ಕೆ.ಆರ್.ಪೇಟೆ: ತಾಲೂಕು ರೈತಸಂಘ ಮಿನಿವಿಧಾನಸೌಧದ ಮುಂದೆ ನಡೆಸಲು ಉದ್ದೇಶಿಸಿದ್ದ ಅನಿರ್ಧಿಷ್ಠ ಕಾಲ ಚಳುವಳಿಯನ್ನು ವಾಪಸ್ ಪಡೆಯುವಂತೆ ಮಾಡುವಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು ಯಶಸ್ವಿಯಾಗಿದ್ದಾರೆ.
ತಾಲೂಕು ಕಛೇರಿಯಲ್ಲಿನ ರೈತರ ಕೆಲಸ ವಿಳಂಬವಾಗುತ್ತಿದೆ ಎಂದು ನ.24 ರಿಂದ ಚಳುವಳಿಗೆ ರೈತಸಂಘ ನಿರ್ಧರಿಸಿತ್ತು. ಈ ನಡುವೆ ತಹಸೀಲ್ದಾರ್ ಎಂ.ವಿ.ರೂಪಾ ನೇತೃತ್ವದಲ್ಲಿ ನ.21ರಿಂದ 25ರ ತನಕ ರೈತರ ಕಡತ ವಿಲೇವಾರಿಗೆ ಸಪ್ತಾಹ ಮೇಳ ಆಯೋಜಿಸಿತ್ತು. ಮೂರು ದಿನಗಳ ಕಾಲ ಅಧಿಕಾರಿಗಳು ರೈತರ ಅರ್ಜಿಯನ್ನು ವಿಲೇವಾರಿಗೆ ಮುಂದಾಗಿತ್ತು. ಗುರುವಾರ ರೈತಸಂಘ ಚಳುವಳಿಗ ಕರೆ ನೀಡಿದ್ದರಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಮಾವಣೆಗೊಂಡ ಮೆರವಣಿಗೆ ಮೂಲಕ ವಿಧಾನಸೌಧದ ಮುಂದೆ ಜಮಾವಣೆಗೊಂಡರು.
ಹಿರಿಯ ಮುಖಂಡ ಕೆ.ಆರ್.ಜಯರಾಂ ಭ್ರಷ್ಟಾಚಾರ ಮುಕ್ತ ಸಮಾಜ ನಿಮಾಣವಾಗಬೇಕು. ಇಲಾಖೆಗಳಲ್ಲಿ ರೈತರಿಗೆ ಆಗುತ್ತಿರುವ ಕಿರುಕುಳ ತಪ್ಪಬೇಕು ಎನ್ನುವ ಆಶಯದ ಹಿನ್ನೆಲೆಯಲ್ಲಿ ರೈತಸಂಘ ಹೋರಾಟದ ಮಾರ್ಗ ಹಿಡಿದಿದೆ. ಕಳೆದ ಫೆಬ್ರವರಿ ತಿಂಗಳಿನಲ್ಲಿ ನಡೆದ ರೈತ ಚಳುವಳಿಯ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಾದ ಸಚಿವ ಕೆ.ಸಿ.ನಾರಾಯಣಗೌಡರು ನೀಡಿದ ಯಾವುದೇ ಭರವಸೆಗಳು ಈಡೇರಿಲ್ಲ.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಾಲೂಕಿನಾದ್ಯಂತ ಕಂದಾಯ ಅದಾಲತ್ ನಡೆದರೂ ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಲ್ಲ. ನ.21 ರಿಂದಲೇ ಕಂದಾಯ ಅದಾಲತ್ ಸಪ್ತಾಹದ ಹೆಸರಿನಲ್ಲಿ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಟೆಂಟ್ ಗಳನ್ನು ಹಾಕಿ ರೈತರ ಹೋರಾಟಕ್ಕೆ ಜಾಗವಿಲ್ಲದಂತೆ ಮಾಡಿದೆ. ತಾಲೂಕು ಆಡಳಿತ ಆಯೋಜಿಸಿರುವ ಕಂದಾಯ ಅದಾಲತ್ ಸಪ್ತಾಹ ಸ್ವಾಗತಾರ್ಹ.
ಇದು ಪರಿಹಾರ ನೀಡಲು ಬದಲು ಕೇವಲ ಅರ್ಜಿಗಳನ್ನು ಸ್ವೀಕರಿಸುವುದಕ್ಕೆ ಸೀಮೀತವಾಗದೆ ಕೆಲಸವಾಗಬೇಕು. ಹೋಬಳಿ ಮಟ್ಟದಲ್ಲಿ ಪ್ರತಿ ತಿಂಗಳೂ ಕಂದಾಯ ಅದಾಲತ್ ನಡೆಸಿ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು. ತಾಲೂಕು ಕಛೇರಿಗೆ ಅಲೆದೂ ಅಲೆದು ರೈತರ ಚಪ್ಪಲಿಗಳು ಸವೆಯುತ್ತಿದ್ದು ಸರ್ಕಾರ ರೈತರಿಗಾಗಿ ವಿಶೇಷ ಚಪ್ಪಲಿ ಬಾಗ್ಯ ಯೋಜನೆಯನ್ನಾದರೂ ರೂಪಿಸಬೇಕೆಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಮಾತನಾಡಿ ತಾಲೂಕು ಕಛೇರಿ ರೈತರ ಕಚೇರಿಯಾಗುವ ಬದಲು ದರೋಡೆಕೋರರ ಕಛೇರಿಯಾಗಿದೆ. ತಾಲೂಕಿನ ಹೇಮಾವತಿ ನೀರಾವರಿ ಇಲಾಖೆಯಲ್ಲಿ ನಡೆದಿರುವ ಬ್ರಷ್ಟಾಚಾರದ ಬಗ್ಗೆ ತನಿಖೆಯಾಗಬೇಕು. ಹೆರಿಗೆ ಮಾಡಿಸಿದ ಕಾರಣಕ್ಕೆ ಲಂಚ ನೀಡಲು ನಿರಾಕರಿಸಿದ ರೈತರ ಹೆಣ್ಣುಮಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಮಹಿಳಾ ವೈದ್ಯೆ ಸೌಜನ್ಯ ಅವರ ವಿರುದ್ದ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಬಳಿಕ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು ಕಂದಾಯ ಇಲಾಖೆಯಲ್ಲಿ ಬಾಕಿಯಿರುವ ಮತ್ತು ಇದೀಗ ಕಂದಾಯ ಅದಾಲತ್ ಮೂಲಕ ಸ್ವೀಕರಿಸುತ್ತಿರುವ ಎಲ್ಲಾ ಅರ್ಜಿಗಳನ್ನು ಒಂದು ತಿಂಗಳ ಅವಧಿಯಲ್ಲಿ ವಿಲೇ ಮಾಡಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತ ಬದ್ದವಾಗಿದ್ದು ರೈತರು ಪ್ರತಿಭಟನೆ ಮಾಡದಂತೆ ಕೆಲಸ ಮಾಡಲಿದ್ದೇವೆ. ತಾಲೂಕು ಕಛೇರಿಯಲ್ಲಿ ಬಾಕಿಯಿರುವ ಮತ್ತು ಸ್ವೀಕೃತವಾಗುತ್ತಿರುವ ಎಲ್ಲಾ ಅರ್ಜಿಗಳನ್ನು ಪರಿಸೀಲಿಸಿ ಕ್ರಮವಹಿಸಲು ಜಿಲ್ಲಾಧಿಕಾರಿಗಳ ಕಛೇರಿಯಿಂದ ಎಂಟು ಜನ ಸಿಬ್ಬಂಧಿಗಳ ಎರಡು ಕಾರ್ಯತಂಡವನ್ನು ನಿಯೋಜಿಸಲಾಗಿದೆ. ಪ್ರತಿ ತಿಂಗಳೂ ಹೋಬಳಿ ಮಟ್ಟದಲ್ಲಿ ಕಂದಾಯ ಅದಾಲತ್ ನಡೆಸುವ ಕಾರ್ಯಕ್ರಮ ರೂಪಿಸಲಾಗುವುದು. ತಾಲೂಕಿನಲ್ಲಿ ಸುಮಾರು 6 ಸಾವಿರ ಬಗರ್ ಹುಕುಂ ಸಾಗುವಳಿ ಅರ್ಜಿಗಳು ವಿಲೇಯಾಗಬೇಕಾಗಿದೆ.
ತಾಲೂಕು ಕಚೇರಿ ಅಧಿಕಾರಿಗಳಿಗೆ ಅರ್ಜಿ ವಿಲೇವಾರಿಗೆ ಜಿಲ್ಲಾಡಳಿತದ ವತಿಯಿಂದ ನಿರ್ದೇಶನ ನೀಡಲಾಗಿದೆ. ಸ್ವೀಕೃತಗೊಂಡಿರುವ ಅರ್ಜಿಗಳಲ್ಲಿ ತಹಸೀಲ್ದಾರ್, ಎಸಿ ಹಂತದಲ್ಲಿ ಇತ್ಯರ್ಥ ಆಗುವ ಕಡತಗಳನ್ನು ವಿಲೇವಾರಿ ಮಾಡುವ ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ಸಿಪಿಐ ಎಂ.ಕೆ.ದೀಪಕ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.