ಮಂಡ್ಯ: ಜಿಲ್ಲೆಯ ಭಾರತೀನಗರದ ಪಟ್ಟಣದ ರಸ್ತೆಗಳನ್ನು ಅಕ್ರಮಿಸಿಕೊಂಡು ರಸ್ತೆಬದಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರನ್ನು ಪೊಲೀಸರು ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.
ರಸ್ತೆ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವುದರಿಂದ ತೊಂದರೆಯಾಗುತ್ತಿದೆ ಎಂಬ ದೂರುಗಳು ಮೇಲಿಂದ ಮೇಲೆ ಬರುತ್ತಲೇ ಇದ್ದವು. ಈ ಹಿನ್ನಲೆಯಲ್ಲಿ ಬೆಳಗ್ಗೆ ರಸ್ತೆಗಿಳಿದ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಅವರು ರಸ್ತೆ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಜತೆಗೆ ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇಲ್ಲಿನ ಚಾಮ್ ಷುಗರ್ ಕಾರ್ಖಾನೆಗೆ ದಿನನಿತ್ಯ ನೂರಾರು ಎತ್ತಿನ ಗಾಡಿಗಳು ಕಬ್ಬು ತುಂಬಿಕೊಂಡು ಬರುತ್ತವೆ. ಹಲಗೂರು ರಸ್ತೆ ತಿರುವಿನಲ್ಲೆ ರಸ್ತೆಯದ್ದಕ್ಕೂ ಬೈಕ್ಗಳನ್ನು ನಿಲ್ಲಿಸಿರುತ್ತಾರೆ ಇದರಿಂದ ಅಪಘಾತ ನಡೆದಿರುವ ಸಾಕಷ್ಟು ಉದಾಹರಣೆಗಳಿವೆ. ಇದನ್ನು ತಡೆಯಲು ಈ ಕ್ರಮ ಕೈಗೊಂಡಿರುವುದಾಗಿ ಹೇಳಿದರು.
ಎಸ್ ಐ ಮಹದೇವಯ್ಯ ಮಾತನಾಡಿ ಪ್ರತಿ ದಿನ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿದರೂ ಎತ್ತಿನ ಗಾಡಿಯವರು ಅಡ್ಡಾದಿಡ್ಡಿ ಸಂಚರಿಸುತ್ತಾರೆ. ಸಾವಿರಾರು ವಿದ್ಯಾರ್ಥಿಗಳು ಇದೇ ರಸ್ತೆಯಲ್ಲೆ ಒಡಾಡುತ್ತಾರೆ. ಜತೆಗೆ ಆಸ್ಪತ್ರೆಗಳಿದ್ದು ಸಾರ್ವಜನಿಕರ ಓಡಾಟ ಹೆಚ್ಚಿನ ಸಂಖ್ಯೆಯಲ್ಲಿರುತ್ತದೆ. ಹೀಗಿರುವಾಗ ರಸ್ತೆಯ ಪಕ್ಕದಲ್ಲೆ ಫಾಸ್ಟ್ ಫುಡ್, ಗೋಬಿ, ಪಾನಿಪುರಿ, ಹಣ್ಣು ಮಾರಾಟ ಅಂಗಡಿಗಳು ಅಕ್ರಮವಾಗಿ ತಲೆ ಎತ್ತಿದ್ದು, ಇದರಿಂದ ತೊಂದರೆಯಾಗುತ್ತಿತ್ತು. ಹೀಗಾಗಿ ಅಕ್ರಮ ಅಂಗಡಿಗಳನ್ನು ತೆರವುಗೊಳಿಸಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಎ ಎಸ್ಐ ವೆಂಕಟೇಶ್, ರಾಜೇಂದ್ರ ಹಾಗೂ ಸಿಬ್ಬಂದಿ ವಿಷ್ಣುವರ್ಧನ್, ಚೇತನ್ ಅವಿನಾಶ್, ಶ್ರೀಕಾಂತ್, ರವಿಶಂಕರ್ ಹಾಗೂ ಮಹಿಳಾ ಸಿಬ್ಬಂದಿ ಸೌಮ್ಯ,ಲಿಂಗಮಣಿ, ಗಿರಿಜಾ ಎನ್.ಹಳ್ಳಿ ಇನ್ನಿತರರು ಇದ್ದರು.