ಮೈಸೂರು: ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಕಳೆದ ಜುಲೈ ತಿಂಗಳಲ್ಲಿ ಎಡಬಿಡದೆ ಸುರಿದ ಮಳೆಯ ಪ್ರವಾಹದಿಂದ ಸುಧಾರಿಸಿಕೊಳ್ಳುವ ಮುನ್ನವೇ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ರಾಜ್ಯದ ಜೀವನಾಡಿ ಕಬಿನಿ ಜಲಾಶಯ ಸೇರಿದಂತೆ ತಾಲ್ಲೂಕಿನ ಎಲ್ಲ ಜಲಾಶಯಗಳಿಗೆ ಒಳ ಹರಿವು ಜಾಸ್ತಿಯಾಗಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಭಾರೀ ಮಳೆಯಿಂದ ಹಳ್ಳ ಕೊಳ್ಳ ತುಂಬಿ ಹರಿಯುತ್ತಿದ್ದರೆ, ಕೆರೆ ಕಟ್ಟೆ ಕೋಡಿ ಬಿದ್ದು ಹೊಲ ಗದ್ದೆಗಳಿಗೆ ನುಗ್ಗಿದ ಪರಿಣಾಮ ಕಷ್ಟಪಟ್ಟು ಬೆಳೆದ ಬೆಳೆಗಳು ನೀರು ಪಾಲಾಗಿದೆ. ರೈತರು ತಲೆಮೇಲೆ ಕೈಹೊತ್ತು ಕೂರುವಂತಾಗಿದೆ. ಮಳೆಯ ಹಿನ್ನಲೆಯಲ್ಲಿ ಕಬಿನಿ ಜಲಾಶಯಕ್ಕೆ 18 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಗರಿಷ್ಠ ಸಂಗ್ರಹ ಮಟ್ಟ ಕಾಯ್ದುಕೊಂಡು 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ, ಇದರಿಂದಾಗಿ ಮುಂಭಾಗದ ಸೇತುವೆ ಮುಳುಗಡೆಯಾಗಿದ್ದು, 20ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ಮತ್ತೊಂದು ಜಲಾಶಯವಾದ ತಾರಕ ಜಲಾಶಯವು ಕೂಡ ರಕ್ಕಸ ಮಳೆಗೆ ಮತ್ತೆ ಭರ್ತಿಗೊಂಡಿದ್ದು ನೀರನ್ನು ನದಿಗೆ ಹರಿಸಲಾಗುತ್ತಿದೆ. ಪರಿಣಾಮ ಹೆಬ್ಬಳ್ಳ ಜಲಾಶಯದ ಒಳಹರಿವಿನ ಪ್ರಮಾಣ ದಿಢೀರ್ ಹೆಚ್ಚಾಗಿ ಜಲಾಶಯದಿಂದ ಅಚ್ಚುಕಟ್ಟು ಪ್ರದೇಶದ ನಾಲೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಇದರಿಂದಾಗಿ ಹೊಸ ತೊರವಳ್ಳಿ, ಬೆಳಗನಹಳ್ಳಿ ಇನ್ನಿತರ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ 4ರಿಂದ 5 ಅಡಿ ನೀರು ಹರಿಯುತ್ತಿದ್ದರೂ ನೀರಿನ ರಭಸವನ್ನು ಲೆಕ್ಕಿಸದೇ ಜನರು ಮತ್ತು ಸವಾರರು ಸೇತುವೆ ಮೇಲೆ ತೆರಳುತ್ತಿರುವುದು ಆತಂಕಕಾರಿಯಾಗಿದೆ.
ಇನ್ನು ಹೆಬ್ಬಳ್ಳ ಜಲಾಶಯವು ಮೇ 18ರಂದೇ ಭರ್ತಿಯಾಗಿತ್ತು, ಅಂದು ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ಒಮ್ಮೆಲೆ 6ಅಡಿ ನೀರು ತುಂಬಿತ್ತು. ಆಗಾಗ್ಗೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಕಾರಣ ಹೆಬ್ಬಳ್ಳ ಜಲಾಶಯ ಪದೇ ಪದೇ ಕೋಡಿ ಬೀಳುತ್ತಿದೆ. ಕಳೆದ ಮೂರು ತಿಂಗಳಿನಿಂದ ಜಲಾಶಯದಿಂದ ನಾಲೆಗೆ ನೀರು ಹರಿಯುತ್ತಿರುವುದು ಇದೇ ಮೊದಲು ಎಂದು ಹೆಬ್ಬಳ್ಳ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆ ಮತ್ತೇ ಮಳೆರಾಯ ಒಕ್ಕರಿಸಿಕೊಂಡು ಎಡಬಿಡದೆ ಸುರಿಯುತ್ತಿರುವುದರಿಂದ ರೈತರ ಬದುಕು ದುಸ್ತರವಾಗಿದೆ. ಭಾರೀ ಮೇಘ ಸ್ಪೋಟಕ್ಕೆ ಜನ ಜೀವನ ಅಸ್ತವ್ಯಸ್ತವಾಗಿದ್ದು, ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿದ್ದ ಜನರು ಮನೆಯಿಂದ ಹೊರ ಬಾರದೆ ಮನೆಯಲ್ಲೇ ಕೂರುವಂತಾಗಿದೆ. ದುಡಿದು ಜೀವನ ಕಟ್ಟಿಕೊಂಡಿದ್ದ ಕೂಲಿ ಕಾರ್ಮಿಕರು ಕೂಲಿ ಕೆಲಸ ಸಿಗದೆ ಪರದಾಡುತ್ತಿದ್ದು, ದಿಢೀರ್ ಮಳೆಗೆ ಜನರ ಬದುಕು ನೀರಿನಲ್ಲಿ ಕೊಚ್ಚಿಹೋದಂತಾಗಿದೆ. ಇಷ್ಟಾದರೂ ಸಂಬಂಧಪಟ್ಟ ತಾಲ್ಲೂಕು ಆಡಳಿತ, ತಾಲ್ಲೂಕು ಮಟ್ಟದ ಅಧಿಕಾರಿಗಳು ಮಾತ್ರ ಜನರ ಕಷ್ಟ ಕೇಳದೇ ಮೌನಕ್ಕೆ ಶರಣಾಗಿರುವುದು ಎದ್ದು ಕಾಣುತ್ತಿದೆ.