ಲಿ ಮೂರು ಹುಂಡಿಗಳನ್ನು ಒಡೆದು ಅಂದಾಜು ಸುಮಾರು 10 ಸಾವಿರ ರೂ. ಕಳ್ಳತನ ಮಾಡಿರುವುದಾಗಿ ಮತ್ತು ಹುಂಡಿ ಒಡೆಯುವ ಸಮಯದಲ್ಲಿ ಅಲ್ಲೆ ಪಕ್ಕದಲ್ಲಿದ್ದ ಬಾಲಯೇಸುವಿನ ಪ್ರತಿಮೆ ಕೆಳಗೆ ಬಿದ್ದು ಒಡೆಯಿತು ಎಂದು ವಿಶ್ವ ತಿಳಿಸಿದ್ದರಿಂದ ಚರ್ಚ್ ಮೇಲೆ ಯಾವುದೇ ದಾಳಿ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ.
ಅಪರ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಹುಣಸೂರು ಉಪ ವಿಭಾಗದ ಡಿವೈಎಸ್ಪಿ ಎಂ.ಕೆ.ಮಹೇಶ್ ನೇತೃತ್ವದಲ್ಲಿ ಪಿರಿಯಾಪಟ್ಟಣ ಪೊಲೀಸ್ ಠಾಣೆ ಪಿಐ ಶ್ರೀಧರ್, ಬೈಲಕುಪ್ಪೆ ವೃತ್ತದ ಸಿಪಿಐ ಪ್ರಕಾಶ್, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ಪಿಐ ಸಿ.ವಿ.ರವಿ, ಸಬ್ ಇನ್ಸ್ಪೆಕ್ಟರ್ಗಳಾದ ಬಸವರಾಜು, ಪ್ರಕಾಶ್ ಎತ್ತಿನಮನಿ, ಗೋವಿಂದ, ಸಿಬ್ಬಂದಿ ಲಿಂಗರಾಜಪ್ಪ ಸತೀಶ್ಕುಮಾರ್, ಅರುಣ್ಕುಮಾರ್, ಪ್ರಭಾಕರ, ಲತೀಫ್, ದೇವರಾಜು, ರವೀಶ್, ಪ್ರಸಾದ್, ಇರ್ಫಾನ್, ಚೇತನ್ ಒಳಗೊಂಡು 3 ತಂಡಗಳನ್ನು ರಚಿಸಲಾಗಿತ್ತು ಎಂದು ಎಸ್ಪಿ ತಿಳಿಸಿದ್ದಾರೆ.