ಭಾರತೀನಗರ: ಗಾಡಿ ಎಳೆದೊಯ್ಯುತ್ತಿದ್ದ ಸಂದರ್ಭ ಮಾರ್ಗ ಮಧ್ಯೆ ಹೃದಯಾಘಾತದಿಂದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಎತ್ತು ಸಾವನ್ನಪ್ಪಿರುವ ಘಟನೆ ಗುರುದೇವರಹಳ್ಳಿ ಸಮೀಪದಲ್ಲಿ ನಡೆದಿದೆ.
ಅರೆಕಲ್ಲುದೊಡ್ಡಿ ಗ್ರಾಮದ ರೈತ ಪುಟ್ಟ ಎಂಬುವವರಿಗೆ ಸೇರಿದ ಎತ್ತು ಸಾವನ್ನಪ್ಪಿದೆ. ಈ ರೈತ ಅಣ್ಣೂರು ಗ್ರಾಮದಿಂದ ಎತ್ತನ್ನು ಒಂದೂವರೆ ಲಕ್ಷ ರೂಪಾಯಿ ಕೊಟ್ಟು ಖರೀದಿಸಿದ್ದರು. ನಂತರ ದೊಡ್ಡ ಅರಸಿನಕೆರೆ ಗ್ರಾಮದಲ್ಲಿ ನಿಲ್ಲಿಸಲಾಗಿದ್ದ ಎತ್ತಿನ ಗಾಡಿಯನ್ನು ಕಟ್ಟಿಕೊಂಡು ಸ್ವಗ್ರಾಮವಾದ ಅರೆಕಲ್ಲುದೊಡ್ಡಿ ಗ್ರಾಮಕ್ಕೆ ಸಂಜೆ 6 ಗಂಟೆಯ ಸಂದರ್ಭದಲ್ಲಿ ಹೋಗುತ್ತಿದ್ಧಾಗ ಗುರದೇವರಹಳ್ಳಿ ಬಳಿ ಎತ್ತು ಹೃದಯಾಘಾತವಾಗಿ ಸ್ಥಳದಲ್ಲಿಯೇ ಸಾವನ್ನಪ್ಪಿದೆ.
ಎತ್ತನ್ನು ಕಳೆದುಕೊಂಡ ರೈತ ಪುಟ್ಟ ಅವರು ಗೋಳಾಡುತ್ತಿದ್ದುದನ್ನು ಕಂಡ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ಸಮಾಧಾನಪಡಿಸಿದರು. ನಂತರ ಎತ್ತನ್ನು ಅಲ್ಲಿಯೇ ಸಾರ್ವಜನಿಕರ ಸಹಕಾರದೊಂದಿಗೆ ಸಂಸ್ಕಾರ ಮಾಡಲಾಯಿತು.
ಉದಯ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕದಲೂರು ಉದಯ್ ಅವರು ಖಾಸಗಿ ಕಾರ್ಯ ನಿಮಿತ್ತ ಬೊಮ್ಮನದೊಡ್ಡಿ ಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಎತ್ತು ಅಸು ನೀಗಿರುವುದನ್ನು ಗಮನಿಸಿ ಸ್ಥಳಕ್ಕೆ ತೆರಳಿ ರೈತ ಪುಟ್ಟ ಅವರಿಗೆ ಸಾಂತ್ವನ ಹೇಳಿದರಲ್ಲದೆ. 10 ಸಾವಿರ ರೂಪಾಯಿ ಸಹಾಯಧನ ನೀಡಿದರು.