ಕೆ.ಆರ್.ಪೇಟೆ: ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಸಮಾಜ ಸೇವಕರಾದ ಆರ್ ಟಿಓ ಮಲ್ಲಿಕಾರ್ಜುನ್ ಅವರ ಕಚೇರಿಯಲ್ಲಿ ಅಂತರ್ ಧರ್ಮೀಯ ವಿವಾಹವಾಗಿ ಭಾವೈಕ್ಯತೆ ಮೆರೆದು ಮಾದರಿಯಾಗಿರುವ ರಶ್ಮಿ ಮತ್ತು ನಯಾಜ್ ಪಾಷಾ ದಂಪತಿಗೆ ಮಲ್ಲಿಕಾರ್ಜುನ್ ಅವರು ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಮಾದರಿ ಜೀವನ ನಡೆಸುವಂತೆ ಹರಸಿದ್ದಾರೆ.
ನಯಾಜ್ ಮತ್ತು ರಶ್ಮಿ ದಂಪತಿ ಎರಡು ವರ್ಷಗಳ ಹಿಂದೆ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗಳು ಅನೋನ್ಯವಾಗಿ ಸಂಸಾರ ನಡೆಸುತ್ತಾ ಬಂದಿದ್ದು ತಮಗೆ ಜನಿಸಿದ ಗಂಡುಮಗುವಿನ ನಾಮಕರಣ ಸಮಾರಂಭವನ್ನು ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಅವರ ಮಾರ್ಗದರ್ಶನದಲ್ಲಿ ಸರಳವಾಗಿ ಆಯೋಜಿಸಿದ್ದರು. ಮಲ್ಲಿಕಾರ್ಜುನ್ ಅವರ ಅಭಿಮಾನಿಯಾಗಿರುವ ನಯಾಜ್ ಮತ್ತು ರಶ್ಮಿ ಅಂತರ್ ಧರ್ಮೀಯ ವಿವಾಹವಾಗಿ ಎರಡು ಕುಟುಂಬದ ವಿಶ್ವಾಸ ಗಳಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಲ್ಲಿಕಾರ್ಜುನ್ ಅವರು ಪ್ರೀತಿಸಿ ವಿವಾಹ ವಾಗುವುದು ತಪ್ಪಲ್ಲ. ಆದರೆ ಈ ಪ್ರೀತಿಯನ್ನು ಜೀವನದ ಕೊನೆಯವರೆಗೂ ಉಳಿಸಿಕೊಂಡು ಸಾಂಸಾರಿಕ ಜೀವನ ನಡೆಸುವುದು ಬಹು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟು ಮಗುವಿಗೆ ಜನ್ಮ ನೀಡಿರುವ ನಯಾಜ್ ಮತ್ತು ರಶ್ಮಿ ದಂಪತಿ ಸದಾ ಸಂತೋಷದಿಂದ ಉತ್ತಮ ಸಹಜೀವನ ನಡೆಸುವ ಮೂಲಕ ಮಾದರಿ ದಂಪತಿ ಎಂಬ ಹಿರಿಮೆಗೆ ಪಾತ್ರರಾಗಬೇಕು. ಆದರೆ ಕೆಲವರು ಪ್ರೀತಿಸಿ ವಿವಾಹವಾದರೂ ನಂತರ ವರದಕ್ಷಿಣೆ ವರೋಪಚಾರ ಹಣ ಆಸ್ತಿ ತರುವಂತೆ ಹೆಣ್ಣಿಗೆ ತೊಂದರೆ ನೀಡಿರುವ ನಿದರ್ಶನಗಳಿವೆ. ಇದಕ್ಕೆ ವಿರುದ್ಧವಾಗಿ ಉತ್ತಮ ಸಾಂಸಾರಿಕ ಸಹಜೀವನ ನಡೆಸುತ್ತಿರುವ ನಯಾಜ್ ಮತ್ತು ರಶ್ಮಿ ದಂಪತಿಗಳಿಗೆ ಹಾಗೂ ಮಗುವಿಗೆ ಶುಭವಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಹೊಸಹೊಳಲು ದೇವರಾಜು, ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಕೆ.ಸುರೇಶ್, ಶಶಿಧರ್(ಬಾಬಣ್ಣ), ಮಡವಿನಕೋಡಿ ಉಮೇಶ್, ಮುಖಂಡರಾದ ಸಾಧುಗೋನಹಳ್ಳಿ ಲೋಕೇಶ್, ಬಸವೇಗೌಡ, ಚಂದ್ರೇಗೌಡ, ಸುರೇಶ್, ಇಲಿಯಾಜ್ ಪಾಷಾ, ಗ್ರಾ.ಪಂ.ಸದಸ್ಯ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್ ಸೇರಿದಂತೆ ನೂರಾರು ಅಭಿಮಾನಿಗಳು ಇದ್ದರು.