ಮಂಡ್ಯ: ಸಾವಿನ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನ ಕಳ್ಳತನ ಮಾಡುತ್ತಿದ್ದ ಕಳ್ಳ ಕೊನೆಗೂ ಪೋಲೀಸರ ಅತಿಥಿಯಾಗಿದ್ದಾನೆ.
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ವಿವೇಕ್ (23) ಬಂಧಿತ ಖತರ್ನಾಕ್ ಕಳ್ಳ.
ಬಂಧಿತನಿಂದ ಒಟ್ಟು 36 ಲಕ್ಷ ಮೌಲ್ಯದ 521 ಗ್ರಾಂ ಚಿನ್ನಾಭರಣ, ಕ್ಯಾಮರಾ ಮತ್ತು ಲೆನ್ಸ್, ಒಂದು ಬೈಕ್, ಒಂದು ಕಾರು ಜಪ್ತಿ ಮಾಡಿದ್ದಾರೆ.
ಮೈಸೂರಿನಲ್ಲಿ ಮೊಬೈಲ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ವಿವೇಕ್, ಕಳೆದ ಮೂರು ವರ್ಷದಿಂದ ಸಾವಿನ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ.
ತನ್ನ ಸಂಬಂಧಿಕರು ಯಾರಾದರೂ ಸಾವನ್ನಪ್ಪಿರುವ ವಿಚಾರ ತಿಳಿದು ಆ ಮನೆಗಳ ಬಳಿಗೆ ತೆರಳುತ್ತಿದ್ದ ಆರೋಪಿ, ಅಂತ್ಯಸಂಸ್ಕಾರಕ್ಕೆಂದು ಎಲ್ಲರೂ ಮನೆಯಿಂದ ತೆರಳಿದ ನಂತರ ಈತ ಮಾತ್ರ ಅಲ್ಲಿಯೇ ಇದ್ದು ಎಲ್ಲರೂ ಹೋದ ನಂತರ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗುತ್ತಿದ್ದ. ಕೇವಲ ಸಾವಿನ ಮನೆ ಮಾತ್ರವಲ್ಲ, ಕಲ್ಯಾಣ ಮಂಟಪಗಳಲ್ಲೂ ಕೂಡ ಕಳ್ಳತನ ಮಾಡುತ್ತಿದ್ದ.
ಇನ್ನು ಸಾವಿನ ಮನೆಯಲ್ಲಿ ಕದ್ದ ಚಿನ್ನಾಭರಣಗಳನ್ನ ಅಡವಿಟ್ಟು ಮೋಜು ಮಸ್ತಿ ಕೂಡ ಮಾಡುತ್ತಿದ್ದ. ಇದು ಪೊಲೀಸರಿಗೂ ಕೂಡ ದೊಡ್ಡ ತಲೆ ನೋವಾಗಿತ್ತು. ಆರೋಪಿಯ ಬಂಧನಕ್ಕೆ ಪೊಲೀಸರು ಕೂಡ ಬಲೆ ಬೀಸಿದ್ರು.
ಅದೇ ರೀತಿ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದಲ್ಲಿ ಶಿವಕುಮಾರ್ ಎಂಬುವವರ ಮನೆಯಲ್ಲಿ 135 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಿದ್ದ. ಈ ಪ್ರಕರಣದಲ್ಲಿ ಆರೋಪಿಯನ್ನ ಬಂಧಿಸಿದಾಗ ಹತ್ತು ಪ್ರಕರಣಗಳು ಬೆಳಕಿಗೆ ಬಂದಿವೆ.