ಕೆ.ಆರ್.ಪೇಟೆ: ಯಾವ ಕ್ಷಣದಲ್ಲಿ ಏನಾಗುತ್ತದೆ ಎಂಬುದನ್ನು ಅರಿಯದೆ ಜೀವನ ಮಾಡುತ್ತಿರುವ ನಾವುಗಳು ಕಡ್ಡಾಯವಾಗಿ ಆರೋಗ್ಯ ವಿಮೆ ಮತ್ತು ಜೀವ ವಿಮೆ ಮಾಡಿಸುವ ಮೂಲಕ ನೆಮ್ಮದಿಯ ಜೀವನ ನಡೆಸಿವ ಜೊತೆಗೆ ನಮ್ಮನ್ನೇ ಆಶ್ರಯಿಸಿರುವವರಿಗೂ ಸಹಕಾರಿಯಾಗಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಮಮತಾ ಶೆಟ್ಟಿ ತಿಳಿಸಿದರು.
ತಾಲೂಕಿನ ಅಂಚನಹಳ್ಳಿ ಗ್ರಾಮದ ನಿವಾಸಿ ಗಂಗಮ್ಮ ಅವರು ಅನಿರೀಕ್ಷವಾಗಿ ಸಾವನ್ನಪ್ಪಿರುವುದರಿಂದ ಸಂಸ್ಥೆಯ ಪರವಾಗಿ ಎರಡು ಲಕ್ಷ ರೂಪಾಯಿ ಹಣದ ಆದೇಶ ಪ್ರತಿಯನ್ನು ಮೃತರ ಕುಟುಂಬಕ್ಕೆ ಹಸ್ತಾಂತರಿಸಿ ಮಾತನಾಡಿ, ವರ್ಷಕ್ಕೆ ಕೇವಲ ನೂರು ರೂಪಾಯಿ ಪಾವತಿ ಮಾಡುವ ಮೂಲಕ ಇಬ್ಬರು ಆರೋಗ್ಯ ವಿಮೆಯನ್ನು ಪಡೆಯಬಹುದು ಮತ್ತು ಎರಡು ಲಕ್ಷರೂಪಾಯಿಯ ವರೆಗೂ ಮರಣ ವಿಮೆಯನ್ನು ಪಡೆಯುವ ಯೋಜನೆಗಳಿದ್ದು ಪ್ರತಿಯೊಬ್ಬರೂ ಕಡ್ಡಾಯ ಈ ವಿಮಾ ಪಾಲಿಸಿಗಳನ್ನು ಮಾಡಿಸಿಕೊಳ್ಳಬೇಕು.
ಇಂದಿನ ಆಧುನಿಕ ಜೀವನದಲ್ಲಿ ಯಾವ ಕ್ಷಣದಲ್ಲಿ ಯಾವ ಕಾಯಿಲೆ ಬರುತ್ತದೆ ಎಂದು ಗೊತ್ತಾಗುವುದಿಲ್ಲ. ನೂರು ಕೊಟ್ಟು ಪಾಲಿಸಿ ಮಾಡಿಸಿದ್ದರೆ ಆರೋಗ್ಯ ತಪ್ಪಿದಾಗ ಅದು ನೆರವಿಗೆ ಬರುತ್ತದೆ. ಒಂದು ವೇಳೆ ಮೃತಪಟ್ಟರೆ ಎರಡು ಲಕ್ಷ ರೂಪಾಯಿ ವಿಮಾ ಪರಿಹಾರ ಸಿಗುತ್ತದೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಯಾರಾದರೂ ಕೆಟ್ಟಚಟಗಳಿಗೆ ಒಳಗಾಗಿದ್ದರೆ ಅವರನ್ನು ಡಿ.16 ರಿಂದ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸೋಮನಹಳ್ಳಿ ಗ್ರಾಮದಲ್ಲಿ ಒಂದು ವಾರಗಳ ಕಾಲ ಶಿಬಿರವನ್ನು ಆಯೋಜಿಸಿದ್ದು ಯಾರಿಗಾದರೂ ಸಣ್ಣ ವಯಸ್ಸಿನಲ್ಲಿಯೇ ಕೆಟ್ಟ ಚಟಗಳಿಗೆ ಒಳಗಾಗಿದ್ದರೆ ಅವರನ್ನು ಸೇರಿಸಲು ಕ್ರಮವಹಿಸಿ. ನಾವು ಅವರ ಜೀವನವನ್ನು ಬದಲಾಯಿಸಲು ಶಿಬಿರದಲ್ಲಿ ಕ್ರಮವಹಿಸಲಾಗುವುದು. ವೀರೇಂದ್ರ ಹೆಗಡೆಯವರು ಮಹಿಳೆಯರು, ಯುವಕರು ಸ್ವಯಂ ಉದ್ಯೋಗ ಮಾಡಿಕೊಂಡು ಸ್ವಾಭಿಮಾನದ ಜೀವನ ಮಾಡಲು ನೆರವಾಗಲು ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಎಲ್ಲರೂ ಅದರ ಸದುಪಯೋಗ ಪಡಿಸಿಕೊಳ್ಳಿ ಮನವಿ ಮಾಡಿದರು.
ಈ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಪವಿನ್, ಶಿಲ್ಪ, ಕವಿತಾ ಮತ್ತಿತರರು ಹಾಜರಿದ್ದರು.