ಮಂಡ್ಯ: ಮಂಡ್ಯದ ಜನತೆ ಧ್ವಜ ಪ್ರಕರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧವಾಗಿದ್ದಾರೆ. ಇದು ಅರ್ಥವಾದ ಮೇಲೆ ಬಿಜೆಪಿ, ಜೆಡಿಎಸ್ ಸ್ವಲ್ಪ ಹಿಂದೆ ಬಂದಿದೆ. ಇದೊಂದು ದುರಂತ ಎಂದು ಸಚಿವ ಚೆಲುವರಾಯಸ್ವಾಮಿ ಬಿಜೆಪಿ, ಜೆಡಿಎಸ್ ವಿರುದ್ಧ ಆಕ್ರೋಶ ಹೊರ ಹಾಕಿದರು.
ಮಂಡ್ಯ ಬಂದ್ ವಿಚಾರವಾಗಿ ಜಿಲ್ಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೊದಲನೇ ಆದ್ಯತೆ ಸಂವಿಧಾನ, ಮೊದಲನೆಯ ಆದ್ಯತೆ ಪ್ರಜಾಪ್ರಭುತ್ವ, ಮೊದಲನೇ ಆದ್ಯತೆ ಭಾರತ ದೇಶ ಇದನ್ನ ಬಿಟ್ಟು ಹನುಮನ ಧ್ವಜ ಹಾರಿಸಿದ್ದೆ ತಪ್ಪು.
ಬಿಜೆಪಿ, ಜೆಡಿಎಸ್ ನವರು ಮುಂದಕ್ಕೆ ಹೋಗಿದ್ದಾರೆ. ಹಿಂದಕ್ಕೆ ಬರಲಾಗದೆ ತಪ್ಪನ್ನು ಒಪ್ಪಿಕೊಳ್ಳಲಾಗದೆ ಮಂಡ್ಯ ಜನರ ಭಾವನೆಗೆ ಸ್ಪಂದಿಸಲಾಗದೆ ಹೀಗೆ ಬಂದ್ ಮಾಡಿದ್ದಾರೆ. ಇದಕ್ಕೆ ಜನ ತೀರ್ಮಾನ ಮಾಡುತ್ತಾರೆ ಎಂದು ಸಚಿವ ಚೆಲುವರಾಯಸ್ವಾಮಿ ಆಕ್ರೋಶ ಹೊರ ಹಾಕಿದರು.
ರಾಷ್ಟ್ರದ ಸಂವಿಧಾನದ ವಿರುದ್ಧ ಪ್ರಜಾಪ್ರಭುತ್ವದ ವಿರುದ್ಧ, ರಾಷ್ಟ್ರಧ್ವಜದ ವಿರುದ್ಧ ಅವರು ಘೋಷಣೆ ಕೂಗಿದ್ದಾರೆ. ಹನುಮನ ಧ್ವಜ ಹಾರಿಸಲು ಅದಕ್ಕೆ ಆದ ಜಾಗ ಇದೆ. ವೈಯಕ್ತಿಕ ಧರ್ಮದ ವಿಚಾರದಲ್ಲಿ ಯಾರದ್ದು ತಪ್ಪು ಎನ್ನಲ್ಲ. ಆದರೆ ಅದಕ್ಕೊಂದು ಇತಿಮತಿ ಇದೆ ಎಂದರು.
ಕುವೆಂಪು ಅವರನ್ನು ಅತ್ಯಂತ ಹೆಚ್ಚು ಪ್ರೀತಿಸಿದ ಜಿಲ್ಲೆ ಮಂಡ್ಯ. ಅದಕ್ಕೆ ಕುವೆಂಪು ಅವರ ಮಾತಿಗೆ ವಿರುದ್ಧವಾಗಿ ಇವತ್ತು ಬಂದ್ ಮಾಡಲಾಗಿದೆ. ಇಲ್ಲಿಯವರೆಗೆ ಯಾವುದೇ ಜಾತಿಗಳ ನಡುವೆ, ಧರ್ಮಗಳ ನಡುವೆ ಘರ್ಷಣೆ ಆಗುವ ಅವಕಾಶ ಮಂಡ್ಯದಲ್ಲಿ ಇರಲಿಲ್ಲ ಮುಂದೆಯೂ ಆಗುವುದಕ್ಕೆ ಅವಕಾಶ ಇಲ್ಲ ಎಂದರು.