ಕಾಸರಗೋಡು: ಮನೆಗೆ ನುಗ್ಗಿದ ಕಳ್ಳರು ಎಂಟು ಪವನ್ ಚಿನ್ನಾಭರಣ ಹಾಗೂ 3,500 ರೂ.ನಗದು ಕಳವುಗೈದ ಘಟನೆ ಮಂಜೇಶ್ವರದ ಪೊಸೋಟ್ ನಲ್ಲಿ ನಡೆದಿದೆ.
ಉಪ್ಪಳದ ವ್ಯಾಪಾರಿಯಾಗಿರುವ ಅಬ್ದುಲ್ ರಜಾಕ್ ರವರ ಪೊಸೋಟ್ ನಲ್ಲಿರುವ ಮನೆಯಲ್ಲಿ ಈ ಕಳ್ಳತನ ನಡೆದಿದೆ.
ರವಿವಾರ ಸಂಜೆ ಮನೆಗೆ ಬೀಗ ಹಾಕಿ ಅಬ್ದುಲ್ ರಜಾಕ್ ಹಾಗೂ ಕುಟುಂಬದವರು ಚಿಕಿತ್ಸಗಾಗಿ ಮಂಗಳೂರಿಗೆ ತೆರಳಿದ್ದರು. ರಾತ್ರಿ ಮರಳಿ ಬಂದಾಗ ಮನೆಯ ಹಿಂಬದಿಯ ಬಾಗಿಲು ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪರಿಶೀಲಿಸಿದಾಗ ಮನೆಯ ಕಪಾಟಿನಲ್ಲಿರಿಸಲಾಗಿದ್ದ ಚಿನ್ನಾಭರಣ ಹಾಗೂ ನಗದು ಕಳವು ಗೈದಿರುವುದು ಕಂಡು ಬಂದಿದೆ.
ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.