ಕೆ.ಆರ್.ಪೇಟೆ: ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿದ ಯುವಕನ ವಿರುದ್ದ ಕ್ರಮ ಕೈಗೊಳ್ಳದೇ ವಿಳಂಬ ಮಾಡಿದ ಪೊಲೀಸರ ವರ್ತನೆಯಿಂದ ಬಾಲಕಿ ತಂದೆ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಬಿ.ಬಾಚಹಳ್ಳಿ ಗ್ರಾಮಸ್ಥರು ಶವವನ್ನು ಪೋಲೀಸ್ ಠಾಣೆಯ ಮುಂದೆ ಇಟ್ಟು ಪ್ರತಿಭಟನೆ ನಡೆಸಿ ಅಪಹರಣ ಮಾಡಿದ ಯುವಕ ಹಾಗೂ ಸಹಕಾರ ನೀಡಿದವರ ವಿರುದ್ದ ಸೂಕ್ತ ಕಾನೂನು ಕೈಗೊಳ್ಳಬೇಕು ಆಗ್ರಹಿಸಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.
ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಬಿ.ಬಾಚಹಳ್ಳಿ ಗ್ರಾಮದ ರವಿ(45) ಮೃತ ವ್ಯಕ್ತಿ. ಕಳೆದ ಐದು ದಿನಗಳ ಹಿಂದೆ ಬಿ.ಬಾಚಹಳ್ಳಿ ಗ್ರಾಮದ ರವಿ ಅವರು ಗ್ರಾಮಾಂತರ ಪೊಲೀಸ್ ಠಾಣೆಗೆ ಹೋಗಿ ತಮ್ಮ ಅಪ್ರಾಪ್ತ ವಯಸ್ಸಿನ ಮಗಳನ್ನು ಅದೇ ಬಿ.ಬಾಚಹಳ್ಳಿ ಗ್ರಾಮದ ಅಭಿ ಎಂಬ ಯುವಕ ಅಪಹರಣ ಮಾಡಿಕೊಂಡು ಹೋಗಿದ್ದಾನೆ ಹಾಗಾಗಿ ಕೂಡಲೇ ನನ್ನ ಮಗಳನ್ನು ಪತ್ತೆ ಮಾಡಿಕೊಂಡುವಂತೆ ದೂರು ನೀಡಿದ್ದರು.
ಈ ನಡುವೆ ಬಾಲಕಿಯವನ್ನು ಅಪಹರಿಸಿದ ಯುವಕನ ಕಡೆಯವರು ಬಾಲಕಿಯ ತಂದೆ ರವಿ ಅವರಿಗೆ ಪೊಲೀಸರಿಗೆ ದೂರು ನೀಡಿದ್ದೀಯಾ. ನೀನು ಯಾರಿಗೆ ದೂರು ಕೊಟ್ಟರೂ ಪ್ರಯೋಜನವಿಲ್ಲ. ಕೊಟ್ಟಿರುವ ದೂರನ್ನು ಹಿಂಪಡೆಯದಿದ್ದರೆ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆಂದು ಬಹಿರಂಗವಾಗಿಯೇ ಬೆದರಿಕೆ ಹಾಕಿದರೆನ್ನಲಾಗಿದೆ. ಇದರಿಂದ ಮನನೊಂದ ರವಿ ಮಾನಸಿಕವಾಗಿ ನೊಂದು ಬುಧವಾರ ಬೆಳಿಗ್ಗೆ 10.30 ರ ಸಂದರ್ಭದಲ್ಲಿ ತಮ್ಮದೇ ಜಮೀನಿನ ಮರವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತಿಳಿಸಿದ್ದಾರೆ.
ರವಿಯ ಆತ್ಮಹತ್ಯೆಯಿಂದ ಆಕ್ರೋಶಗೊಂಡ ರವಿಯವರ ಕುಟುಂಬಸ್ಥರು, ಸಂಬಂಧಿಕರು ಮತ್ತು ಗ್ರಾಮಸ್ಥರು ರವಿ ಶವವನ್ನು ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆಯ ಮುಂದಿಟ್ಟು ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಭೇಟಿ ನೀಡಿ ಪ್ರತಿಭಟನಾಕಾರರ ಮನವಿಯನ್ನು ಆಲಿಸಿ, ತಪ್ಪಿತಸ್ಥರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸುವ ಭರವಸೆ ನೀಡಿ, ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು. ಪ್ರತಿಭಟನೆ ಮುಂದುವರೆಸಿದ ಕಾರಣ ಪೊಲೀಸರು ಆಂಬ್ಯುಲೆನ್ಸ್ ನಲ್ಲಿ ಶವವನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ, ಪ್ರತಿಭಟನಾಕಾರನ್ನು ಠಾಣೆಯ ಆವರಣದಿಂದ ಹೊರಗೆ ಕಳುಹಿಸಿದ್ದಾರೆ.