ಮಂಡ್ಯ: ಮೂರು ವರ್ಷದ ಹಿಂದೆ ನಡೆದ ಪುಲ್ವಾಮ ದಾಳಿಯಲ್ಲಿ ವೀರಮರಣವನ್ನಪ್ಪಿದ ಜಿಲ್ಲೆಯ ಯೋಧ ಗುರುವಿಗೆ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಬಳಿಯ ಮದ್ದೂರು- ಮಳವಳ್ಳಿ ರಸ್ತೆಯಲ್ಲಿ ಸಮಾಧಿ ನಿರ್ಮಾಣ ಮಾಡಲಾಗಿದ್ದು, ಗಣರಾಜ್ಯೋತ್ಸವ ದಿನದಂದು ಪತ್ನಿ ಕಲಾವತಿ ರಾಷ್ಟ್ರಧ್ವಜವನ್ನಿಟ್ಟು ಪೂಜೆ ಸಲ್ಲಿಸಿದ್ದಾರೆ.
ಮೂರು ವರ್ಷದ ಬಳಿಕ ಸಮಾಧಿ ನಿರ್ಮಾಣವಾಗಿದ್ದು, ಫೆ.14ರಂದು ಉದ್ಘಾಟನೆ ನಡೆಸಲು ತೀರ್ಮಾನಿಸಲಾಗಿದೆ. ಈಗಾಗಲೇ ಈ ಸಮಾಧಿಯನ್ನು ನೋಡಲು ಜನ ಆಗಮಿಸುತ್ತಿದ್ದಾರೆ. ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ಅವರು ಈಗಾಗಲೇ ವೀಕ್ಷಣೆ ಮಾಡಿದ್ದು, ಉದ್ಘಾಟನೆಗೆ ಫೆಬ್ರವರಿ 14ರಂದು ಮುಹೂರ್ತ ನಿಗದಿ ಮಾಡಿದ್ದಾರೆ. ಕೊರೊನಾ ಹಿನ್ನಲೆಯಲ್ಲಿ ಉದ್ಘಾಟನೆಯನ್ನು ಸರಳವಾಗಿ ನಡೆಸುವುದಾಗಿ ಹೇಳಿದ್ದಾರೆ.
ಬುಧವಾರ ಪತಿಯ ಸಮಾಧಿಗೆ ಪೂಜೆ ಸಲ್ಲಿಸಿ ಮಾತನಾಡಿದ ಪತ್ನಿ ಕಲಾವತಿ ಅವರು, ನನ್ನ ಪತಿ ಹುತಾತ್ಮ ರಾಗಿ ಫೆಬ್ರವರಿ 14ಕ್ಕೆ 3ವರ್ಷ ತುಂಬುತ್ತಿದೆ. ಇದೇ ವೇಳೆ ಸಮಾಧಿಯನ್ನು ಉದ್ಘಾಟಿಸುವುದಾಗಿ ಶಾಸಕರಾದ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ. ಅವರ ನೆರವಿನಿಂದ ಸಮಾಧಿ ಕೆಲಸ ಪೂರ್ಣಗೊಂಡಿದೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.
ಇನ್ನು ಹುತಾತ್ಮ ಯೋಧ ಗುರುವಿನ ಬಗ್ಗೆ ಹೇಳುವುದಾದರೆ 2019 ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಉಗ್ರಗಾಮಿಗಳ ಬಾಂಬ್ ದಾಳಿಗೆ ಮೃತಪಟ್ಟ ಸಿಆರ್ ಪಿಎಫ್ ನ 40 ಮಂದಿ ಯೋಧರಲ್ಲಿ ಗುರು ಕೂಡ ಒಬ್ಬರಾಗಿದ್ದರು. ಅವರು ಮದ್ದೂರು ತಾಲ್ಲೂಕಿನ ಗುಡಿಗೆರೆಯ ನಿವಾಸಿಯಾಗಿದ್ದರು. ಅವರ ಸಾವಿಗೆ ಇಡೀ ಕನ್ನಡ ನಾಡು ಕಂಬನಿ ಮಿಡಿದಿತ್ತು. ಅದಾದ ನಂತರ ಅವರಿಗೊಂದು ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಬಳಿಯ ಮದ್ದೂರು- ಮಳವಳ್ಳಿ ರಸ್ತೆಯಲ್ಲಿ ಸಮಾಧಿ ಕಟ್ಟುವ ಕನಸು ಶುರುವಾಗಿತ್ತು. ಅದೀಗ ಮೂರು ವರ್ಷದ ಬಳಿಕ ನನಸಾಗುತ್ತಿದೆ.