ಚೆನ್ನೈ: ಸೇಲಂನ ಬಾಗಲ್ಪಟ್ಟಿಯಲ್ಲಿ ನಡೆಯುತ್ತಿದ್ದ ಸೈಕಲ್ ವಿತರಣಾ ಕಾರ್ಯಕ್ರಮದ ವೇಳೆ ವೇದಿಕೆಯಲ್ಲಿ ವಿದ್ಯಾರ್ಥಿಗಳ ಸಮ್ಮುಖದಲ್ಲಿ ರಾಜಕೀಯ ಗಲಾಟೆ ನಡೆಯಿತು. ಆ ಬಗ್ಗೆ ಬೇಸರಗೊಂಡ ಶಾಸಕ ಅರುಳ್ ವಿದ್ಯಾರ್ಥಿಗಳಲ್ಲಿ ಕ್ಷಮೆ ಕೇಳಿದ್ದಾರೆ.
ತಮಗೆ ವೇದಿಕೆಯಲ್ಲಿ ಮಹತ್ವ ಕೊಡದ ಕಾರಣ ಡಿಎಂಕೆ ಪಕ್ಷದ ಸದಸ್ಯರು ಶಾಲೆಯ ಅಧಿಕಾರಿಗಳೊಂದಿಗೆ ವಾಕ್ಸಮರಕ್ಕೆ ಇಳಿದಿದ್ದು, ನಂತರ ಅದು ವಿಕೋಪಕ್ಕೆ ತಿರುಗಿತ್ತು. ಘಟನೆಯ ಹಿನ್ನಲೆಯಲ್ಲಿ ಶಾಸಕ ವಿದ್ಯಾರ್ಥಿಗಳಲ್ಲಿ ಕ್ಷಮೆ ಯಾಚಿಸಿ ಜಗಳವನ್ನು ಕೊನೆಗೊಳಿಸಿದರು.
ಆಡಳಿತ ಪಕ್ಷದವರಾದ ನಮಗೆ ಕಾರ್ಯಕ್ರಮದಲ್ಲಿ ಮಾತಾಡಲು ಅವಕಾಶ ಕೊಡಲಿಲ್ಲವೆಂದು ಡಿಎಂಕೆ ಸಂಸದರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತ, ʼನಾವು ಇರದಿದ್ದರೆ ವಿತರಿಸಲು ಸೈಕಲ್ ಗಳೇ ಇರುತ್ತಿರಲಿಲ್ಲʼ ಎನ್ನುತ್ತ ಪಿಎಂಕೆ ಶಾಸಕ ಅರುಳ್ ರನ್ನು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಅರುಳ್ ಮಕ್ಕಳ ಕಾರ್ಯಕ್ರಮವನ್ನು ರಾಜಕೀಯ ಮಾಡಬೇಡಿ ಎಂದು ಮನವಿ ಮಾಡಿದರು.
ತಮ್ಮ ನಡತೆಗೆ ಮಕ್ಕಳೆದುರು ಕ್ಷಮೆ ಯಾಚಿಸಿದ ಅರುಳ್, ʼನೀವು ಉತ್ತಮ ಮೌಲ್ಯಗಳನ್ನು ಮತ್ತು ನಡವಳಿಕೆಯನ್ನು ಕಲಿಯುವ ಜಾಗದಲ್ಲಿ ನಾವು ಅನಾಗರೀಕವಾಗಿ ವರ್ತಿಸಿದ್ದಕ್ಕೆ ನಾನು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆʼ ಎಂದವರು ಮಕ್ಕಳ ಮುಂದೆ ನೆಲದ ಮೇಲೆ ಸಾಷ್ಟಾಂಗ ನಮಸ್ಕಾರ ಮಾಡಿದರು.