ಕೆ.ಆರ್.ಪೇಟೆ: ಕಬ್ಬಿಗೆ 4500 ರೂ. ಬೆಂಬಲ ಬೆಲೆ ನಿಗದಿ ಮಾಡುವುದು, ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ಪೂರೈಕೆ, ಕಲ್ಲು ಗಣಿಗಾರಿಕೆ ಶಾಶ್ವತ ಬಂದ್ ಮಾಡುವುದು ಸೇರಿದಂತೆ ವಿವಿಧ 18 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಡೇಗೌಡ, ಪ್ರಧಾನ ಕಾರ್ಯದರ್ಶಿ ಬೂಕನಕೆರೆ ನಾಗರಾಜು, ಹಿರಿಯ ರೈತ ಮುಖಂಡರಾದ ಮುದುಗೆರೆ ರಾಜೇಗೌಡ, ಕೆ.ಆರ್.ಜಯರಾಮ್, ಎಲ್.ಬಿ.ಜಗದೀಶ್, ಮುದ್ದುಕುಮಾರ್ ನೇತೃತ್ವದಲ್ಲಿ ಪಟ್ಟಣದ ಅಂಚೆ ಕಚೇರಿ ಬಳಿ ಮೈಸೂರು- ಶಿವಮೊಗ್ಗ ಮುಖ್ಯಯಲ್ಲಿ ಟ್ರ್ಯಾಕ್ಟರ್ ಮತ್ತು ಎತ್ತಿನ ಗಾಡಿಗಳನ್ನು ನಿಲ್ಲಿಸಿ ರಸ್ತೆ ತಡೆ ಚಳುವಳಿ ನಡೆಸಿದ ನೂರಾರು ರೈತರು ಸರ್ಕಾರ ಹಾಗೂ ಮುಖ್ಯಮಂತ್ರಿಗಳ ವಿರುದ್ದ ಘೋಷಣೆ ಕೂಗಿದರು.
ಸರ್ಕಾರವು ಕಬ್ಬಿಗೆ ಎಫ್.ಆರ್.ಪಿ. ಮತ್ತು ಎಸ್.ಎ.ಪಿ ದರ ಘೋಷಣೆ ಮಾಡಬೇಕು. ಕೆ.ಆರ್.ಎಸ್. ಸುತ್ತಮುತ್ತ ಇರುವ ಎಲ್ಲಾ ಕಲ್ಲುಗಣಿಗಾರಿಕೆಯನ್ನು ಶಾಶ್ವತವಾಗಿ ಬಂದ್ ಮಾಡಬೇಕು, ರಸಗೊಬ್ಬರ ದರ ಇಳಿಕೆ ಮಾಡಬೇಕು, ಹಾಲಿಗೆ ವೈಜ್ಞಾನಿಕ ನೀಡಬೇಕು, ಪಶು ಆಹಾರದ ದರವನ್ನು ಸಬ್ಸಿಡಿ ರೂಪದಲ್ಲಿ ನೀಡಬೇಕು, ರೈತರಿಗೆ ನೀಡುತ್ತಿರುವ ಉಚಿತ ವಿದ್ಯುತ್ ಪೂರೈಕೆಗೆ ಸಂಚಕಾರ ತರುವ ವಿದ್ಯುತ್ ಕಾಯ್ದೆ ತಿದ್ದುಪಡಿ ಮಾಡಬಾರದು, ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆಯನ್ನು ಬಲಪಡಿಸಬೇಕು, ಬಗರ್ ಹುಕುಂ ಸಾಗವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ನೀಡಬೇಕು, ರೈತರ ಭೂಮಿಯನ್ನು ಕಡಿಮೆ ಬೆಲೆಗೆ ವಶಪಡಿಸಿಕೊಂಡು ಖಾಸಗಿ ಕಾರ್ಖಾನೆಗಳಿಗೆ ರಿಯಾಯಿತಿ ದರದಲ್ಲಿ ನೀಡುವ ಯೋಜನೆಯನ್ನು ನಿಲ್ಲಿಸಬೇಕು, ಉದ್ಯಮಿಗಳಿಗೆ ಸಾವಿರಾರು ಕೋಟಿ ರೂ ಬಾಕಿ ಮನ್ನಾ ಮಾಡಿರುವ ಮಾದರಿಯಲ್ಲಿ ರೈತರ ವಿವಿಧ ಸಾಲಗಳನ್ನು ಮನ್ನಾ ಮಾಡಬೇಕು, ಸಾಲ ಮನ್ನಾ ಮಾಡದಿದ್ದರೆ ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಮಾರುಕಟ್ಟೆ ದರ ನಿಗಧಿ ಮಾಡಿ ರೈತರನ್ನು ಉಳಿಸಬೇಕು, ಬೆಲೆ ಕಡಿಮೆಯಾದಾಗ ಕೃಷಿ ಉತ್ಪನ್ನಗಳು ಕೆಡದಂತೆ ಸಂರಕ್ಷಣೆ ಮಾಡಿ ಬೆಲೆ ಬಂದಾಗ ಮಾರಾಟ ಮಾಡಲು ಸಹಾಯಕವಾಗುವಂತೆ ಕೋಲ್ಡ್ ಸ್ಟೋರೇಜ್ಗಳನ್ನು ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿಯೂ ನಿರ್ಮಾಣ ಮಾಡಬೇಕು ಹೀಗೆ ಸುಮಾರು 18ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಸುಮಾರು ಒಂದೂವರೆ ಗಂಟೆಗಳ ಕಾಲ ಮೈಸೂರು-ಶಿವಮೊಗ್ಗ ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವೃತ್ತ ನಿರೀಕ್ಷಕ ದೀಪಕ್ ನೇತೃತ್ವದಲ್ಲಿ ಪೊಲೀಸರು ಚಳುವಳಿ ಕೈಬಿಡುವಂತೆ ಹಲವು ಬಾರಿ ಮನವಿ ಮಾಡಿದರೂ ಚಳುವಳಿಯನ್ನು ತೀವ್ರಗೊಳಿಸಲು ಮುಂದಾದ ಕಾರಣ ಪ್ರತಿಭಟನಾಕಾರರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಲಾಯಿತು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೈಸೂರು ಮತ್ತು ಚನ್ನರಾಯಪಟ್ಟಣ ಕಡೆಗಳಿಗೆ ಹೊರಟಿದ್ದ ಪ್ರಯಾಣಿಕರಿಗೆ ರೈತರ ಪ್ರತಿಭಟನೆಯ ಬಿಸಿ ತಟ್ಟಿತ್ತು. ಇದರಿಂದ ಸುಮಾರು ಒಂದೂವರೆ ಗಂಟೆಗಳ ಕಾಲ ಬಸ್ಸಿನಲ್ಲಿಯೇ ಕಾಲಕಳೆಯುವಂತಾಯಿತು.