ಮೈಸೂರು: ಮೈಸೂರಿನ ಶ್ರೀ ಛಾಯಾದೇವಿ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ರಾಷ್ಟ್ರೀಯ ಮತದಾನದ ದಿನಾಚರಣೆಯನ್ನು ನಗರದ ಎಫ್ ಟಿಎಸ್ ವೃತ್ತದಲ್ಲಿ ಆಚರಿಸಲಾಯಿತು.
ಇದೇ ವೇಳೆ ಮತದಾರರಲ್ಲಿ ಮತದಾನದ ಕುರಿತಂತೆ ಜಾಗೃತಿಯನ್ನು ಜಾಥಾ ಮೂಲಕ ಮಾಡಲಾಯಿತಲ್ಲದೆ, ಸಾರ್ವಜನಿಕರಲ್ಲಿ ಮತದಾನದ ಅರಿವನ್ನು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯಧರ್ಮ ದಿನಪತ್ರಿಕೆಯ ವರದಿಗಾರ ಚೇತನ್ ರವರು ಎಫ್ ಟಿಎಸ್ ವೃತ್ತದಲ್ಲಿರುವ ಡಾ.ಬಿಆರ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಛಾಯಾದೇವಿ ಶಿಕ್ಷಣ ಮಹಾವಿದ್ಯಾಲಯವು ಸಮಾಜ ಉಪಯುಕ್ತ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕಾಗಿದ್ದು ಅದನ್ನು ತಪ್ಪದೆ ಚಲಾಯಿಸುವಂತೆ ಹೇಳಿದರು.
ಇದೇ ವೇಳೆ ಡಾ.ಆಂಥೋನಿ ಪಾಲ್ ರಾಜ್ ಅವರು ಮತದಾರರ ಜೊತೆಗೆ ಪ್ರತಿಜ್ಞಾವಿಧಿ ಬೋಧಿಸಿದ ಬಳಿಕ ಜಾಥಾಕ್ಕೆ ಚಾಲನೆ ನೀಡಿದರು. ಜಾಥಾವು ಎಫ್ ಟಿಎಸ್ ವೃತ್ತದಲ್ಲಿ ಆರಂಭವಾಗಿ ಮಾರುತಿ ವೃತ್ತ ಶನೇಶ್ವರ ಆರ್ಚ್ ಮೂಲಕ ಛಾಯಾದೇವಿ ಕಾಲೇಜಿನಲ್ಲಿ ಸಮಾಪ್ತಿಗೊಂಡಿತು.
ಈ ವೇಳೆ ಕಾರ್ಯಕ್ರಮದ ಸಂಯೋಜಕರಾದ ರಘುವೀರ್, ಪ್ರಾಧ್ಯಾಪಕರಾದ ಚಂದ್ರಶೇಖರ್, ಪಲ್ಲವಿ, ಸುಮಾ, ರೇಖಾ,ಬಲರಾಮ್ ಹಾಗೂ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.